ಕಾರವಾರ: ಬಸ್ ಹಾಗೂ ಲಾರಿ ಚಾಲಕರಸಮಯಪ್ರಜ್ಞೆ 48 ಪ್ರಯಾಣಿಕರ ಜೀವ ಉಳಿಸಿದೆ. ಘಟ್ಟ ಪ್ರದೇಶದಲ್ಲಿ ಬ್ರೇಕ್ ಫೇಲ್ ಆಗಿದ್ದ ಬಸ್ನ ವೇಗವನ್ನು ನಿಯಂತ್ರಿಸಲು ಎರಡೂ ವಾಹನಗಳ ಚಾಲಕರು ಕೈಗೊಂಡ ನಿರ್ಧಾರ, ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಏನಾಯಿತು?:ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ, ಗದಗ ಡಿಪೊಗೆ ಸೇರಿದಬಸ್ (ಕೆಎ 26ಎಫ್ 1025) ಶನಿವಾರ ಮಧ್ಯಾಹ್ನ ಹುಬ್ಬಳ್ಳಿಯಿಂದ ಕಾರವಾರಕ್ಕೆ ಬರುತ್ತಿತ್ತು. ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ಬಸ್ನ ಬ್ರೇಕ್ ಫೇಲ್ ಆಗಿ ಆತಂಕಕ್ಕೆ ಕಾರಣವಾಯಿತು. ಕಡಿದಾದ ತಿರುವುಗಳು ಮತ್ತು ಆಳವಾದ ಪ್ರಪಾತಗಳಿರುವ ರಾಷ್ಟ್ರೀಯ ಹೆದ್ದಾರಿ 63ರ ಇಳಿಜಾರಿನಲ್ಲಿ ಬಸ್ ವೇಗ ಪಡೆದುಕೊಂಡಿತ್ತು. ಇದರಿಂದ ಪ್ರಯಾಣಿಕರು ಜೀವಭಯಕ್ಕೆ ಒಳಗಾಗಿದ್ದರು.
ಹೇಗಾದರೂ ಮಾಡಿ ಬಸ್ನ ವೇಗ ನಿಯಂತ್ರಿಸಲು ಚಾಲಕಈಶ್ವರ್ನಿರ್ಧರಿಸಿದರು. ಎದುರು ಇಳಿಜಾರಿನಲ್ಲಿ ನಿಧಾನವಾಗಿ ಸಾಗುತ್ತಿದ್ದ, ಗೊಬ್ಬರ ತುಂಬಿದ್ದ ಲಾರಿಯ ಹಿಂಭಾಗಕ್ಕೆ ಬಸ್ ಅನ್ನು ಗುದ್ದಿಸಿದರು. ಏಕಾಏಕಿ ಬಸ್ ಡಿಕ್ಕಿ ಹೊಡೆದುದನ್ನುಗಮನಿಸಿದ ಲಾರಿ ಚಾಲಕ ಈರಣ್ಣ, ವಿಚಲಿತರಾಗಲಿಲ್ಲ. ಬಸ್ನಲ್ಲಿ ಏನೋ ತೊಂದರೆಯಾಗಿದೆ ಎಂಬುದನ್ನು ಅರಿತು,ಲಾರಿಯನ್ನು ಮತ್ತಷ್ಟು ನಿಧಾನ ಮಾಡಿದರು.
ಬಸ್ ಅನ್ನು ಲಾರಿಗೆ ಹಿಂಬದಿಯಿಂದ ಮೂರು ಸಲ ಡಿಕ್ಕಿ ಹೊಡೆಸಲಾಯಿತು. ಇದೇ ರೀತಿ ಸುಮಾರು ನಾಲ್ಕು ಕಿಲೋಮೀಟರ್ ಕ್ರಮಿಸಿದಾಗ ಘಟ್ಟ ಪ್ರದೇಶ ಮುಗಿದಿತ್ತು. ಅಷ್ಟರಲ್ಲಿಬಸ್ ಕೂಡ ವೇಗ ಕಳೆದುಕೊಂಡು ಚಾಲಕನ ನಿಯಂತ್ರಣಕ್ಕೆ ಬಂದಿತ್ತು. ಇದರಿಂದ ಬಸ್ನಲ್ಲಿದ್ದ ಎಲ್ಲರೂ ನಿಟ್ಟುಸಿರುಬಿಟ್ಟು ಎರಡೂ ವಾಹನಗಳ ಚಾಲಕರನ್ನು ಅಭಿನಂದಿಸಿದರು.
ಘಟನೆಯಲ್ಲಿ ಬಸ್ನ ಮುಂಭಾಗ ಮತ್ತು ಲಾರಿಯ ಹಿಂಭಾಗ ಸ್ವಲ್ಪ ಪ್ರಮಾಣದಲ್ಲಿ ಜಖಂಗೊಂಡಿದ್ದು ಹೊರತಾಗಿ ಯಾವುದೇ ಪ್ರಾಣಾಪಾಯವಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.