ADVERTISEMENT

ಎರಡು ದಿನದಲ್ಲಿ ಚಾಲಕರಿಗೆ ಪರಿಹಾರ: ಸಾರಿಗೆ ಇಲಾಖೆ ಸಿದ್ಧತೆ

ಮೊದಲ ಹಂತದಲ್ಲಿ 40 ಸಾವಿರ ಚಾಲಕರಿಗೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 30 ಮೇ 2020, 21:14 IST
Last Updated 30 ಮೇ 2020, 21:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸರ್ಕಾರ ಘೋಷಣೆ ಮಾಡಿರುವ ₹5 ಸಾವಿರ ಪರಿಹಾರ ಪಡೆಯಲುಈವರೆಗೆ 1.77 ಲಕ್ಷ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಅರ್ಜಿ ಸಲ್ಲಿಸಿದ್ದಾರೆ. ಮೊದಲ ಹಂತದ ಪರಿಹಾರವನ್ನು ಎರಡು ದಿನಗಳಲ್ಲಿ ಚಾಲಕರ ಖಾತೆಗೆ ಜಮೆ ಮಾಡಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ.

‘ಚಾಲಕರಿಗೆ ಪರಿಹಾರ ವಿತರಿಸಲು ಸರ್ಕಾರ ₹20 ಕೋಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ತಲಾ ₹5 ಸಾವಿರದಂತೆ 40 ಸಾವಿರ ಚಾಲಕರಿಗೆ ಮೊದಲ ಹಂತದಲ್ಲಿ ಪರಿಹಾರ ಸಿಗಲಿದೆ. ಇನ್ನುಳಿದವರಿಗೆ ಪರಿಹಾರ ವಿತರಿಸಲು ಹಣ ಬಿಡುಗಡೆ ಮಾಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಹಣ ಬಿಡುಗಡೆಯಾದಂತೆ ಹಂತ–ಹಂತವಾಗಿ ಚಾಲಕರ ಖಾತೆಗೆ ಜಮೆ ಮಾಡಲಾಗುವುದು’ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಮಾತ್ರ ಈ ಪರಿಹಾರಕ್ಕೆ ಅರ್ಹರು. ಮ್ಯಾಕ್ಸಿಕ್ಯಾಬ್ ಚಾಲಕರಿಗೆ ಇದು ಅನ್ವಯವಾಗುವುದಿಲ್ಲ. ಅರ್ಹರು ಸೇವಾಸಿಂಧು ಪೋರ್ಟಲ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಲಿಖಿತ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ’ ಎಂದು ಸಾರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ.

ADVERTISEMENT

‘ಆಧಾರ್‌ ಆಧಾರಿತ ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಪರಿಹಾರ ಧನ ಜಮೆ ಆಗಲಿದೆ. ಹೀಗಾಗಿ, ಬ್ಯಾಂಕ್‌ ಖಾತೆಗೆ ಎಲ್ಲಾ ಚಾಲಕರು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸಿಕೊಳ್ಳಬೇಕು. ಅರ್ಜಿ ಸಲ್ಲಿಸುವಾಗ ಮೊಬೈಲ್ ಸಂಖ್ಯೆ ನಮೂದಿಸಿದ್ದರೆ ಅದಕ್ಕೆ ಬರುವ ಒಟಿಪಿ ಮೂಲಕ ಅರ್ಜಿಯ ಸ್ಥಿತಿ ತಿಳಿದುಕೊಳ್ಳಬಹುದು’ ಎಂದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.