ADVERTISEMENT

ಬಿಎಸ್‌ವೈ ಮುಖ್ಯಮಂತ್ರಿ ಎಂದು ಘೋಷಿಸಲಿ: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 21:53 IST
Last Updated 18 ಆಗಸ್ಟ್ 2022, 21:53 IST
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ   

ಬೆಂಗಳೂರು: ‘ಯಡಿಯೂರಪ್ಪ ಅವರ ಮೇಲೆ ಬಿಜೆಪಿಯವರಿಗೆ ಪ್ರೀತಿ ಇದ್ದರೆ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಲಿ’ ಎಂದು ಬಿಜೆಪಿ ನಾಯಕರಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಸವಾಲು ಹಾಕಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘75 ವರ್ಷ ತುಂಬಿದ ಕಾರಣಕ್ಕೆ ಅವರನ್ನು ಮುಖ್ಯ ಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದರು. ಅವರ ಬಗ್ಗೆ ಗೌರವ ಇದ್ದಿದ್ದರೆ ಆ ಸ್ಥಾನದಿಂದ ಯಾಕೆ ಇಳಿಸುತ್ತಿದ್ದರು? ಯಡಿಯೂರಪ್ಪ ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ. ಮುಖ್ಯಮಂತ್ರಿ ಆಗುವ ಅವಕಾಶವೂ ಇಲ್ಲ’ ಎಂದರು.

‘ಯಡಿಯೂರಪ್ಪ ಹಿರಿಯರು. ಈಗ ಅವರಿಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ಕೊಟ್ಟಿದ್ದಾರೆ. ಅವರ ಮೇಲೆ ಬಿಜೆಪಿಯವರಿಗೆ ಈಗ ವಿಶೇಷ ಪ್ರೀತಿ ಬಂದಿದೆ’ ಎಂದು ವ್ಯಂಗ್ಯವಾಡಿದ ಪಾಟೀಲ, ‘ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಹೀಗಾಗಿ, ಆ ಪಕ್ಷದವರಿಗೆ ಯಡಿಯೂರಪ್ಪ ಬಗ್ಗೆ ಇನ್ನಿಲ್ಲದ‌ ಪ್ರೀತಿ ಬಂದಿದೆ’ ಎಂದೂ ಅಭಿಪ್ರಾಯಪಟ್ಟರು.

ADVERTISEMENT

‘ಸಿದ್ಧರಾಮೋತ್ಸವದಿಂದ ಬಿಜೆಪಿ ನೆಲ ಕಚ್ಚಿದೆ. ಬಿಜೆಪಿ ಐಸಿಯುನಲ್ಲಿದೆ. ಹೀಗಾಗಿ, ಯಡಿಯೂರಪ್ಪ ಮೇಲೆ ಪ್ರೀತಿ ತೋರಿಸಿದ್ದಾರೆ ಅಷ್ಟೇ. ಮುಂದಿನ ಚುನಾವಣೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ನೇಮಕ‌ ಮಾಡಿದ್ದಾರೆ’ ಎಂದರು.

ಲಿಂಗಾಯತ ಮತ ಸೆಳೆಯಲು ಅಲ್ಲ: ‘ಇದೇ 19ರಿಂದ ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಹಾಗೆಂದು, ಲಿಂಗಾಯತ ಮತ ಸೆಳೆಯಲು ಈ ಪ್ರವಾಸ ಮಾಡುತ್ತಿಲ್ಲ. ನಮಗೆ ಎಲ್ಲ ಜಾತಿಯವರೂ ಬಹಳ ಮುಖ್ಯ. ಪ್ರವಾಸದ ಸಂದರ್ಭದಲ್ಲಿ ಎಲ್ಲ ಸಮುದಾಯಗಳ ಮಠಗಳಿಗೂ ಭೇಟಿ ನೀಡುತ್ತೇನೆ. ಲಿಂಗಾಯತ ಸಮುದಾಯದವರು ಮೂರ್ಖರಲ್ಲ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.