ಹುಬ್ಬಳ್ಳಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರ ಜೊತೆ ಡಿನ್ನರ್ ಪಾರ್ಟಿ ನಡೆಸಿ, ಇಲಾಖೆಯಿಂದ ಕಮಿಷನ್ ಫಿಕ್ಸ್ ಮಾಡಿ, ಬಿಹಾರ ಚುನಾವಣೆಗೆ ನೀಡುವಂತೆ ಸೂಚಿಸಿದ್ದಾರೆ’ ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.
ದೇಶದಲ್ಲಿಯೇ ಅತಿಹೆಚ್ಚು ಆದಾಯವಿರುವ ರಾಜ್ಯ ಕರ್ನಾಟಕವಾಗಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎಟಿಎಂ ಇದ್ದಂತೆ. ಪ್ರತಿಯೊಂದು ಇಲಾಖೆಯಿಂದ ಇಂತಿಷ್ಟು ಕಮಿಷನ್ ನೀಡಬೇಕೆಂದು ಸಚಿವರಿಗೆ ಹೇಳಿದ್ದಾರೆ’ ಎಂದು ಸೋಮವಾರ ಮಾಧ್ಯಮದವರಿಗೆ ತಿಳಿಸಿದರು.
‘ಪ್ರತಿಯೊಂದು ಇಲಾಖೆಯಲ್ಲೂ ಕಮಿಷನ್ ವ್ಯವಹಾರ ಆರಂಭವಾಗಿದೆ. ಕಟ್ಟಡ ನಿರ್ಮಾಣಕ್ಕೆ ಅನುಮತಿ ಸೇರಿದಂತೆ ಇತರೆ ಪ್ರಮಾಣಪತ್ರ ಪಡೆಯಬೇಕೆಂದರೆ ಸರ್ಕಾರದ ಶುಲ್ಕದ ಜೊತೆಗೆ, ಭ್ರಷ್ಟಾಚಾರದ ಶುಲ್ಕ ನೀಡಲೇಬೇಕು. ಪ್ರತಿಯೊಂದಕ್ಕೂ ಒಂದೊಂದು ದರ ನಿಗದಿಪಡಿಸಲಾಗಿದೆ’ ಎಂದು ಆರೋಪಿಸಿದರು.
‘ಆರ್ಎಸ್ಎಸ್ ಪಥಸಂಚಲನದಲ್ಲಿ ಪಾಲ್ಗೊಂಡಿದ್ದಾರೆ ಎಂದು ಲಿಂಗಸೂರು ಗ್ರಾ.ಪಂ.ನ ಪಿಡಿಒ ಅವರನ್ನು ಅಮಾನತು ಮಾಡಿದ್ದು ಖಂಡನೀಯ. ಸರ್ಕಾರದ ಸುತ್ತೋಲೆ ಇಲ್ಲದೆ ಕಾನೂನು ಬಾಹಿರವಾಗಿ ಸರ್ಕಾರಿ ನೌಕರರನ್ನು ಅಮಾನತು ಮಾಡಲಾಗಿದೆ. ತಕ್ಷಣ ಅಮಾನತು ಆದೇಶ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
‘2013ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಶಾಲಾ ಆವರಣದಲ್ಲಿ ಖಾಸಗಿ ಕಾರ್ಯಕ್ರಮ ನಡೆಸಬಾರದು ಎಂದು ಸುತ್ತೋಲೆ ಹೊರಡಿಸಿಲ್ಲ. ಖಾಸಗಿ ಸಂಸ್ಥೆಯೊಂದು ಕಾರ್ಯಕ್ರಮ ನಡೆಸಲು ಅನುಮತಿ ಕೇಳಿದ ಸಂದರ್ಭ, ಶಿಕ್ಷಣ ಇಲಾಖೆಯು ಅದರ ಶಿಫಾರಸ್ಸಿನ ಮೇರೆಗೆ ಅನುಮತಿ ನೀಡುವಂತಿಲ್ಲ ಎಂದು ಹೇಳಿತ್ತು. ಅದು ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಣಯವಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.