ADVERTISEMENT

ಎಬಿವಿಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಪರ ಸಂದೇಶ ಎಂಬ ದೂರು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 8:06 IST
Last Updated 6 ಮಾರ್ಚ್ 2019, 8:06 IST
   

ವಿಜಯಪುರ: ‘ಪಾಕಿಸ್ತಾನ ಪರ ಒಲವು ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಹಾಕುತ್ತಿದ್ದಾರೆ’ ಎಂದು ದೂರಿ, ಶನಿವಾರ ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ವಿದ್ಯಾಲಯದ ಮುಂಭಾಗ ಪ್ರತಿಭಟನೆ ನಡೆಸಿದ್ದ, ಎಬಿವಿಪಿ ಕಾರ್ಯಕರ್ತರ ಗುಂಪಿನ ವಿರುದ್ಧ, ಇಲ್ಲಿನ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ ತಿಳಿಸಿದರು.

ಎಬಿವಿಪಿ ಕಾರ್ಯಕರ್ತರು ತಮ್ಮ ವಿರುದ್ಧ ಕಾಲೇಜಿನ ಮುಂಭಾಗ ಪ್ರತಿಭಟಿಸಿದ್ದ ಸಂದರ್ಭ, ಮಂಡಿಯೂರಿ ಕ್ಷಮೆ ಕೋರಿದ್ದ ಪ್ರಾಧ್ಯಾಪಕ ಸಂದೀಪ ವಠಾರ, ಈ ಬೆಳವಣಿಗೆ ಬಳಿಕ ಗುಂಪಿನ ವಿರುದ್ಧವೇ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಎಸ್‌ಪಿ ‘ಪ್ರಜಾವಾಣಿ’ಗೆ ಹೇಳಿದರು.

‘ಗುಂಪಿನ ವಿರುದ್ಧವಷ್ಟೇ ದೂರು ದಾಖಲಾಗಿದೆ. ಯಾರೊಬ್ಬರ ಹೆಸರು ಉಲ್ಲೇಖಿಸಿಲ್ಲ. ತನಿಖೆ ನಡೆದಿದೆ. ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿರುವುದು ತಪ್ಪು. ನಮ್ಮ ಗಮನಕ್ಕೆ ತಂದಿದ್ದರೆ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದೆವು’ ಎಂದು ನಿಕ್ಕಂ ತಿಳಿಸಿದರು.

ADVERTISEMENT

ಗೃಹ ಸಚಿವ ಎಂ.ಬಿ.ಪಾಟೀಲ ಅಧ್ಯಕ್ಷರಿರುವ ಕಾಲೇಜಿನ ಆಡಳಿತ ಮಂಡಳಿ ಸಹ, ಪ್ರಾಧ್ಯಾಪಕನ ವಿರುದ್ಧ ತನಿಖೆಗೆ ಸಮಿತಿಯೊಂದನ್ನು ರಚಿಸಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆದು, ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.