ADVERTISEMENT

ಏನು ಮಾಡುತ್ತೀರೋ ಮಾಡಿ, ಕೋವಿಡ್–19 ನಿಯಂತ್ರಿಸಿ: ಮುಖ್ಯಮಂತ್ರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 9:40 IST
Last Updated 30 ಏಪ್ರಿಲ್ 2020, 9:40 IST
ಬೆಂಗಳೂರಿನಲ್ಲಿ ಗುರುವಾರ ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಮುಖಂಡ ಮಾಲೀಕಯ್ಯ ಗುತ್ತೇದಾರ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿದರು
ಬೆಂಗಳೂರಿನಲ್ಲಿ ಗುರುವಾರ ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಮುಖಂಡ ಮಾಲೀಕಯ್ಯ ಗುತ್ತೇದಾರ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿದರು   

ಕಲಬುರ್ಗಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಏನು ಮಾಡುತ್ತೀರೋ ಮಾಡಿ ವೈರಾಣು ಅಟ್ಟಹಾಸ ನಿಯಂತ್ರಣಕ್ಕೆತನ್ನಿ ಎಂದು ಸೂಚಿಸಿದ್ದಾರೆ.

ಕೋವಿಡ್-19 ಗಂಭಿರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿ.ಎಂ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಸಂಸದ ಡಾ.ಉಮೇಶ ಜಾಧವ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರೊಂದಿಗೆ ಯಡಿಯೂರಪ್ಪ ಚರ್ಚೆ ನಡೆಸಿದರು.

ರಾಜ್ಯ ಸರ್ಕಾರದ ಕ್ರಮಗಳ ಬಗ್ಗೆ ಯಾರು ಏನೇ ಟೀಕೆ ಮಾಡಿದರೂ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ನಾವು ಕೆಲಸದಲ್ಲೇ ಕ್ರಿಯಾಶೀಲರಾಗೋಣ. ಮೊದಲು ಕೋವಿಡ್ ಸಮಸ್ಯೆ ನಿವಾರಣೆ ಮಾಡುವುದೊಂದೇ ಗುರಿ ಆಗಿರಲಿ ಎಂದೂ ಅವರು ಸಲಹೆ ನೀಡಿದ್ದಾಗಿ ಸಂಸದ ಡಾ.ಜಾಧವ ತಿಳಿಸಿದರು.

ADVERTISEMENT

ವಲಸಿಗರ ಕರೆತರಲು ಸಕಾರಾತ್ಮಕ ಸ್ಪಂದನೆ: ಕಲ್ಯಾಣ ಕರ್ನಾಟಕ ಭಾಗದ ಅಪಾರ ಸಂಖ್ಯೆಯ ವಲಸೆ ಕಾರ್ಮಿಕರು ಬೇರೆಬೇರೆ ಕಡೆ ಸಿಕ್ಕಿಕೊಂಡಿದ್ದಾರೆ. ಅವರನ್ನು ಮರಳಿ ತವರಿಗೆ ಸೇರಿಸುವಂತೆ ಗೋಗರೆಯುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಮನವಿ ಮಾಡಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ, ಪ್ರಧಾನಿ ಮೋದಿ ಅವರೊಂದಿಗೆ ನಡೆದ ವಿಡಿಯೊ ಸಂವಾದದಲ್ಲಿ ಕೂಡ ಈ ವಿಷಯ ಚರ್ಚೆ ಆಗಿದೆ. ಈಗಾಗಲೇ ಬಹಳಷ್ಟು ವಲಸೆ ಕಾರ್ಮಿಕರು ಇದ್ದ ಸ್ಥಳದಲ್ಲೇ 28 ದಿನ ಮುಗಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅಗತ್ಯ ಎಚ್ಚರಿಕೆಯೊಂದಿಗೆ ತಪಾಸಣೆ ಮಾಡಿಸಿ, ತವರಿಗೆ ಕರೆತರಲು ವಿಶೇಷ ಸಾರಿಗೆ ವ್ಯವಸ್ಥೆ ಮಾಡಲು ಚಿಂತನೆ ನಡೆಸಿದ್ದೇವೆ. ಊರು ಮುಟ್ಟಿದ ಮೇಲೂ ಕಾರ್ಮಿಕರು ಮತ್ತೆ ಗೃಹಬಂಧನದಲ್ಲೇ ಇರಬೇಕಾಗುತ್ತದೆ. ಈ ಬಗ್ಗೆ ಗುರುವಾರ (ಏ.30) ಸಂಜೆಯೊಳಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.

'ಜಿಲ್ಲೆಯಲ್ಲಿ ಸಂಸದರು, ಎಲ್ಲ ಶಾಸಕರ ಜಿಲ್ಲಾಡಾಳಿತದಿಂದ ಒಳ್ಳೆಯ ಕೆಲಸ ನಡೆಯುತ್ತಿದೆ' ಎಂದೂ ಮುಖ್ಯಮಂತ್ರಿ ಪ್ರಶಂಸಿಸಿದರು ಎಂದು ಸಂಸದ ಮಾಹಿತಿ ನೀಡಿದರು.

ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.