ಕಂದಾಯ ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ಅಂಗವಿಕಲರಿಗೆ ಪಿಂಚಣಿ ಪರಿಷ್ಕರಿಸಲು ಪ್ರಯತ್ನಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.
ವಿಧಾನ ಪರಿಷತ್ನಲ್ಲಿ ಬಿಜೆಪಿಯ ವೈ.ಎಂ. ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ರಾಜ್ಯದಲ್ಲಿ ಸುಮಾರು 78 ಲಕ್ಷ ಜನರಿಗೆ ಸಾಮಾಜಿಕ ಭದ್ರತೆಯ ಪಿಂಚಣಿ ನೀಡಲಾಗುತ್ತಿದೆ. ದೇಶದಲ್ಲಿ ಅತ್ಯಧಿಕ ಮೊತ್ತವನ್ನು ರಾಜ್ಯ ಈ ಬಾಬ್ತಿನಲ್ಲಿ ಬಿಡುಗಡೆ ಮಾಡುತ್ತಿದೆ’ ಎಂದರು.
‘ಅಂಗವಿಕಲರಿಗೆ ಪಿಂಚಣಿ ಅತ್ಯಂತ ಅಗತ್ಯವಾಗಿದ್ದು, 2021ರಲ್ಲಿ ಪರಿಷ್ಕರಿಸಿ ₹2 ಸಾವಿರ ನೀಡಲಾಗುತ್ತಿದೆ. ಇದನ್ನು ಹತ್ತು ಪಟ್ಟು ಹೆಚ್ಚಿಸಬೇಕು’ ಎಂದು ಸತೀಶ್ ಒತ್ತಾಯಿಸಿದರು. ಬಿಜೆಪಿಯ ಭಾರತಿ ಶೆಟ್ಟಿ ಕೂಡ ಇದಕ್ಕೆ ಧ್ವನಿಗೂಡಿಸಿದರು.
‘2021ರಲ್ಲಿ ಪರಿಷ್ಕರಣೆಯಾದ ನಂತರ ಅದನ್ನು ಹೆಚ್ಚಿಸಿಲ್ಲ. ಅಂಗವಿಕಲರಿಗೆ ಹೆಚ್ಚಿನ ಪಿಂಚಣಿ ನೀಡಬೇಕೆಂಬ ಭಾವನೆ ನಮಗೂ ಇದೆ. ಕೇಂದ್ರ ಸರ್ಕಾರ ಪಿಂಚಣಿ ಮೊತ್ತವನ್ನು 13 ಲಕ್ಷ ಜನರಿಗೆ ಮಾತ್ರ ನೀಡುತ್ತಿದ್ದು, ತಲಾ ₹200, ₹300 ಎಂದು ನಿಗದಿ ಮಾಡಿದೆ. 2012ರಿಂದ ಪರಿಷ್ಕರಣೆ ಆಗಿಲ್ಲ. ಕೇಂದ್ರ ಹಣಕಾಸು ಸಚಿವರಿಗೆ ಈ ಬಗ್ಗೆ ಮನವಿ ಮಾಡಿದಾಗ, ಅದನ್ನು ಪರಿಷ್ಕರಿಸುವುದಾಗಿ ಹೇಳಿದ್ದಾರೆ’ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.