
ಲಕ್ಷ್ಮಿ ಹೆಬ್ಬಾಳಕರ
ಬೆಳಗಾವಿ: ‘ರಾಜ್ಯದ ಮಹಿಳೆಯರಿಗೆ ನೀಡಿದ ವಚನವನ್ನು ನಮ್ಮ ಸರ್ಕಾರ ಹಾಗೂ ನನ್ನ ಇಲಾಖೆ ಬದ್ಧತೆಯಿಂದ ಪಾಲಿಸಿದೆ. ಗೃಹಲಕ್ಷ್ಮೀ ಹಣ 23 ಕಂತು ಹಾಕಿದ್ದೇವೆ ಎಂದು ನಾನು ಸದನದಲ್ಲಿ ಹೇಳಿದ್ದೇನೆ. ಅದಕ್ಕೆ ನಾನು ಈಗಲೂ ಬದ್ಧ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪ್ರತಿಕ್ರಿಯಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮಹಿಳೆ ಸ್ವಾಭಿಮಾನದಿಂದ ಜೀವನ ಮಾಡಬೇಕು ಎನ್ನುವ ಉದ್ದೇಶದಿಂದ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಿದ್ದೇವೆ. ಅದನ್ನು ಜವಾಬ್ದಾರಿಯಿಂದ ನಿಭಾಯಿಸುತ್ತಿದ್ದೇನೆ’ ಎಂದರು.
‘ಬಿಜೆಪಿಯವರು ಕೇಳಿದ್ದು ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮೀ ಹಣದ ಬಗ್ಗೆ. ಪ್ರತಿ ತಿಂಗಳು ನನ್ನ ಇಲಾಖೆಯಿಂದ ಹಣಕಾಸು ಇಲಾಖೆಗೆ ಪತ್ರ ಕಳುಹಿಸುತ್ತೇನೆ. ಅಲ್ಲಿಂದ ಬಂದ ಕೂಡಲೇ ನಾನು ಫೈಲ್ ಮುಂದಕ್ಕೆ ಕಳಿಸುತ್ತೇನೆ. ಆ ಎರಡು ತಿಂಗಳು ಹಣ ಬಂದಿಲ್ಲ ಅಂದರೆ ಹಣಕಾಸು ಇಲಾಖೆಯನ್ನು ಹೇಳಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಬಿಜೆಪಿಯವರು ₹5,000 ಕೋಟಿ ಹಣ ಬಿಡುಗೆಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಇದರ ಬಗ್ಗೆ ಹೆಚ್ಚಿಗೆ ಮಾತನಾಡಬೇಕಿಲ್ಲ. ಹಣಕಾಸು ಇಲಾಖೆಯಿಂದ ಎಷ್ಟು ಬಿಡುಗಡೆ ಆಗಿದೆಯೋ ಅಷ್ಟು ಹಣ ಸಂದಾಯ ಮಾಡಿದ್ದೇವೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.