ADVERTISEMENT

ತಮಿಳುನಾಡು ಚುನಾವಣೆ: ಬಗೆಹರಿಯದ ಡಿಎಂಕೆ–ಕಾಂಗ್ರೆಸ್‌ ಮೈತ್ರಿ ಕಗ್ಗಂಟು

ಪಿಟಿಐ
Published 28 ಫೆಬ್ರುವರಿ 2026, 21:27 IST
Last Updated 28 ಫೆಬ್ರುವರಿ 2026, 21:27 IST
   

ನವದೆಹಲಿ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಸಂಬಂಧ ಆಡಳಿತಾರೂಢ ಡಿಎಂಕೆ–ಕಾಂಗ್ರೆಸ್‌ ಶನಿವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರೂ ಕಗ್ಗಂಟು ಬಗೆಹರಿದಿಲ್ಲ. 40 ಸ್ಥಾನಗಳನ್ನು ಬಿಟ್ಟುಕೊಡಬೇಕು ಎಂಬ ಕಾಂಗ್ರೆಸ್‌ ನಾಯಕರ ಬೇಡಿಕೆಗೆ ಡಿಎಂಕೆ ನಾಯಕರು ಒಪ್ಪಿಲ್ಲ. 

ಡಿಎಂಕೆ ಮೈತ್ರಿ ಪಾಲುದಾರರೊಂದಿಗೆ ಸೀಟು ಹಂಚಿಕೆ ಒಪ್ಪಂದಗಳನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆಯನ್ನು ಶನಿವಾರ ಆರಂಭಿಸಿದ್ದು, ಐಯುಎಂಎಲ್ ಮತ್ತು ಎಂಎಂಕೆಗೆ ನಾಲ್ಕು ವಿಧಾನಸಭಾ ಸ್ಥಾನಗಳನ್ನು ಹಂಚಿಕೆ ಮಾಡಿದೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಲ್ಲಿನ ಡಿಎಂಕೆ ಪ್ರಧಾನ ಕಚೇರಿಯಲ್ಲಿ ಐಯುಎಂಎಲ್ ಮತ್ತು ಎಂಎಂಕೆಗೆ ತಲಾ ಎರಡು ಸ್ಥಾನಗಳನ್ನು ಹಂಚಿಕೆ ಮಾಡಿದ್ದಾರೆ. ಐಯುಎಂಎಲ್ ತನ್ನ ಏಣಿ ಚಿಹ್ನೆಯಡಿ ಸ್ಪರ್ಧಿಸಲಿದ್ದರೆ, ಎಂಎಂಕೆ ಅಭ್ಯರ್ಥಿಗಳು ಡಿಎಂಕೆಯ ಚಿಹ್ನೆಯಡಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ADVERTISEMENT

ಪ್ರತಿ ರಾಜಕೀಯ ಪಕ್ಷಕ್ಕೆ ಹಂಚಿಕೆ ಮಾಡಬೇಕಾದ ಸ್ಥಾನಗಳ ಸಂಖ್ಯೆಯ ಕುರಿತು ಕಾಂಗ್ರೆಸ್ ಮತ್ತು ಇತರ ಐದು ಸಣ್ಣ ಪಕ್ಷಗಳೊಂದಿಗೆ ಡಿಎಂಕೆ ಮಾತುಕತೆ ನಡೆಸಿದೆ. ತಿರುಚಿರಾಪಳ್ಳಿಯಲ್ಲಿ ಮಾರ್ಚ್ 9ರಂದು ಪಕ್ಷದ ರಾಜ್ಯಮಟ್ಟದ ಸಮ್ಮೇಳನಕ್ಕೆ ಮುನ್ನ ಸೀಟು ಹಂಚಿಕೆ ಮಾತುಕತೆಗಳನ್ನು ಪೂರ್ಣಗೊಳಿಸಲು ಆಡಳಿತ ಪಕ್ಷ ಉದ್ದೇಶಿಸಿದೆ.

