ADVERTISEMENT

ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಸಾಲದ ಸುಳಿಗೆ ತಳ್ಳುತ್ತಿದೆ: ಆರ್‌. ಅಶೋಕ ಕಿಡಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 7:45 IST
Last Updated 20 ಆಗಸ್ಟ್ 2025, 7:45 IST
<div class="paragraphs"><p> ಆರ್‌. ಅಶೋಕ</p></div>

ಆರ್‌. ಅಶೋಕ

   

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ದಿವಾಳಿತನ ಮತ್ತು ಸಾಲದ ಸುಳಿಗೆ ತಳ್ಳುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಕಿಡಿಕಾರಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಸ್ವಯಂಘೋಷಿತ ಆರ್ಥಿಕ ತಜ್ಞ, ಸಿಎಂ ಸಿದ್ದರಾಮಯ್ಯ ಅವರ ದುರಾಡಳಿತ ಮತ್ತು ತಪ್ಪು ಹಣಕಾಸಿನ ನಿರ್ವಹಣೆಯಿಂದ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಯಾವ ಅಧೋಗತಿಗೆ ತಲುಪುತ್ತಿದೆ ಎನ್ನುವುದನ್ನು ಮಹಾಲೇಖಪಾಲರ (ಸಿಎಜಿ) ವರದಿ ಎಳೆಎಳೆಯಾಗಿ ಬಿಚ್ಚಿಟ್ಟಿದೆ ಎಂದಿದ್ದಾರೆ.

ADVERTISEMENT

ವರದಿಯ ಪ್ರಮುಖಾಂಶಗಳನ್ನು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ವಿತ್ತೀಯ ಕೊರತೆ ಭಾರಿ ಏರಿಕೆ

2022–23ರಲ್ಲಿ ₹46,623 ಕೋಟಿ ಇದ್ದ ವಿತ್ತೀಯ ಕೊರತೆ, 2023–24ರಲ್ಲಿ ₹65,522 ಕೋಟಿಗೆ ಏರಿದೆ. ಏರುತ್ತಿರುವ ಈ ವಿತ್ತೀಯ ಕೊರತೆ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಅವೈಜ್ಞಾನಿಕ ಗ್ಯಾರಂಟಿಗಳು ಕರ್ನಾಟಕವನ್ನು ಹೇಗೆ ದಿವಾಳಿತನದತ್ತ ತಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಸಾಲದ ಕುಣಿಕೆ ಬಿಗಿಯಾಗುತ್ತಿದೆ

ಕಾಂಗ್ರೆಸ್ ಸರ್ಕಾರವು ಮಾರುಕಟ್ಟೆಯಿಂದ ₹63,000 ಕೋಟಿ ಸಾಲ ಪಡೆದಿದ್ದು, ಇದು ಕಳೆದ ವರ್ಷಕ್ಕಿಂತ ₹37,000 ಕೋಟಿ ಹೆಚ್ಚು. ಇದು ಮುಂದಿನ ತಲೆಮಾರಿನ ಮೇಲೆ ಭಾರಿ ಬಡ್ಡಿ ಹೊರೆ ಹಾಕುತ್ತದೆ ಎಂದು ಸಿಎಜಿ ವರದಿ ಎಚ್ಚರಿಕೆ ನೀಡಿದೆ.

ಮೂಲಸೌಕರ್ಯ ಹೂಡಿಕೆ ಕುಸಿತ

ರಸ್ತೆ, ನೀರಾವರಿ, ಮೂಲಸೌಕರ್ಯ ಹೂಡಿಕೆಯಲ್ಲಿ ₹5,229 ಕೋಟಿ ಕಡಿತವಾಗಿದ್ದು, ಇದರಿಂದ ಅಪೂರ್ಣ ಯೋಜನೆಗಳು ಶೇ 68ರಷ್ಟು ಏರಿಕೆ ಕಂಡಿವೆ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ. ರಾಜ್ಯದ ಭವಿಷ್ಯವೇ ಅಪಾಯದಲ್ಲಿದೆ ಎಂದು ಎಚ್ಚರಿಕೆ ನೀಡಿದೆ.

ಮತ್ತೊಮ್ಮೆ ಆದಾಯ ಕೊರತೆಯ ಕಡೆಗೆ

ಹಿಂದಿನ ಬಿಜೆಪಿ ಸರ್ಕಾರದ ಸಮರ್ಪಕ ಆಡಳಿತ ಮತ್ತು ಹಣಕಾಸಿನ ನಿರ್ವಹಣೆಯಿಂದ ಕೋವಿಡ್ ನಂತರ 2022–23ರಲ್ಲಿ ಚೇತರಿಸಿಕೊಂಡಿದ್ದ ಕರ್ನಾಟಕ, 2023–24ರಲ್ಲಿ ಮತ್ತೊಮ್ಮೆ ₹9,271 ಕೋಟಿ ಆದಾಯ ಕೊರತೆಯ ಸುಳಿಗೆ ಸಿಕ್ಕಿದೆ. ಇದು ಕಾಂಗ್ರೆಸ್‌ನ ಅವೈಜ್ಞಾನಿಕ ಗ್ಯಾರಂಟಿಗಳು ಮತ್ತು ಹಣಕಾಸಿನ ತಪ್ಪು ನಿರ್ವಹಣೆಯ ನೇರ ಪರಿಣಾಮ.

