ADVERTISEMENT

ಧರ್ಮಸ್ಥಳ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 16:15 IST
Last Updated 4 ಆಗಸ್ಟ್ 2025, 16:15 IST
<div class="paragraphs"><p>ನ್ಯಾಯಾಲಯ </p></div>

ನ್ಯಾಯಾಲಯ

   

ಬೆಂಗಳೂರು: ‘ಧರ್ಮಸ್ಥಳದಲ್ಲಿ ಕೊಲೆಯಾದ ನೂರಾರು ಶವಗಳನ್ನು ಕಾನೂನು ಬಾಹಿರವಾಗಿ ದಫನ ಮಾಡಲಾಗಿದೆ’ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಬಂಧಕ ಆದೇಶ ಕೋರಲಾದ ಅಸಲು ದಾವೆ ವಿಚಾರಣೆ ನಡೆಸುತ್ತಿರುವ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನ ಸೆಷನ್ಸ್ ನ್ಯಾಯಾಧೀಶ ವಿಜಯ ಕುಮಾರ್ ರೈ ತಮ್ಮ ಮುಂದಿರುವ ಹಾಲಿ ಪ್ರಕರಣವನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸಲು ಮನವಿ ಮಾಡಿದ್ದಾರೆ.

ನ್ಯಾಯಾಧೀಶ ರೈ ಅವರು ನೀಡಿದ್ದ ಪ್ರತಿಬಂಧಕ ಆದೇಶವನ್ನು ಪತ್ರಕರ್ತ ನವೀನ್ ಸೂರಿಂಜೆ, ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಹಾಗೂ ಬೈರಪ್ಪ ಹರೀಶ್ ಕುಮಾರ್ ಪ್ರಶ್ನಿಸಿದ್ದರು.

ADVERTISEMENT

‘ನ್ಯಾಯಾಧೀಶ ರೈ ಅವರು, ಡಿ. ಹರ್ಷೇಂದ್ರ ಕುಮಾರ್‌ ಕುಟುಂಬದಿಂದ ನಿರ್ವಹಣೆ ಮಾಡಲಾಗುತ್ತಿರುವ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜಿನಲ್ಲಿ 25 ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದರು. ಹೀಗಾಗಿ, ಹಾಲಿ ಪ್ರಕರಣವನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸಬೇಕು’ ಎಂದು ಕೋರಿ ಮೆಮೊ ಸಲ್ಲಿಸಿದ್ದರು.

ಈ ಕಾರಣದಿಂದ ನ್ಯಾಯಾಧೀಶ ರೈ ಅವರು, ‘ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಮುಂದುವರೆಸಲು ನ್ಯಾಯ ಒದಗಿಸಿದರಷ್ಟೇ ಸಾಲದು. ಅದು ಕಾಣುವಂತಿರಬೇಕು. ಈ ಮೊಕದ್ದಮೆಯಲ್ಲಿ ನಾನು ಯಾವುದೇ ವೈಯಕ್ತಿಕ ಆಸಕ್ತಿ ಹೊಂದಿಲ್ಲ. ಆದಾಗ್ಯೂ, ನಾನು ಧರ್ಮಸ್ಥಳ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಈ ಕಾರಣದಿಂದ, ಬೆಂಗಳೂರು ನಗರ ಸಿವಿಲ್‌ ನ್ಯಾಯಾಲಯ ಕಾಯ್ದೆ-1979ರ ಕಲಂ 13(2)(ಬಿ) ಪ್ರಕಾರ ಈ ಅಸಲು ದಾವೆ ಸಂಖ್ಯೆ No.5185/2025ರ ಈ ಮೊಕದ್ದಮೆಯನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸುವುದು ಸೂಕ್ತ’ ಎಂದು ಪ್ರಧಾನ ನ್ಯಾಯಾಧೀಶರಿಗೆ ವಿನಂತಿ ಮಾಡಿದ್ದಾರೆ.

ನ್ಯಾಯಾಧೀಶ ವಿಜಯ‌ಕುಮಾರ್ ರೈ ಅವರು ತಮ್ಮ ಮುಂದಿದ್ದ ಈ ಪ್ರಕರಣದಲ್ಲಿ, ‘ಕ್ಷೇತ್ರದ ಧರ್ಮಾಧಿಕಾರಿ‌ ಡಿ.ವೀರೇಂದ್ರ ಹೆಗ್ಗಡೆ ಅವರ ಸಹೋದರ ಡಿ. ಹರ್ಷೇಂದ್ರ ಕುಮಾರ್ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ ಅಥವಾ ಪ್ರಕಟ ಮಾಡಬಾರದು’ ಎಂದು ಈ ಮೊದಲು ಏಕಪಕ್ಷೀಯ ಪ್ರತಿಬಂಧಕ ಆದೇಶ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.