ADVERTISEMENT

ಬಸ್‌ನಲ್ಲಿ ಕಲ್ಲು ತುಂಬಿ ಸಾಗಿಸಿದರು!

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 4:33 IST
Last Updated 31 ಜುಲೈ 2020, 4:33 IST
ಹುಬ್ಬಳ್ಳಿ ಹೊಸೂರು ವೃತ್ತದ ಬಳಿ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಕಲ್ಲುಗಳನ್ನು ಸಾಗಿಸಲಾಯಿತು
ಹುಬ್ಬಳ್ಳಿ ಹೊಸೂರು ವೃತ್ತದ ಬಳಿ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಕಲ್ಲುಗಳನ್ನು ಸಾಗಿಸಲಾಯಿತು   

ಹುಬ್ಬಳ್ಳಿ: ಕುಂದಗೋಳ–ಹುಬ್ಬಳ್ಳಿ ನಡುವೆ ಸಂಚರಿಸುವ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ, ಸಿಬ್ಬಂದಿ ಗುರುವಾರ ಕಲ್ಲು ಸಾಗಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೊಸೂರು ರಸ್ತೆ ಬಳಿ ರಸ್ತೆ ವಿಭಜಕ ಕಾಮಗಾರಿ ನಡೆಯುತ್ತಿದ್ದು, ಮೊದಲು ರಸ್ತೆಗೆ ಹಾಕಲಾಗಿದ್ದ ಕಲ್ಲುಗಳನ್ನು ತೆಗೆಯಲಾಗಿದೆ. ಗೋಕುಲ ರಸ್ತೆಯ ಬಸ್‌ ಡಿಪೊದಲ್ಲಿ ಉದ್ಯಾನ ಕಾಮಗಾರಿ ನಡೆಯುತ್ತಿರುವುದರಿಂದ, ಅಲ್ಲಿಗೆ ಈ ಕಲ್ಲುಗಳನ್ನು ಸಾಗಿಸಲು ಸಿಬ್ಬಂದಿ ಬಸ್‌ ಬಳಕೆ ಮಾಡಿಕೊಂಡಿದ್ದಾರೆ.

ರಸ್ತೆ ಮೇಲಿದ್ದ ಕಲ್ಲುಗಳನ್ನು ಐದಾರು ಸಿಬ್ಬಂದಿ ಸೇರಿ ಬಸ್‌ಗೆ ತುಂಬಿದ್ದಾರೆ. 50ಕ್ಕಿಂತಲೂ ಹೆಚ್ಚು ಕಲ್ಲುಗಳನ್ನು ತುಂಬಿಕೊಂಡು ಡಿಪೋಗೆ ತೆರಳಿದ್ದಾರೆ. ‘ಗೂಡ್ಸ್‌ನಲ್ಲಿ ಕಲ್ಲು ತುಂಬಿಕೊಂಡು ಹೋಗುವ ಬದಲು, ಬಸ್‌ನಲ್ಲಿ ಯಾಕೆ ತುಂಬಿಕೊಂಡು ಹೋಗುತ್ತಿದ್ದೀರಿ? ಈ ಕೆಲಸಕ್ಕೆ ಕಾರ್ಮಿಕರು ಇರಲಿಲ್ಲವೇ?’ ಎಂದು ಕೆಲ ಸಾರ್ವಜನಿಕರು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಬ್ಬಂದಿ ‘ಮೇಲಧಿಕಾರಿಗಳು ಹೇಳಿದ ಹಾಗೆ ನಾವು ಕೇಳಬೇಕು’ ಎಂದಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಕ ಎಚ್‌. ರಾಮನಗೌಡ, ‘ಕಲ್ಲು ತುಂಬಿಕೊಂಡು ಬಂದ ಬಸ್‌ ಲಾಕ್‌ಡೌನ್‌ ಘೋಷಣೆಯಾದ ದಿನದಿಂದ ಡಿಪೊದಲ್ಲಿಯೇ ಇತ್ತು. ನಿರ್ಬಂಧ ತೆರವುಗೊಳಿಸಿದ್ದರಿಂದ ರೋಡ್‌ ಟೆಸ್ಟ್‌ಗೆ ಹೊರಗೆ ತೆಗೆಯಲಾಗಿತ್ತು. ಟೆಸ್ಟ್ ಮುಗಿಸಿಕೊಂಡು ಬರುವಾಗ ಸಿಬ್ಬಂದಿ ಕಲ್ಲುಗಳನ್ನು ಬಸ್‌ನಲ್ಲಿ ತುಂಬಿಕೊಂಡು ಬಂದಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.