ADVERTISEMENT

ಕೊರೊನಾ: ಸಿದ್ಧತೆ ‘ಗೋವಿಂದಾ’

ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷಗಳ ತೀವ್ರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 19:45 IST
Last Updated 24 ಮಾರ್ಚ್ 2020, 19:45 IST

ಬೆಂಗಳೂರು: ಕೊರೊನಾದಿಂದ ರಾಜ್ಯದಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ಸರ್ಕಾರ ಮಾಡಿಕೊಂಡಿರುವ ಸಿದ್ಧತೆ ಏನೇನೂ ಸಾಲದು, ಪರಿಸ್ಥಿತಿ ನೋಡಿದರೆ ಕತೆ ಗೋವಿಂದಾ' ಎಂದು ಸರ್ಕಾರದ ನಡೆಯನ್ನು ವಿಧಾನಪರಿಷತ್‌ನಲ್ಲಿ ಹೀಗಳೆದ ವಿರೋಧ ಪಕ್ಷದ ಸದಸ್ಯರು ಮಂಗಳವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಮಾಡಿಕೊಂಡಿರುವ ವಿವರ ನೀಡಿದರು. ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರೂ ಪೂರಕ ಮಾಹಿತಿ ನೀಡಿದರು. ಆಗ ಕಾಂಗ್ರೆಸ್ಸಿನ ಸಿ.ಎಂ. ಇಬ್ರಾಹಿಂ, ’ಇದಕ್ಕೆಲ್ಲ ಎಷ್ಟು ದುಡ್ಡು ಇಟ್ಟಿದ್ದೀರಿ?, ಖಾಸಗಿಯವರು ಉಚಿತವಾಗಿ ಚಿಕಿತ್ಸೆ ನೀಡುತ್ತಾರೆಯೇ' ಎಂದು ಪ್ರಶ್ನಿಸಿದರು.

'ರಾಜ್ಯಕ್ಕೆ 20 ಸಾವಿರ ವೆಂಟಿಲೇಟರ್‌ಗಳ ಅಗತ್ಯ ಬೀಳಬಹುದು ಎಂದು ತಜ್ಞರು ಹೇಳುತ್ತಿದ್ದರೂ, ಸರ್ಕಾರ ಕೇವಲ 2 ಸಾವಿರ ವೆಂಟಿಲೇಟರ್‌ಗಷ್ಟೇ ವ್ಯವಸ್ಥೆ ಮಾಡುತ್ತಿದೆ' ಎಂದು ವಿರೋಧ ಪಕ್ಷದ ನಾಯಕ ಎಸ್. ಆರ್. ಪಾಟೀಲ ಆಕ್ಷೇಪಿಸಿದರು.

ADVERTISEMENT

'ರಾಜ್ಯದಲ್ಲಿ ಕೋವಿಡ್-19 ಪೀಡಿತರಾದ ಯಾರೊಬ್ಬರಿಗೂ ಇದುವರೆಗೆ ವೆಂಟಿಲೇಟರ್ ಬಳಸುವ ಪ್ರಮೇಯ ಬಂದಿಲ್ಲ' ಎಂದು ಅಶ್ವತ್ಥನಾರಾಯಣ ಸ್ಪಷ್ಟನೆ ನೀಡಿದರು. ’ಸರ್ಕಾರ ಈಗಲೇ ಕೊರೊನಾಗೆ ಶರಣಾಗಿದೆ‘ ಎಂದು ಪಾಟೀಲ ದೂರಿದರು. ಇತರ ಸದಸ್ಯರು 'ಗೋವಿಂದಾ ಗೋವಿಂದಾ' ಎಂದು ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.