ADVERTISEMENT

ತಿಪಟೂರು: ‘ಹುಳು ಹಿಡಿದ ಆಹಾರ ಪದಾರ್ಥ ವಿತರಣೆ’

ವಿದ್ಯಾರ್ಥಿನಿ ಹಂಚಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 19:31 IST
Last Updated 15 ಅಕ್ಟೋಬರ್ 2021, 19:31 IST
ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಕೆಪಿಎಸ್ ಶಾಲಾ ಆವರಣದಲ್ಲಿ ಹುಳು ಹಿಡಿದಿರುವ ಬೇಳೆಯನ್ನು ಸ್ವಚ್ಛಗೊಳಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು
ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಕೆಪಿಎಸ್ ಶಾಲಾ ಆವರಣದಲ್ಲಿ ಹುಳು ಹಿಡಿದಿರುವ ಬೇಳೆಯನ್ನು ಸ್ವಚ್ಛಗೊಳಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು   

ತಿಪಟೂರು: ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರ ಪದಾರ್ಥ ಹುಳು ಹಿಡಿದಿದೆ ಎಂದು ಆರೋಪಿಸಿರುವ ವಿದ್ಯಾರ್ಥಿಯೊಬ್ಬಳು, ಇದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

ತಾಲ್ಲೂಕಿನ ಹೊನ್ನವಳ್ಳಿಯ ಕೆಪಿಎಸ್ ಶಾಲೆಯಲ್ಲಿ ಎರಡು ದಿನಗಳ ಹಿಂದೆ ಆಹಾರ ಪದಾರ್ಥ ವಿತರಣೆ ಮಾಡಿದ್ದರು. ಇದು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

‘ಫ್ರೆಂಡ್ಸ್ ಇಂತಹ ಹಾಳಾದ ಅಕ್ಕಿ ಮತ್ತು ಬೇಳೆಯನ್ನು ಶಾಲೆಯಿಂದ ನೀಡಿದ್ದಾರೆ. ಇಂತಹ ಬೇಳೆ ತಿನ್ನಲು ಸಾಧ್ಯವೇ ಎಂದು ಕೇಳಿದರೆ ದನಕ್ಕೆ ಹಾಕಿ ಎಂದು ಹೇಳುತ್ತಾರೆ. ನಾವೇನು ಮಾಡಬೇಕು’ ಎಂದು ವಿದ್ಯಾರ್ಥಿನಿ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ADVERTISEMENT

‘ಮೂರು ತಿಂಗಳ ಹಿಂದೆ ವಿತರಣೆ ಮಾಡಿದ್ದ ಅಕ್ಕಿ ಹಾಗೂ ಮೂರು ಕ್ವಿಂಟಲ್ ಬೇಳೆ ಉಳಿದಿದ್ದು, ಇದೀಗ ಮಕ್ಕಳಿಗೆ ವಿತರಣೆ ಮಾಡಲಾಗುತ್ತಿದೆ’ ಎಂದು ಶಿಕ್ಷಕರು ತಿಳಿಸಿದ್ದಾರೆ.

ವಿಡಿಯೊ ವೈರಲ್ ಆದ ಬಳಿಕ ಬಿಸಿಯೂಟದ ಅಡುಗೆ ಸಿಬ್ಬಂದಿ ಮೂಲಕ ಆಹಾರ ಪದಾರ್ಥವನ್ನು ಸ್ವಚ್ಛಗೊಳಿಸಿ, ವಿದ್ಯಾರ್ಥಿಗಳಿಗೆ ನೀಡಲು ಶಿಕ್ಷಕರು ಮುಂದಾಗಿದ್ದಾರೆ.

***

ಅಧಿಕಾರಿಗಳು ಉಳಿದಿರುವ ಕಾಳುಗಳನ್ನು ವಿತರಿಸುವಂತೆ ಮೌಖಿಕವಾಗಿ ತಿಳಿಸಿದ್ದರು. ಬೇಳೆಗಳಿಗೆ ಸಾಮಾನ್ಯ ಹುಳುಗಳಾಗಿದ್ದು, ಸ್ವಚ್ಛ ಮಾಡಿ ವಿತರಿಸಲಾಗುವುದು

- ಮುಖ್ಯಶಿಕ್ಷಕಿ, ಕೆ.ಪಿ.ಎಸ್. ಹೊನ್ನವಳ್ಳಿ ಶಾಲೆ

***

ಅಕ್ಷರ ದಾಸೋಹದ ಅಡಿ 3 ತಿಂಗಳಿನಿಂದ ಯಾವುದೇ ಆಹಾರ ಪದಾರ್ಥ ವಿತರಿಸಿಲ್ಲ. ಈ ಬಗ್ಗೆ ಶಾಲೆ ಮುಖ್ಯಸ್ಥರಿಂದ ವಿವರಣೆ ಕೇಳಲಾಗುವುದು

- ಪ್ರಕಾಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.