ಯಾದಗಿರಿ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು ಜಿಲ್ಲಾಡಳಿತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿ ಗುರುವಾರ ಜಿಲ್ಲಾ ಆಸ್ಪತ್ರೆಯ ವೈದ್ಯರು ಪ್ರತಿಭಟನೆ ನಡೆಸಿದರು.
ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ನೀಲಮ್ಮ ಮಾತನಾಡಿ,' ಬುಧವಾರ ರಾತ್ರಿ ಅಬ್ದುಲ್ ರೆಹಮಾನ್ ಹೆಸರಿನ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿದ್ದರು. ಮೃತ ವ್ಯಕ್ತಿಗೆ ಚಿಕಿತ್ಸೆ ನೀಡುವಂತೆ ಮುಸ್ಲಿಂ ಯುವಕರ ಗುಂಪು ರಾತ್ರಿ ಪಾಳಿಯ ವೈದ್ಯಾಧಿಕಾರಿ ಮತ್ತು ಆರೋಗ್ಯ ಸಿಬ್ಬಂದಿಗೆ ಧಮಕಿ ಹಾಕಿದ್ದಾರೆ. ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿದರೂ, ಯುವಕರ ಗುಂಪು ಆಸ್ಪತ್ರೆಯಲ್ಲಿ ದೊಂಬಿ ನಡೆಸಿದೆ' ಎಂದು ಆರೋಪಿಸಿದರು.
ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರ ಇಂಥಾ ವರ್ತನೆಯಿಂದ ಇರುವ ವೈದ್ಯರು ಕರ್ತವ್ಯ ವಿಮುಖರಾದರೆ ಜನರ ಆರೋಗ್ಯದ ಗತಿಯೇನು? ವೈದ್ಯರಿಗೆ ಜಿಲ್ಲಾಡಳಿತ ಮೊದಲು ಪೊಲೀಸ್ ರಕ್ಷಣೆ ಒದಗಿಸಬೇಕು. ಇಲ್ಲದಿದ್ದರೆ ಸಾಮೂಹಿಕ ರಾಜೀನಾಮೆ ಸಲ್ಲಿಸಬೇಕಾಗುತ್ತದೆ' ಎಂದು ಅವರು ಎಚ್ಚರಿಸಿದರು.
ನಂತರ ವೈದ್ಯರು ಜಿಲ್ಲಾಧಿಕಾರಿ ಎಂ. ಕೂರ್ಮರಾವ್ ಅವರಿಗೆ ಮನವಿ ಸಲ್ಲಿಸಿದರು.
ಒಪಿಡಿ ಬಂದ್: ಪರದಾಡಿದ ರೋಗಿಗಳು
ವೈದ್ಯರ ಪ್ರತಿಭಟನೆ ಕಾರಣ ಎರಡು ಗಂಟೆ ಜಿಲ್ಲಾ ಆಸ್ಪತ್ರೆಯ ಒಪಿಡಿ ಬಂದ್ ಮಾಡಲಾಗಿತ್ತು. ಇದರಿಂದ ರೋಗಿಗಳು ಪರದಾಡಿದರು.
ಹಳ್ಳಿಗಳಿಂದ ಆಗಮಿಸಿದ್ದ ಜನರ ಜಿಲ್ಲಾ ಆಸ್ಪತ್ರೆ ಹೊರಗೆ ಕುಳಿತುಕೊಂಡು ವೈದ್ಯರ ದಾರಿ ಕಾಯುತ್ತಿದ್ದರು. ನಂತರ ಒಪಿಡಿ ಬಂದ್ ತೆರವುಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.