ADVERTISEMENT

ಮಕ್ಕಳಲ್ಲಿ ಉಳಿತಾಯದ ಬಗ್ಗೆ ಜಾಗೃತಿ ಮೂಡಿಸಲು ಅಂಚೆ ‘ಮಕ್ಕಳ ಹುಂಡಿ’

ಅಂಚೆ ಕಚೇರಿಯಿಂದ ಜಾಗೃತಿ ಅಭಿಯಾನ l ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್ ಸಹಯೋಗ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 19:35 IST
Last Updated 10 ಸೆಪ್ಟೆಂಬರ್ 2022, 19:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಶಾಲಾ ಮಕ್ಕಳಲ್ಲಿ ಉಳಿತಾಯದ ಮನೋಭಾವ ಜಾಗೃತಗೊಳಿಸಲು ಮುಂದಾಗಿರುವ ಭಾರತೀಯ ಅಂಚೆ ಇಲಾಖೆ ಮೊದಲ ಹಂತದಲ್ಲಿ ಬೆಂಗಳೂರು ನಗರದ ಆಯ್ದ 10 ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ‘ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌’ ಬಳಗ ಈ ಅಭಿಯಾನಕ್ಕೆ ಕೈಜೋಡಿಸಿದೆ.

ಭಾರತೀಯ ಅಂಚೆ ಇಲಾಖೆ ತನ್ನ ಎಲ್ಲ ಅಂಚೆ ಕಚೇರಿಗಳನ್ನೂ ಕೋರ್‌ ಬ್ಯಾಂಕಿಂಗ್‌ ಸರ್ವೀಸ್‌ (ಸಿಬಿಎಸ್‌) ಅಥವಾ ಕೇಂದ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸೇರಿಸಿಕೊಳ್ಳುವ ಅತ್ಯುನ್ನತ ಸಾಧನೆ ಮಾಡಿದೆ. ವಿಶ್ವದ ಅತಿದೊಡ್ಡ ಆರ್ಥಿಕ ಸೇವಾ ಜಾಲವನ್ನು ಹೊಂದಿರುವ ಅಂಚೆ ಇಲಾಖೆ ಜನರಿಗೆ ಹತ್ತು ಹಲವು ಸೇವೆಗಳನ್ನು ನೀಡುತ್ತಿದೆ.

ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ 2011–2016ರ ಅವಧಿಯಲ್ಲಿ ಮಹಿಳೆಯರು ಬ್ಯಾಂಕ್ ಖಾತೆ ತೆರೆಯುವ ಪ್ರಮಾಣ ಶೇ 9ರಷ್ಟು ಸ್ಥಗಿತಗೊಂಡಿತ್ತು. ಹೀಗಾಗಿ, ಮಹಿಳೆಯರು ತಮ್ಮ ಜೀವನ ನಿರ್ವಹಣೆಯ ಮೇಲೆ ಸ್ವಯಂ ನಿಯಂತ್ರಣ ಸಾಧಿಸಲು ಕಷ್ಟವಾಗುತ್ತಿತ್ತು. ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಅಂಚೆ ಇಲಾಖೆ ಖಾತೆಗಳನ್ನು ತೆರೆಯಲು ಮಹಿಳೆಯರನ್ನು ಪ್ರೋತ್ಸಾಹಿಸುವ ಮೂಲಕ ಸ್ತ್ರೀ ಸಬಲೀಕರಣಕ್ಕೆ ಒತ್ತು ನೀಡಿದೆ. ಸುಕನ್ಯಾ ಸಮೃದ್ಧಿ ಮೂಲಕ ಹೆಣ್ಣು ಮಕ್ಕಳಿಗೆ ಠೇವಣಿ ಯೋಜನೆ ಜಾರಿಗೆ ತಂದಿದೆ. ವರ್ಷಕ್ಕೆ ಗರಿಷ್ಠ ₹1.5 ಲಕ್ಷ ಠೇವಣಿ ಇಡಬಹುದು. ಅದಕ್ಕೆ ಶೇ 7.6 ಬಡ್ಡಿ ನೀಡಲಾಗುತ್ತಿದೆ.

ADVERTISEMENT

ಈಗ ಶಾಲಾ ಮಕ್ಕಳಿಗೂ ಖಾತೆ ತೆರೆದು ಬಾಲ್ಯದಿಂದಲೇ ಉಳಿತಾಯ ಮಾಡುವುದನ್ನು ರೂಢಿಸಲು, ಉಳಿತಾಯದಿಂದ ಭವಿಷ್ಯದಲ್ಲಿ ಸಿಗುವ ಪ್ರಯೋಜನ ಕುರಿತು ಮಾಹಿತಿ ನೀಡಲು ಮುಂದಾಗಿದೆ.

