ADVERTISEMENT

‘ಕ್ರಿಕೆಟ್‌ನಲ್ಲೂ ಧರ್ಮದ ಆಟವೇ?’-ಪ್ರೊ.ಬಿ.ಕೆ.ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 7:29 IST
Last Updated 4 ನವೆಂಬರ್ 2021, 7:29 IST
ಪ್ರೊ. ಬಿ.ಕೆ. ಚಂದ್ರಶೇಖರ್
ಪ್ರೊ. ಬಿ.ಕೆ. ಚಂದ್ರಶೇಖರ್   

ಬೆಂಗಳೂರು: ‘ದುಬೈಯಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟಿ-20 ಪಂದ್ಯದಲ್ಲಿ ಭಾರತದ ಸೋಲಿಗೆ ತಂಡದ ವೇಗಿ ಬೌಲರ್‌ ಶಮಿ ಮೊಹಮ್ಮದ್‌ ಅವರನ್ನು ಹೊಣೆಗಾರರನ್ನಾಗಿಸಿ, ಸಾಮಾಜಿಕ ಜಾಲತಾಣಗಳಲ್ಲಿ ತುಚ್ಛೀಕರಿಸಿ ಭಾರತೀಯ ಪ್ರೇಕ್ಷಕರು ಯಾವುದೇ ಪಾಪಪ್ರಜ್ಞೆ ಇಲ್ಲದೆ ಮತಾಂಧತೆ ಪ್ರದರ್ಶಿಸಿದ್ದಾರೆ. ಕ್ರಿಕೆಟ್‌ನಲ್ಲೂ ʼಧರ್ಮʼದ ಆಟ ಸರಿಯೇ’ ಎಂದುಕೆಪಿಸಿಸಿ ವಕ್ತಾರ ಪ್ರೊ. ಬಿ.ಕೆ. ಚಂದ್ರಶೇಖರ್ ಪ್ರಶ್ನಿಸಿದ್ದಾರೆ.

‘ಅಂತರರಾಷ್ಟ್ರೀಯ ಟೆಸ್ಟ್‌ ಮತ್ತು ಟಿ20 ಕ್ರಿಕೆಟ್‌ ಪಂದ್ಯಗಳ ಆರಂಭಕ್ಕೆ ಮೊದಲು ‘ಮಂಡಿಯೂರಿ ಕುಳಿತು’ ವರ್ಣಭೇದ ವಿರೋಧಿಸುವ ಮಾನವೀಯ ಮೌಲ್ಯದ ಪ್ರತಿಪಾದನೆ ಈಗ ಎಲ್ಲೆಡೆ ಜಾರಿಯಲ್ಲಿದೆ. ಈ ಮಧ್ಯೆ, ಇಂಥ ನಡವಳಿಕೆ ಎಷ್ಟು ಸರಿ’ ಎಂದಿದ್ದಾರೆ.

‘ಅದೇ ಅಭಿಮಾನಿಗಳು ಶಮಿ ಪರ ನಿಂತು ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಒಂಬತ್ತು ತಿಂಗಳ ಮಗಳ ಮೇಲೆ ಅತ್ಯಾಚಾರ ಮಾಡುವ ಪೈಶಾಚಿಕ ಸಂದೇಶ ರವಾನಿಸಿದ್ದಾರೆ. ಒಂದು ಧರ್ಮದವರ ವಿರುದ್ಧ ಈ ರೀತಿಯ ದ್ವೇಷದ ವಾತಾವರಣ ಹುಟ್ಟು ಹಾಕಿರುವುದು ಬಿಜೆಪಿ ಹಾಗೂ ಸಂಘ ಪರಿವಾರ ಸಂಘಟನೆಗಳೇ ಅಲ್ಲವೇ. ಅವರದೇ ಘೋಷ ವಾಕ್ಯದ ಪ್ರಕಾರ ಅವರು ‘ನಮ್ಮ ಸಂಸ್ಕೃತಿಯ ರಕ್ಷಕರು’’ ಎಂದು ಬಿಕೆಸಿ ವ್ಯಂಗ್ಯವಾಡಿದ್ದಾರೆ.

ADVERTISEMENT

‘ಒಂಬತ್ತು ತಿಂಗಳ ಹೆಣ್ಣು ಕೂಸಿನ ವಿರುದ್ಧ ಈ ರೀತಿ ಆಲೋಚಿಸುವುದು ಭಾರತೀಯ ಸಂಸ್ಕೃತಿಯೇ. ಒಲಿಂಪಿಕ್ಸ್, ಕ್ರಿಕೆಟ್‌ ಮತ್ತಿತರ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡ ಜಯ ಗಳಿಸಿದಾಗ ಎಲ್ಲರಿಗಿಂತ ಮೊದಲು ಅಭಿನಂದಿಸುವ, ಚಹಾ ಕೂಟಕ್ಕೆ ಆಹ್ವಾನಿಸುವ ಪ್ರಧಾನಿ ಮೋದಿ ಈ ಕುರಿತು ಮೌನವಾಗಿರುವುದು ಏಕೆ’ ಎಂದೂ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.