ಬೆಂಗಳೂರು: ‘ಸರ್ಕಾರದಿಂದ ಬರುತ್ತಿದ್ದ 5 ಕಿಲೋ ಅಕ್ಕಿಯನ್ನು 2 ಕಿಲೋಗೆ ಇಳಿಸಿರುವುದನ್ನು ಪ್ರಶ್ನಿಸಿದ ಬಡ ರೈತನಿಗೆ, ‘ಸತ್ತರೆ ಸಾಯಿ’ ಎಂದು ಹೇಳಿದ ಆಹಾರ ಸಚಿವ ಉಮೇಶ ಕತ್ತಿ ಅವರನ್ನು ಸಚಿವ ಸ್ಥಾನದಿಂದ ತಕ್ಷಣ ವಜಾಗೊಳಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಕ್ಕಿ ಕೇಳಿದಾಗ ಈ ರೀತಿ ಹೇಳುವುದಾರೆ ಮಂತ್ರಿಯಾಗಿ ಏಕಿರಬೇಕು. ಕತ್ತಿ ಅವರದು ಉಡಾಫೆ ಮಾತಲ್ಲ, ಹೊಣೆಗಾರಿಕೆ ಪ್ರಶ್ನೆ’ ಎಂದರು.
‘ಕತ್ತಿ ಕ್ಷಮೆ ಕೇಳುವುದು ಬೇಡ. ಕತ್ತಿ ಹೇಳಿಕೆಗೆ ಮುಖ್ಯಮಂತ್ರಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ಬಿಜೆಪಿ ಮುಖಂಡರು ಉತ್ತರಿಸಬೇಕು’ ಎಂದೂ ಆಗ್ರಹಿಸಿದರು.
‘ಪಡಿತರ ಚೀಟಿದಾರರಿಗೆ 2 ಕಿಲೋ ಬದಲು 10 ಕಿಲೋ ಅಕ್ಕಿ ನೀಡಬೇಕು ಎಂದು ಆಗ್ರಹಿಸಿ ಪತ್ರ ಚಳವಳಿ ಮೂಲಕ ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇವೆ. ಪಕ್ಷದ ಎಲ್ಲ ಜಿಲ್ಲೆಗಳ ಅಧ್ಯಕ್ಷರು ಪದಾಧಿಕಾರಿಗಳು, ಕಾರ್ಯಕರ್ತರು ಇದ
ರಲ್ಲಿ ಭಾಗವಹಿಸಬೇಕು. ಸಾರ್ವಜನಿಕರು ಕೂಡ ಚಳವಳಿಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.
ಸರ್ಕಾರವೇ ಪೂರೈಸಲಿ: ‘ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವೇ ರೆಮ್ಡಿಸಿವಿರ್ ಔಷಧ ಮತ್ತು ಆಕ್ಸಿಜನ್ ಪೂರೈಸಲಿ. ಲಸಿಕೆ ಪಡೆಯಲು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಬಡವರು, ಅವಿದ್ಯಾವಂತರು, ಮುಗ್ಧರಿಗೆ ಸಾಧ್ಯವಿಲ್ಲ. ಹೀಗಾಗಿ, ಈ ವ್ಯವಸ್ಥೆ ತಪ್ಪಿಸಿ, ಮನೆ ಬಾಗಿಲಿಗೆ ಹೋಗಿ ಲಸಿಕೆ ನೀಡಬೇಕು’ ಎಂದರು.
‘ಕಳೆದ ವರ್ಷ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗಳಿಗೆ ಬಾಕಿ ಉಳಿಸಿಕೊಂಡಿರುವ ಹಣವನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು’ ಎಂದೂ ಶಿವಕುಮಾರ್ ಆಗ್ರಹಿಸಿದರು. ಅದಕ್ಕೂ ಮೊದಲು ಪಕ್ಷದ ಜಿಲ್ಲಾ ಅಧ್ಯಕ್ಷರು ಮತ್ತು ಶಾಸಕರ ಜೊತೆ ಸಭೆ ನಡೆಸಿದರು.
ಪ್ರತಿಭಟನೆ: ಉಮೇಶ ಕತ್ತಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ಭವನದ ಎದುರು ಪ್ರತಿಭಟನೆ ನಡೆಯಿತು. ಕತ್ತಿ ಅವರ ಅಣಕು ಶವಯಾತ್ರೆ ನಡೆಸಿದ ಕಾರ್ಯಕರ್ತರು ಧಿಕ್ಕಾರ ಕೂಗಿದರು. ಶಿವಕುಮಾರ್ ಹಾಗೂ ಪಕ್ಷದ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.