ಬೆಂಗಳೂರು: ಸ್ವಾತಂತ್ರ್ಯೋತ್ಸವದ 75 ನೇ ವರ್ಷದ ಅಂಗವಾಗಿ ರಾಜ್ಯದ ಎಲ್ಲ 48 ವಿಶ್ವವಿದ್ಯಾಲಯಗಳಲ್ಲಿ ಸ್ವಾತಂತ್ರ್ಯ ಓಟ ಎಂಬ ಕಾರ್ಯಕ್ರಮ ಆ.13(ಶುಕ್ರವಾರ)ದಿಂದ ಅಕ್ಟೋಬರ್ 2 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾ ಸಚಿವ ನಾರಾಯಣಗೌಡ ಹೇಳಿದರು.
ಅಲ್ಲದೆ ಆ.15 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಿಂದ ಚಿಕ್ಕಮಗಳೂರುವರೆಗೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ, ಇದರಲ್ಲಿ 75 ಮಂದಿ ಭಾಗವಹಿಸುತ್ತಿದ್ದಾರೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆ.15 ರಂದು ರಾಜ್ಯದ 75 ಶಾಲೆಗಳಲ್ಲಿ ಮ್ಯೂರಲ್ ಪೇಂಟಿಂಗ್ ಕಾರ್ಯಕ್ರಮ, ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಎಂಬ ವಿಷಯದ ಶೀರ್ಷಿಕೆಯಡಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ಪ್ರಥಮ ಬಹುಮಾನ ₹25 ಸಾವಿರ ಮತ್ತು ದ್ವಿತೀಯ ಬಹುಮಾನ ₹15 ಸಾವಿರ ಮತ್ತು ತೃತೀಯ ಬಹುಮಾನ ₹10 ಸಾವಿರ ನೀಡಲಾಗುವುದು ಎಂದರು.
ಶಿಖರದಿಂದ ಸಾಗರ ಕಾರ್ಯಕ್ರಮ:
ಅಮೃತೋತ್ಸವದ ಅಂಗವಾಗಿ ‘ಶಿಖರದಿಂದ ಸಾಗರ’ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯ ಐವರು ಯುವತಿಯರು ಕಾಶ್ಮೀರದಲ್ಲಿ ಕೊಲ್ಹೋಯ್ ಪರ್ವತ ಏರಲಿದ್ದಾರೆ. ಬಳಿಕ 3 ಸಾವಿರ ಕಿ.ಮೀ ಸೈಕಲ್ ಯಾನ ಮಾಡುತ್ತಾ ಕಾರವಾರ ತಲುಪುತ್ತಾರೆ. ಕಾರವಾರದಿಂದ ರಾಜ್ಯದ ಕರಾವಳಿ ಪ್ರದೇಶದಲ್ಲಿ 300 ಕಿ.ಮೀ ಸಮುದ್ರದಲ್ಲಿ ಕಯಾಕಿಂಗ್ ಯಾನದ ಮೂಲಕ ಮಂಗಳೂರು ತಲುಪುತ್ತಾರೆ ಎಂದು ನಾರಾಯಣಗೌಡ ಹೇಳಿದರು.
ಆ. 17 ರಿಂದ ಆರಂಭವಾಗುವ 45 ದಿನಗಳ ಸಾಹಸ ಯಾತ್ರೆಯಲ್ಲಿ ಮಡಿಕೇರಿಯ ಪುಷ್ಪ, ಶಿವಮೊಗ್ಗದ ಐಶ್ವರ್ಯ, ಧನಲಕ್ಷ್ಮಿ, ಬೆಂಗಳೂರಿನ ಆಶಾ ಮತ್ತು ಮೈಸೂರಿನ ಬಿಂದು ಭಾಗವಹಿಸುತ್ತಾರೆ ಎಂದು ತಿಳಿಸಿದರು.
2022 ರಲ್ಲಿ ಖೇಲೋ ಇಂಡಿಯಾ ಗೇಮ್ಸ್:
ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್–2021 ಅನ್ನು ಬೆಂಗಳೂರಿನಲ್ಲಿ 2022 ರ ಮಾರ್ಚ್ 5 ರಿಂದ 12 ರವರೆಗೆ ನಡೆಸಲಾಗುವುದು. ಈ ವರ್ಷ ನಡೆಯಬೇಕಿದ್ದ ಈ ಪಂದ್ಯಾವಳಿಯನ್ನು ಕೋವಿಡ್ ಕಾರಣ ಮುಂದೂಡಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.