2021ರ ಚುನಾವಣೆಯಲ್ಲಿ ಕಾಂಗ್ರೆಸ್‌ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 18ರಲ್ಲಿ ಗೆಲುವು ಸಾಧಿಸಿತ್ತು. ಈ ಸಲ 40 ಕ್ಷೇತ್ರಗಳನ್ನು ಹಾಗೂ ಒಂದು ರಾಜ್ಯಸಭಾ ಸ್ಥಾನ ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದಿದೆ. ರಾಜ್ಯಸಭಾ ಸ್ಥಾನವನ್ನು ಮೈತ್ರಿಪಕ್ಷಕ್ಕೆ ನೀಡಲು ಡಿಎಂಕೆ ಒಪ್ಪಿದೆ. ಮೈತ್ರಿಕೂಟಕ್ಕೆ ಸೇರ್ಪಡೆಯಾಗಿರುವ ಸಣ್ಣ ಪಕ್ಷಗಳಿಗೂ ಈ ಸಲ ಸ್ಥಾನ ನೀಡಬೇಕಾಗಿರುವ ಕಾರಣ ಗರಿಷ್ಠ 28 ಕ್ಷೇತ್ರಗಳನ್ನಷ್ಟೇ ಕಾಂಗ್ರೆಸ್‌ಗೆ ನೀಡಲು ಸಾಧ್ಯ ಎಂದು ಡಿಎಂಕೆ ನಾಯಕರು ಸ್ಪಷ್ಟಪಡಿಸಿದ್ದಾರೆ. ತಮಿಳುನಾಡಿನಿಂದ ರಾಜ್ಯಸಭಾ ಸ್ಥಾನಕ್ಕೆ ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಉತ್ಸುಕತೆ ತೋರಿದೆ. ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಸ್ಟಾಲಿನ್‌ ಅವರೊಂದಿಗೆ ಸೋಮವಾರ ಮಾತುಕತೆ ನಡೆಸಿದ್ದರು. 

ಸೀಟು ಹಂಚಿಕೆ ಬಿಕ್ಕಟ್ಟು ಬಗೆಹರಿಸುವ ಸಂಬಂಧ ಕಾಂಗ್ರೆಸ್‌ ಹಾಗೂ ಡಿಎಂಕೆ ನಾಯಕರು ಶನಿವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು. 

‘ಮಾತುಕತೆ ಸೌಹಾರ್ದಯುತವಾಗಿ ಕೊನೆಗೊಂಡಿದೆ. ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ನೀಡಲು ಡಿಎಂಕೆ ಒಪ್ಪಿದೆ‘ ಎಂದು ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಕೆ. ಸೆಲ್ವಪೆರುಂಥಗೈ ಘೋಷಿಸಿದರು. ‘ಪಕ್ಷವು ಡಿಎಂಕೆ ಜೊತೆ ಮಾತ್ರ ಮೈತ್ರಿ ಮತ್ತು ಸೀಟು ಹಂಚಿಕೆಯ ಬಗ್ಗೆ ಚರ್ಚಿಸುತ್ತಿದೆ‘ ಎಂದು ಸ್ಪಷ್ಟಪಡಿಸಿದ ಅವರು, ಟಿವಿಕೆ ಜತೆಗೆ ಪಕ್ಷ ಚರ್ಚೆ ನಡೆಸುತ್ತಿದೆ‘ ಎಂಬ ವದಂತಿಗಳನ್ನು ತಳ್ಳಿಹಾಕಿದರು. ತಮ್ಮ ಪಕ್ಷಕ್ಕೆ 70 ಕ್ಷೇತ್ರಗಳನ್ನು ನೀಡಲು ಟಿವಿಕೆ ಒಪ್ಪಿದೆ‘ ಎಂದು ಪಕ್ಷದ ಕೆಲವು ನಾಯಕರು ಈ ಹಿಂದೆ ಹೇಳಿದ್ದರು. 

ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಸ್ಟಾಲಿನ್‌ ಸೋಮವಾರ ಪ್ರಕಟಿಸುವ ನಿರೀಕ್ಷೆ ಇದೆ. ಇದೇ ಸಂದರ್ಭದಲ್ಲಿ ಮೈತ್ರಿಕೂಟದ ಪಾಲುದಾರರಿಗೆ ರಾಜ್ಯಸಭಾ ಸ್ಥಾನಗಳ ಹಂಚಿಕೆ ಕುರಿತು ಔಪಚಾರಿಕ ಘೋಷಣೆ ಮಾಡುವ ನಿರೀಕ್ಷೆಯಿದೆ. 

ಡಿಎಂಕೆ ನಾಯಕರ ಜತೆಗಿನ ಮಾತುಕತೆ ಬಳಿಕ ಹೈಕಮಾಂಡ್‌ ನಾಯಕರ ಜತೆಗೆ ಮಾತುಕತೆ ನಡೆಸಲು ಎಐಸಿಸಿ ತಮಿಳುನಾಡು ಉಸ್ತುವಾರಿ ಗಿರೀಶ್ ಚೋಡಂಕರ್ ಅವರು ರಾಷ್ಟ್ರ ರಾಜಧಾನಿಗೆ ಬಂದಿದ್ದಾರೆ. 

ಸೀಟು ಹಂಚಿಕೆ ಬಗ್ಗೆ ಪ್ರಮುಖ ದಲಿತ ಪಕ್ಷ ವಿಸಿಕೆ ಹಾಗೂ ಡಿಎಂಕೆ ನಾಯಕರು ಸೋಮವಾರ ಮಾತುಕತೆ ನಡೆಸಲಿದ್ದಾರೆ. ಐದು ಸಣ್ಣ ಪಕ್ಷಗಳು ಡಿಎಂಕೆ ಸೀಟು ಹಂಚಿಕೆ ಸಂಧಾನ ಸಮಿತಿಯ ಮುಂದೆ ಶನಿವಾರ ತಮ್ಮ ಬೇಡಿಕೆಗಳನ್ನು ಮಂಡಿಸಿವೆ.

ಮುಖ್ಯಾಂಶಗಳು

  • 40 ಕ್ಷೇತ್ರ ಹಾಗೂ ರಾಜ್ಯಸಭಾ ಸ್ಥಾನಕ್ಕೆ ಕಾಂಗ್ರೆಸ್ ಪಟ್ಟು 

  • ರಾಜ್ಯಸಭಾ ಸ್ಥಾನ ಹಾಗೂ ಗರಿಷ್ಠ 28 ಕ್ಷೇತ್ರ ನೀಡಲು ಒಲವು ತೋರಿರುವ ಡಿಎಂಕೆ

  • ಡಿಎಂಕೆ–ಕಾಂಗ್ರೆಸ್‌ ನಾಯಕರ ಜತೆಗೆ ಮತ್ತೊಂದು ಸುತ್ತಿನ ಮಾತುಕತೆ 

  • ರಾಜ್ಯಸಭೆಗೆ ತಮಿಳುನಾಡಿನಿಂದ ಪವನ್‌ ಖೇರಾ ಸ್ಪರ್ಧಿಸುವ ಸಾಧ್ಯತೆ 

  • 40 ಕ್ಷೇತ್ರ ಹಾಗೂ ರಾಜ್ಯಸಭಾ ಸ್ಥಾನಕ್ಕೆ ಕಾಂಗ್ರೆಸ್ ಪಟ್ಟು 

  • ರಾಜ್ಯಸಭಾ ಸ್ಥಾನ ಹಾಗೂ ಗರಿಷ್ಠ 28 ಕ್ಷೇತ್ರ ನೀಡಲು ಒಲವು ತೋರಿರುವ ಡಿಎಂಕೆ

  • ಡಿಎಂಕೆ–ಕಾಂಗ್ರೆಸ್‌ ನಾಯಕರ ಜತೆಗೆ ಮತ್ತೊಂದು ಸುತ್ತಿನ ಮಾತುಕತೆ 

  • ರಾಜ್ಯಸಭೆಗೆ ತಮಿಳು ನಾಡಿನಿಂದ ಪವನ್‌ ಖೇರಾ ಸ್ಪರ್ಧಿಸುವ ಸಾಧ್ಯತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.