10 ವರ್ಷದ ಒಳಗಿನ ಶಾಲಾ ಮಕ್ಕಳು ತಮ್ಮದೇ ಖಾತೆ ತೆರೆದು ಪೋಷಕರು ನೀಡುವ ಹಣವನ್ನು ಖಾತೆಗೆ ಜಮೆ ಮಾಡಬಹುದು. ಮೊಬೈಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಅಗತ್ಯವಿದ್ದಾಗ ಆನ್‌ಲೈನ್‌ ಮೂಲಕ ಖರ್ಚು ಮಾಡಬಹುದು. 18 ವರ್ಷಗಳ ನಂತರ ಸ್ವತಂತ್ರವಾಗಿ ತಮ್ಮ ಖಾತೆಯನ್ನು ನಿರ್ವಹಣೆ ಮಾಡಬಹುದು. ಮೊದಲು ಬೆಂಗಳೂರು ನಗರದಿಂದ ಆರಂಭಿಸಿ, ನಂತರ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗುವುದು ಎನ್ನುತ್ತಾರೆ ಮುಖ್ಯಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌.ರಾಜೇಂದ್ರಕುಮಾರ್.

ಅಂಚೆಚೀಟಿ ಸಂಗ್ರಹದ ಹವ್ಯಾಸ: ಶಾಲಾ ಮಕ್ಕಳಲ್ಲಿ ಅಂಚೆಚೀಟಿ ಸಂಗ್ರಹದ ಹವ್ಯಾಸ ಮೂಡಿಸಲು ಇಲಾಖೆ ಶ್ರಮಿಸುತ್ತಿದೆ. ಪ್ರತಿ ಅಂಚೆ ಚೀಟಿಯೂ ಹೊಂದಿರುವ ಭಾಷೆ, ದೇಶ, ನಮೂದಿಸಿದ ಕಾಲಘಟ್ಟ, ಮೌಲ್ಯ, ಇತಿಹಾಸ, ಆ ಪ್ರದೇಶದ ಸಂಸ್ಕೃತಿ, ಕಲೆ, ರಾಜಕೀಯ, ವಿಶೇಷ ಘಟನಾವಳಿಗಳ ಅರಿವು ಮೂಡಿಸುತ್ತದೆ. ಹಾಗಾಗಿ, ಅಂಚೆಚೀಟಿ ಸಂಗ್ರಹ ಅಧ್ಯಯನ ಯೋಗ್ಯವೂ ಆಗಿದೆ ಎನ್ನುತ್ತಾರೆ ರಾಜೇಂದ್ರಕುಮಾರ್.

ಸ್ವಾತಂತ್ರ್ಯೋತ್ಸವದ ಅಮೃತ ಸೇವೆ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ ಅಂಚೆ ಇಲಾಖೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸುವ 100ಕ್ಕೂ ಹೆಚ್ಚು ವಿಶೇಷ ಕವರ್ ಬಿಡುಗಡೆ ಮಾಡಿದೆ. ರಾಣಿ ಅಬ್ಬಕ್ಕ, ಕಾರ್ನಾಡ್‌ ಸದಾಶಿವರಾವ್, ನೀಲಕಂಠಯ್ಯ, ಕಡಿದಾಳ್‌ ಮಂಜಪ್ಪ ಸೇರಿದಂತೆ ರಾಜ್ಯದ ಹಲವರನ್ನು ಸ್ಮರಿಸಲಾಗಿದೆ. ಹರ್‌ ಘರ್‌ ತಿರಂಗಾ ಅಂಗವಾಗಿ ರಾಜ್ಯದ ಅಂಚೆ ಕಚೇರಿಗಳು 10 ಲಕ್ಷ ಧ್ವಜ ಮಾರಾಟ ಮಾಡಿವೆ.

ಶಾಲಾ ಅಂಗಳದಲ್ಲೇ ಆಧಾರ್

ಅಂಚೆ ಇಲಾಖೆಯ ಸಿಬ್ಬಂದಿ ಶಾಲೆಗಳಿಗೇ ತೆರಳಿ ಆಧಾರ್ ಸೇವೆ ಒದಗಿಸುವ ಕೆಲಸವನ್ನು ಅಂಚೆ ಇಲಾಖೆ ಮಾಡುತ್ತಿದೆ. ಮಕ್ಕಳಿಗೆ ಆಧಾರ್ ಸಂಖ್ಯೆ ಕೊಡಿಸುವುದು, ಆಧಾರ್‌ಗಳಲ್ಲಿನ ಲೋಪಗಳನ್ನು ಸರಿಪಡಿಸುವುದು, ಮೊಬೈಲ್‌ ನಂಬರ್ ಜೋಡಣೆ ಮತ್ತಿತರ ಸೇವೆಗಳನ್ನು ಉಚಿತವಾಗಿ ನೀಡುತ್ತಿದೆ.

***

ಶಾಲಾ ಹಂತದಲ್ಲೇ ಮಕ್ಕಳಿಗೆ ಉಳಿತಾಯದ ಮನೋಭಾವ ಬೆಳೆಸಿದರೆ ಭವಿಷ್ಯದಲ್ಲಿ ಆರ್ಥಿಕ ಭದ್ರತೆ ದೊರೆಯಲಿದೆ. ಮಕ್ಕಳೇ ಪೋಷಕರ ಮೊಬೈಲ್‌ನಿಂದ ಹಣ ಜಮೆ ಮಾಡಿಸಬಹುದು.

– ಎಸ್‌.ರಾಜೇಂದ್ರಕುಮಾರ್, ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌. ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.