ADVERTISEMENT

ಭಾರತದ ಬೆಳವಣಿಗೆ ಪುರಾತನ ನಾಗರೀಕತೆಯ ಮರುಹುಟ್ಟು: ಜೈಶಂಕರ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 10:29 IST
Last Updated 2 ಏಪ್ರಿಲ್ 2023, 10:29 IST
ಎಸ್. ಜೈಶಂಕರ್  (ಸಂಗ್ರಹ ಚಿತ್ರ)
ಎಸ್. ಜೈಶಂಕರ್ (ಸಂಗ್ರಹ ಚಿತ್ರ)   

ಧಾರವಾಡ: ‘ಭಾರತದ ಬೆಳವಣಿಗೆ ಜಾಗತಿಕ ಬೆಳವಣಿಗೆ ಮಾತ್ರವಲ್ಲ, ಬದಲಿಗೆ ಈ ನೆಲದ ಪುರಾತನ ನಾಗರೀಕಯತೆ ಮರುಹುಟ್ಟು ಕೂಡಾ ಹೌದು’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದರು.

ಇಲ್ಲಿನ ಜೆಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ರಂಗಗಳ ತಜ್ಞರು ಮತ್ತು ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹೀಗೆ ಒಮ್ಮೆ ಇಂಥ ನಾಗರಿಕತೆ ಎದ್ದು ನಿಂತರೆ, ಆದರ ವ್ಯವಸ್ಥೆ ಅಂತರರಾಷ್ಟ್ರೀಯ ಮಟ್ಟದ ಆಲೋಚನಾ ಕ್ರಮವನ್ನೇ ಬದಲಿಸುವ ಶಕ್ತಿ ಹೊಂದಿರುತ್ತದೆ’ ಎಂದರು.

‘ವಿದೇಶದಲ್ಲಿ ಆಗುವ ಯಾವುದೇ ಬದಲಾವಣೆ ಭಾರತದ ಪ್ರತಿ ನಾಗರಿಕನ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ವಿದೇಶಾಂಗ ನೀತಿ ಎಂಬುದೇ ಈಗ ಅನ್ವಯಿಸದು. ಕೋವಿಡ್ ಸಂದರ್ಭ ಭಾರತಕ್ಕೆ ಸಾಕಷ್ಟು ಹೊಸ ಅವಕಾಶವನ್ನು ಸೃಷ್ಟಿಸಿತು’ ಎಂದರು.

‘ಇಂದು ಬದಲಾವಣೆಯ ಕಾಲಘಟ್ಟದಲ್ಲಿ ಭಾರತ ಇದೆ. ತನ್ನ ದೇಶ ಹಾಗೂ ಪ್ರಜೆಗಳ ಹಿತದಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ವಿದೇಶಾಂಗ ನೀತಿಯಲ್ಲಿ ದೇಶ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು ಕೆಲವರ ಪರವಾಗಿರದೆ, ದೇಶದ ಪ್ರತಿ ಪ್ರಜೆಯ ಹಿತ ಕಾಯುವುದೇ ಆಗಿರುತ್ತದೆ. ಕೆಲವೊಂದು ನಿರ್ಧಾರಗಳ ಕುರಿತು ಪ್ರಜೆಗಳು ಅಸಂತುಷ್ಟರಾದರೆ ಅವುಗಳಿಂದ ಹಿಂದೆ ಸರಿಯಲಾಗುತ್ತಿದೆ. ಇನ್ನೂ ಕೆಲವು ದೇಶದ ಭದ್ರತೆಯ ದೃಷ್ಟಿಯಿಂದ ಗೋಪ್ಯವಾಗಿಡಲಾಗುತ್ತದೆ. ಆದರೆ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳ ಹಿಂದೆ ದೇಶದ ಹಿತವಲ್ಲದೆ ಬೇರೇನೂ ಇರದು’ ಎಂದರು.

ADVERTISEMENT

‘ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕೌಶಲ ಮತ್ತು ಪ್ರತಿಭೆಯ ಕೊರತೆ ಇದೆ. ಹೀಗಾಗಿ ಅಂಥ ರಾಷ್ಟ್ರಗಳು ಜಗತ್ತಿನಲ್ಲಿ ಶಿಕ್ಷಣ, ಪ್ರತಿಭೆ, ನಾವೀನ್ಯತೆ ಇರುವ ಕಡೆ ನೋಡುತ್ತಿವೆ. ಇದಕ್ಕೆ ಪೂರಕವಾಗಿ ಚೀನಾ ಮತ್ತು ಅಮೆರಿಕ ನಡುವಿನ ಬಿಕ್ಕಟ್ಟಿನ ಲಾಭ ಭಾರತದಂತ ಪ್ರತಿಭಾವಂತ ರಾಷ್ಟ್ರಕ್ಕೆ ಆಗಲಿದೆ. ಎಲೆಕ್ಟ್ರಾನಿಕ್ ಎಂಬುದು ಇಡೀ ಜಗತ್ತನ್ನೇ ಆಳುತ್ತಿದೆ. ಪ್ರತಿಭೆ ಮತ್ತು ನಾವೀನ್ಯತೆಯನ್ನೇ ಬಯಸುವ ಈ ಕ್ಷೇತ್ರವು ಭಾರತದಲ್ಲಿರುವ ಇಂಥ ಮಾನವ ಸಂಪನ್ಮೂಲದತ್ತ ಕಣ್ಣಿಟ್ಟಿದೆ. ಇದರ ಲಾಭ ದೇಶದ ಜನರಿಗೆ ಆಗಲಿದೆ’ ಎಂದು ಜೈಶಂಕರ್ ಹೇಳಿದರು.

