
ನವದೆಹಲಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಬ್ಸಿಡಿಗಳು ಮತ್ತು ಗ್ಯಾರಂಟಿಯಂತಹ ನೇರ ನಗದು ವರ್ಗಾವಣೆ ಯೋಜನೆಗಳಿಂದ ಭವಿಷ್ಯದ ಆರ್ಥಿಕ ಸ್ಥಿರತೆ ಹಾಳಾಗಲಿದೆ ಎಂದು 16ನೇ ಹಣಕಾಸು ಆಯೋಗ ಎಚ್ಚರಿಸಿದೆ.
ಮತದಾರರ ಮನ ಗೆಲ್ಲಲು ಚುನಾವಣೆಗೆ ಮುನ್ನ ಅಥವಾ ಅಧಿಕಾರಕ್ಕೆ ಬಂದ ಕೂಡಲೇ ರಾಜಕೀಯ ಪಕ್ಷಗಳು ಹಾಗೂ ಸರ್ಕಾರಗಳು ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಪ್ರವೃತ್ತಿ ಹೆಚ್ಚುತ್ತಿರುವ ಸಮಯದಲ್ಲೇ ಆಯೋಗ ಈ ಎಚ್ಚರಿಕೆ ನೀಡಿದೆ.
ದೇಶದಲ್ಲಿ ಸಂಬಳ, ಪಿಂಚಣಿ ಮತ್ತು ಸಾಲದ ಮೇಲಿನ ಬಡ್ಡಿ ಪಾವತಿಗಳಂತೆ, ಸಬ್ಸಿಡಿಗಳು ‘ಬದ್ಧ’ ವೆಚ್ಚಗಳಾಗಿ ಬದಲಾಗುವ ಪ್ರವೃತ್ತಿ ಹೊಂದಿವೆ. ಈ ಜನಪ್ರಿಯ ಯೋಜನೆಗಳಿಂದಾಗಿ ಮೂಲಸೌಕರ್ಯ, ಆರೋಗ್ಯ, ಶಿಕ್ಷಣ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಇತರ ವಲಯಗಳಿಗೆ ಮಾಡುತ್ತಿರುವ ವೆಚ್ಚ ಕಡಿಮೆ ಆಗುತ್ತಿದೆ. ಆರ್ಥಿಕತೆ ಬೆಳೆದಂತೆ ಹಾಗೂ ಹೆಚ್ಚಿನ ಆದಾಯ ಲಭ್ಯವಾಗುತ್ತಿದ್ದಂತೆ, ಅಸ್ತಿತ್ವದಲ್ಲಿರುವ ಯೋಜನೆಗಳನ್ನು ವಿಸ್ತರಿಸಲು ಹಾಗೂ ಹೊಸ ಯೋಜನೆಗಳನ್ನು ಘೋಷಿಸಲು ರಾಜಕೀಯ ಒತ್ತಡ ಹೆಚ್ಚಾಗುತ್ತಿದೆ. ಇದರಿಂದಾಗಿ, ಅಭಿವೃದ್ಧಿ ಯೋಜನೆಗಳ ಮೇಲೆ ಸರ್ಕಾರ ಮಾಡುತ್ತಿರುವ ವೆಚ್ಚ ಕಡಿಮೆ ಆಗಲಿದೆ ಎಂದು ಆಯೋಗ ಕಳವಳ ವ್ಯಕ್ತಪಡಿಸಿದೆ.
ಇಂತಹ ಇನ್ನಷ್ಟು ಯೋಜನೆಗಳನ್ನು ಪರಿಚಯಿಸುವ ಅಥವಾ ಅಸ್ವಿತ್ವದಲ್ಲಿರುವ ಯೋಜನೆಗಳನ್ನು ವಿಸ್ತರಿಸುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪುನರ್ ವಿಮರ್ಶೆ ಮಾಡಬೇಕು ಎಂದು ಆಯೋಗ ಕಿವಿಮಾತು ಹೇಳಿದೆ.
ಮೂರು ಪಟ್ಟು ಹೆಚ್ಚಳ: ಆಯೋಗವು 21 ರಾಜ್ಯಗಳ ಸಬ್ಸಿಡಿ ಹಾಗೂ ನಗದು ವರ್ಗಾವಣೆಗಳ ವಿಶ್ಲೇಷಣೆ ನಡೆಸಿದೆ. ಈ ರಾಜ್ಯಗಳು ಇದಕ್ಕೆ 2018–19ರಲ್ಲಿ ₹3.86 ಲಕ್ಷ ಕೋಟಿ ವೆಚ್ಚ ಮಾಡಿದ್ದವು. 2023–24ರಲ್ಲಿ ಮೊತ್ತ ₹7.59 ಲಕ್ಷ ಕೋಟಿಗೆ ಹಾಗೂ 2025–26ರಲ್ಲಿ ₹9.30 ಲಕ್ಷ ಕೋಟಿಗೆ ಏರಿತು. 21 ರಾಜ್ಯಗಳ ಒಟ್ಟು ಆಂತರಿಕ ಉತ್ಪಾದನೆಯ (ಜಿಎಸ್ಡಿಪಿ) ಸಬ್ಸಿಡಿಗಳಿಗೆ 2018–19ರಲ್ಲಿ ಶೇ 2.2 ವೆಚ್ಚ ಮಾಡುತ್ತಿದ್ದರೆ, 2024–25ರಲ್ಲಿ ಶೇ 3ರಷ್ಟು ಖರ್ಚು ಮಾಡಲಾಯಿತು. ಒಟ್ಟು ಬದ್ಧ ವೆಚ್ಚದಲ್ಲಿ ಸಬ್ಸಿಡಿಗಳು ಹಾಗೂ ನಗದು ವರ್ಗಾವಣೆಗಳಿಗೆ 2018–19ರಲ್ಲಿ ಶೇ 15.6 ವೆಚ್ಚ ಮಾಡಿದ್ದರೆ, 2024–25ರಲ್ಲಿ ಮಾಡಿದ ವೆಚ್ಚ ಶೇ 21.3ರಷ್ಟು.
2025-26ರ ಆರ್ಥಿಕ ವರ್ಷದ ಅಂಕಿ ಅಂಶಗಳ ಪ್ರಕಾರ, ಮಹಾರಾಷ್ಟ್ರದ ಲಡ್ಕಿ ಬಹಿನ್ ಯೋಜನೆ, ಕರ್ನಾಟಕದಲ್ಲಿ ಗೃಹ ಲಕ್ಷ್ಮಿ ಮತ್ತು ಪಶ್ಚಿಮ ಬಂಗಾಳದ ಲಕ್ಷ್ಮಿರ್ ಭಂಡಾರ್ ಯೋಜನೆಗಳು ಬಹುದೊಡ್ಡ ನಗದು ವರ್ಗಾವಣೆ ಯೋಜನೆಗಳು ಎಂದು ಆಯೋಗ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.