ಅವೈಜ್ಞಾನಿಕ ಗ್ಯಾರಂಟಿಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತ

ಒಂದು ವರ್ಷದಲ್ಲಿ 5 ಗ್ಯಾರಂಟಿ ಯೋಜನೆಗಳಿಗೆ ₹36,538 ಕೋಟಿ, ಅಂದರೆ ರಾಜ್ಯದ ಒಟ್ಟು ಆದಾಯ ವೆಚ್ಚದ ಶೇ 15 ರಷ್ಟು ವ್ಯಯ ಮಾಡಲಾಗಿದ್ದು, ಇದರ ಜೊತೆಗೆ, ₹60,774 ಕೋಟಿ ಸಬ್ಸಿಡಿ ಬಿಲ್ ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ ಎಂದು ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಆವರಿಸಿರುವ ಅಭಿವೃದ್ಧಿ ಶೂನ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

ಸಿಎಜಿ ತೀಕ್ಷ್ಣ ಎಚ್ಚರಿಕೆ

ವಿತ್ತೀಯ ಕೊರತೆಯನ್ನು ತಕ್ಷಣ ನಿಯಂತ್ರಿಸದಿದ್ದರೆ, ರಾಜ್ಯದ ಆರ್ಥಿಕತೆ ಇನ್ನಷ್ಟು ಹಿಂದುಳಿಯುತ್ತದೆ, ಸಾಲದ ಒತ್ತಡ ಹೆಚ್ಚುತ್ತದೆ, ಅಭಿವೃದ್ಧಿ ಕುಸಿಯುತ್ತದೆ. ಇಂದಿನ ಗ್ಯಾರಂಟಿ ಯೋಜನೆಗಳು ಭವಿಷ್ಯದ ಕಗ್ಗತ್ತಲಿನ ಗ್ಯಾರಂಟಿ ಎಂದು ಸಿಎಜಿ ಎಚ್ಚರಿಸಿದೆ.

ಇದು ಸ್ವಯಂ ಘೋಷಿತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಅವರ ಕಾರ್ಯವೈಖರಿ. ಕಾಂಗ್ರೆಸ್ ಸರ್ಕಾರದ 'ಕರ್ನಾಟಕ ಮಾಡೆಲ್'. ನೆನಪಿರಲಿ, ಯಾರು ಎಷ್ಟು ಬಜೆಟ್ ಗಳನ್ನ ಮಂಡಿಸಿ ದಾಖಲೆ ಸೃಷ್ಟಿಸಿದ್ದಾರೆ ಎನ್ನುವುದಕ್ಕಿಂತ ಹೆಚ್ಚಾಗಿ, ಆ ಬಜೆಟ್‌ಗಳು ರಾಜ್ಯದ ಅಭಿವೃದ್ಧಿಗೆ, ದೀರ್ಘಕಾಲೀನ ಬೆಳವಣಿಗೆಗೆ ಎಷ್ಟು ಕೊಡುಗೆ ಕೊಟ್ಟಿದೆ ಎನ್ನುವುದನ್ನು ಇತಿಹಾಸ ದಾಖಲಿಸಿ ನೆನಪಿಟ್ಟುಕೊಳ್ಳಿದೆ. ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರವು ಇಂದಿನ ಕ್ಷಣಿಕ ರಾಜಕೀಯ ಲಾಭಕ್ಕಾಗಿ, ನಾಳಿನ ಕರ್ನಾಟಕದ ಭವಿಷ್ಯ ಬಲಿ ಕೊಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇದೇ ಪರಿಸ್ಥಿತಿ ಮುಂದುವರಿದರೆ ಕರ್ನಾಟಕ ಆರ್ಥಿಕ ದಿವಾಳಿತನದಿಂದ ಚೇತರಿಸಿಕೊಳ್ಳಲಾಗದ ಸಾಲದ ಸುಳಿಗೆ ಸಿಲುಕಿ ಶಾಶ್ವತವಾದ ಅಭಿವೃದ್ಧಿ ಶೂನ್ಯತೆ ಎದುರಿಸುವುದು ಮಾತ್ರ ಗ್ಯಾರಂಟಿ ಎಂದೂ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.