‘ಡಿಜಿಟಲೀಕರಣದತ್ತ ಭಾರತ ದಾಪುಗಾಲಿಡುತ್ತಿರುವುದನ್ನು ಜಗತ್ತು ಬೆರಗುಗಣ್ಣಿನಿಂದ ನೋಡುತ್ತಿದೆ. ಕೆಲ ವರ್ಷಗಳ ಹಿಂದೆ ಕೇವಲ 6 ಕೋಟಿ ಜನ ಬ್ರಾಡ್‌ಬ್ಯಾಂಡ್‌ ಹೊಂದಿದ್ದರು. ಆದರೆ ಇಂದು 80 ಕೋಟಿಗೆ ಏರಿಕೆಯಾಗಿದೆ. ಅಂತರ್ಜಾಲ ವ್ಯವಸ್ಥೆ ಹಿಂದೆ 20 ಕೋಟಿಯಷ್ಟು ಜನರ ಬಳಿ ಇತ್ತು. ಇಂದು 85 ಕೋಟಿ ಜನರಿಗೆ ಅದು ತಲುಪಿದೆ. ಜತೆಗೆ ಚೀನಾ ಗಡಿಯಲ್ಲಿ ಸೇನೆಯ ನಿಯೋಜನೆ, ಭಯೋತ್ಪಾದನೆಯಂಥ ಪಿಡುಗನ್ನು ಬೇರು ಸಹಿತ ಕಿತ್ತೊಗೆದ ಕ್ರಮಗಳಿಂದಾಗಿ ಇಡೀ ಜಗತ್ತೇ ಭಾರತದತ್ತ ಬೆರಗು ಮತ್ತು ಭರವಸೆಯ ಕಣ್ಣುಗಳಿಂದ ನೋಡುತ್ತಿದೆ. ಇವುಗಳಿಗೆ ಪೂರಕವಾಗಿ ಜಗತ್ತಿನ ಹಲವು ರಾಷ್ಟ್ರಗಳಿಗೆ ಭಾರತ ಚಾಚಿದ ನೆರವಿನ ಹಸ್ತುವು, ಭವಿಷ್ಯದಲ್ಲಿ ಶಕ್ತಿ ಕೇಂದ್ರವಾಗುವತ್ತ ಭಾರತ ದಾಪುಗಾಲಿಡುತ್ತಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ಇಂಥ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ದೇಶವನ್ನು ಮುನ್ನೆಡಸಲು ಪ್ರತಿ ರಾಜ್ಯಗಳ ಒಗ್ಗೂಡುವಿಕೆಯೇ ಒಕ್ಕೂಟ ವ್ಯವಸ್ಥೆಯ ಬಲ. ಅದರಲ್ಲೂ ದೇಶದ ಭವಿಷ್ಯದ ದೃಷ್ಟಿಯಲ್ಲಿ ಕರ್ನಾಟಕವು ತಂತ್ರಜ್ಞರ ಉತ್ಪಾದನೆ, ಸ್ಟಾರ್ಟ್‌ಅಪ್ಸ್‌, ನಾವೀನ್ಯತೆ, ವಿದೇಶಿ ಬಂಡವಾಳ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲಿದೆ. ಇದು ಭಾರತದ ಆರ್ಥಿಕತೆ ಮತ್ತು ಜನಪ್ರಿಯತೆ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ’ ಎಂದರು.

ಶಾಸಕ ಅರವಿಂದ ಬೆಲ್ಲದ, ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಇದ್ದರು.

ವಿದೇಶಾಂಗ ಸಚಿವರೊಬ್ಬರು ಧಾರವಾಡಕ್ಕೆ ಭೇಟಿ ನೀಡಿದ ಉದಹಾರಣೆ ಇಲ್ಲ...

‘ವಿದೇಶಾಂಗ ಸಚಿವರೊಬ್ಬರು ಧಾರವಾಡದಂತ ಊರಿಗೆ ಭೇಟಿ ನೀಡಿದ ಉದಾಹರಣೆಯೇ ಇಲ್ಲ. ಆದರೆ ಹೀಗೆ ಆಗಿರುವ ಬದಲಾವಣೆಯೂ ಇಂದಿನ ಹಲವು ಬೆಳವಣಿಗೆಗಳಲ್ಲಿ ಒಂದು’ ಎಂದು ಎಸ್.ಜೈಶಂಕರ್ ಕರ್ನಾಟಕದೊಂದಿಗಿನ ತಮ್ಮ ನೆನಪನ್ನು ಹಂಚಿಕೊಂಡರು.

‘ನಾನು ಸರ್ಕಾರಿ ನೌಕರಿಗೆ ಸೇರಿದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ತರಬೇತಿ ಪಡೆದೆ. ಅಜ್ಜ ಮತ್ತು ಅಜ್ಜಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಅವರನ್ನು ಕಾಣಲು ವಾರಾಂತ್ಯದಲ್ಲಿ ಚಿಕ್ಕೋಡಿಯಿಂದ ಬೆಂಗಳೂರಿಗೆ ಹೋಗುತ್ತಿದೆ. ಆಗ ಬಸ್ಸು ಬದಲಿಸಲು ಧಾರವಾಡವೇ ಮುಖ್ಯ ಕೇಂದ್ರವಾಗಿತ್ತು. ಹೀಗಾಗಿ ಧಾರವಾಡ ನನಗೆ ಚಿರಪರಿಚಿತ ನಗರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.