ಮಂಡ್ಯ: ‘ಕಲ್ಲಿದ್ದಲು ಕೊರತೆ ಇದೆ ಎಂಬ ಕಾರಣಕ್ಕೆ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಬಾರದು. ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಅವಶ್ಯವಿರುವಷ್ಟು ಕಲ್ಲಿದ್ದಲು ತರಿಸಿಕೊಳ್ಳಬೇಕು. ರೈತರಿಗೆ, ಗ್ರಾಹಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು’ ಎಂದರು.
ಎಚ್ಡಿಕೆ ವಿರುದ್ಧ ಟೀಕೆ: ‘ಜೆಡಿಎಸ್ ಪಕ್ಷದ ಬಗ್ಗೆ ನಾನು ಹೆಚ್ಚುಮಾತನಾಡುವುದಿಲ್ಲ. ಆದರೂ ಎಚ್.ಡಿ.ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರುತ್ತಾರೆ. ನಾನೇನು ಮಾಡಲಿ? ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಬಗ್ಗೆ ಮಾತನಾಡುವುದನ್ನು ಬಿಟ್ಟಿದ್ದೇನೆ. ಅವರು ನನ್ನ ಮಾತಿಗೆಕೋಮುವಾದಿ ಬಣ್ಣ ಕಟ್ಟಿ ತಿರುಚುವ ಕೆಲಸ ಮಾಡುತ್ತಾರೆ. ಟೀಕೆ ಮಾಡಿಕೊಳ್ಳಲಿ. ಅವರ ಎಲ್ಲಾ ಹೇಳಿಕೆಗಳನ್ನು ನಿರ್ಲಕ್ಷಿಸುತ್ತೇನೆ’ ಎಂದು ತಿಳಿಸಿದರು.
ಜೆಡಿಎಸ್ ದುರ್ಬಲ: ‘ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ದುರ್ಬಲವಾಗಿದೆ. ಬಲಿಷ್ಠವಾಗಿದ್ದರೆ ಲೋಕಸಭೆ ಚುನಾವಣೆಯಲ್ಲಿ ಸೋಲುತಿತ್ತೇ? ಜಿಲ್ಲೆಯಲ್ಲಿ ಜೆಡಿಎಸ್ ಶಾಸಕರೇಇದ್ದರೂ ಸೋಲು ಅನುಭವಿಸುವಂತಾಯಿತು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.