ಅನುದಾನ (ಸಾಂರ್ಭಿಕ ಚಿತ್ರ)
– ಐಸ್ಟಾಕ್ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರದಿಂದ ಜಿಎಸ್ಟಿ ವ್ಯವಸ್ಥೆ ಸರಳೀಕರಣ, ನರೇಗಾ ರದ್ದು ಮತ್ತಿತರ ಉಪಕ್ರಮಗಳಿಂದ ರಾಜ್ಯಕ್ಕೆ ಬರುತ್ತಿದ್ದ ಅನುದಾನದಲ್ಲಿ ಭಾರಿ ಖೋತಾ ಆಗಿದೆ. ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಕೇಂದ್ರ ಬಜೆಟ್ನಲ್ಲಿ ಸರಿಪಡಿಸಬೇಕು ಎಂದು ಕರ್ನಾಟಕ ಸರ್ಕಾರ ಪಟ್ಟು ಹಿಡಿದಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಶನಿವಾರ ಇಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದ ರಾಜ್ಯದ ಬೇಡಿಕೆಗಳ ಪಟ್ಟಿ ಮುಂದಿಟ್ಟರು.
ಜಿಎಸ್ಟಿ ವ್ಯವಸ್ಥೆ ಸರಳೀಕರಣದ ಬಳಿಕ ರಾಜ್ಯದ ಜಿಎಸ್ಟಿ ಬೆಳವಣಿಗೆ ಶೇ 12ರಿಂದ ಶೇ 5ಕ್ಕೆ ಇಳಿದಿದೆ. ಇದರ ಪರಿಣಾಮವಾಗಿ ಈ ವರ್ಷ ₹ 5,000 ಕೋಟಿ ಕೊರತೆ ಮತ್ತು ವಾರ್ಷಿಕ ₹ 9,000 ಕೋಟಿ ಕೊರತೆ ಉಂಟಾಗುತ್ತಿದೆ. ಕೇಂದ್ರವು ಪಾನ್ ಮಸಾಲಾ ಮೇಲಿನ ಸೆಸ್ ಮತ್ತು ತಂಬಾಕಿನ ಮೇಲಿನ ಅಬಕಾರಿ ಮೂಲಕ ತನ್ನ ನಷ್ಟವನ್ನು ಸರಿದೂಗಿಸಿಕೊಂಡಿದೆ. ಆದರೆ, ರಾಜ್ಯಗಳಿಗೆ ಇದರ ಲಾಭ ಸಿಗುತ್ತಿಲ್ಲ. ರಾಜ್ಯಗಳಿಗೆ ಬಲವಾದ ಆದಾಯ ಸಂರಕ್ಷಣಾ ಕಾರ್ಯವಿಧಾನ ರೂಪಿಸಬೇಕು. ಜಿಎಸ್ಟಿ ಪರಿಹಾರ ಸೆಸ್ನಂತೆಯೇ ಆದಾಯ ನಷ್ಟಕ್ಕೆ ಸಂಪೂರ್ಣ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಹಣಕಾಸಿನ ಸಮಾನತೆ ಮತ್ತು ಸಹಕಾರಿ ಒಕ್ಕೂಟ ಪುನಃಸ್ಥಾಪಿಸಲು ತಂಬಾಕಿನ ಮೇಲಿನ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾ ಮೇಲಿನ ಸೆಸ್ ಅನ್ನು 50:50 ಅನುಪಾತದಲ್ಲಿ ಕೇಂದ್ರ ಹಾಗೂ ರಾಜ್ಯ ಹಂಚಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ನರೇಗಾ ಕಾಯ್ದೆ ರದ್ದುಪಡಿಸಿ ಜಿ–ರಾಮ್–ಜಿ ಕಾಯ್ದೆ ಜಾರಿಗೆ ತಂದಿರುವುದರಿಂದ 13 ಕೋಟಿ ಮಾನವ ದಿನಗಳ ಜೀವನೋಪಾಯ ಭದ್ರತೆ ಒದಗಿಸುವುದನ್ನು ಮುಂದುವರಿಸಲು ಕರ್ನಾಟಕಕ್ಕೆ ₹2,000 ಕೋಟಿ ಬೇಕಾಗುತ್ತದೆ. ಇದು ಆರ್ಥಿಕವಾಗಿ ಸಮರ್ಥನೀಯವಲ್ಲ. ಹೊಸ ವೆಚ್ಚ ಹಂಚಿಕೆಯು ರಾಜ್ಯದ ಹೊರೆ ಹೆಚ್ಚಿಸಿದೆ. ಹೀಗಾಗಿ, ಯೋಜನೆಯ ವಿನ್ಯಾಸ ಮರುಪರಿಶೀಲಿಸಬೇಕು ಹಾಗೂ ಬೇಡಿಕೆ ಆಧಾರಿತ ಉದ್ಯೋಗ ಮರುಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿದರು.
ಜೆಜೆಎಂ ಬಾಕಿ ಕೊಡಿ: ಜಲಜೀವನ್ ಮಿಷನ್ ಅಡಿಯಲ್ಲಿ ಕೇಂದ್ರ ಸರ್ಕಾರ ₹11,786 ಕೋಟಿಯಷ್ಟೇ ಕೊಟ್ಟಿದೆ. ರಾಜ್ಯ ಸರ್ಕಾರ ₹24,598 ಕೋಟಿ ಬಿಡುಗಡೆ ಮಾಡಿದೆ. ಜೆಜೆಎಂ ಕಾಮಗಾರಿಗಳಿಗೆ ಅಡ್ಡಿಯಾಗದಂತೆ ತಡೆಯಲು ಕರ್ನಾಟಕ ಸರ್ಕಾರ ಹೆಚ್ಚುವರಿಯಾಗಿ ₹13,004 ಕೋಟಿ ಬಿಡುಗಡೆ ಮಾಡಿದೆ. ಯೋಜನೆಯನ್ನು ಸಕಾಲಕ್ಕೆ ಮುಗಿಸಲು ಬಾಕಿ ಅನುದಾನವನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಪಿಡಿಪಿಎಸ್ಗೆ ₹796 ಕೋಟಿ: ಬೆಲೆ ಕೊರತೆ ಪಾವತಿ ಯೋಜನೆಯಡಿ (ಪಿಡಿಪಿಎಸ್) ಜೋಳ, ಸೋಯಾಬೀನ್, ಮಾವು, ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ, ಅರಿಶಿನ, ಶುಂಠಿ ಬೆಳೆಗಳನ್ನು ತರಲು ಪ್ರಸ್ತಾಪಿಸಲಾಗಿದೆ. 2026–27 ರಲ್ಲಿ ಸಕಾಲಿಕವಾಗಿ ಪಿಡಿಪಿಎಸ್ ಅನುಷ್ಠಾನಕ್ಕಾಗಿ ಪಿಎಂ ಆಶಾ ಯೋಜನೆಯಡಿ ಹೆಚ್ಚುವರಿಯಾಗಿ ₹796 ಕೋಟಿ ಹಂಚಿಕೆ ಮಾಡಬೇಕು ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.