ಸಾಂದರ್ಭಿಕ ಚಿತ್ರ
ಸುವರ್ಣ ವಿಧಾನಸೌಧ (ಬೆಳಗಾವಿ): ಕೇಂದ್ರ ಸರ್ಕಾರವು ಜಿಎಸ್ಟಿಯನ್ನು ತರ್ಕಬದ್ಧಗೊಳಿಸಿದ್ದರಿಂದಾಗಿ ಕರ್ನಾಟಕಕ್ಕೆ ₹14,500 ಕೋಟಿ ನಷ್ಟವಾಗುತ್ತದೆ ಎಂದು ರಾಜ್ಯ ಸರ್ಕಾರವು ಅಂದಾಜಿಸಿದೆ.
ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾದ 2025–26ನೇ ಸಾಲಿನ ಮಧ್ಯವಾರ್ಷಿಕ ಆರ್ಥಿಕ ಸ್ಥಿತಿಗತಿ ವರದಿಯಲ್ಲಿ ಈ ಮಾಹಿತಿ ಇದೆ.
ಜಿಎಸ್ಟಿಯ ನಾಲ್ಕು ಹಂತಗಳನ್ನು ಎರಡಕ್ಕೆ ಇಳಿಸಿದ್ದರಿಂದ ಮತ್ತು ಜಿಎಸ್ಟಿ–ಸೆಸ್ ವಿಲೀನಗೊಳಿಸಿದ್ದರಿಂದ ರಾಜ್ಯ ಸರ್ಕಾರಕ್ಕೆ ಭಾರಿ ನಷ್ಟವಾಗುತ್ತದೆ. ಈ ನಷ್ಟವನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಿ ಎಂದು ಜಿಎಸ್ಟಿ ಮಂಡಳಿಯ 56ನೇ ಸಭೆಯಲ್ಲಿ ಮಂಡಿಸಲಾದ ಪ್ರಸ್ತಾವಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ ಮನವಿಗಳಿಗೆ ಸೂಕ್ತ ಸ್ಪಂದನೆ ವ್ಯಕ್ತವಾಗಿಲ್ಲ. ಹೀಗಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ ನಷ್ಟವಾಗಲಿದೆ ಎಂಬ ಮಾಹಿತಿ ವರದಿಯಲ್ಲಿದೆ.
2024–25ನೇ ಆರ್ಥಿಕ ವರ್ಷದ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ಸಂಗ್ರಹವಾಗಿದ್ದ ವಾಣಿಜ್ಯ ತೆರಿಗೆ, ಅಬಕಾರಿ ತೆರಿಗೆ, ಮೋಟಾರು ವಾಹನ ತೆರಿಗೆಗಳಲ್ಲಿ, ಈ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಕ್ರಮವಾಗಿ ಶೇ 8, ಶೇ 10.6, ಶೇ 4.9ರಷ್ಟು ಬೆಳವಣಿಗೆ ದಾಖಲಿಸಿವೆ. ನೋಂದಣಿ ಮತ್ತು ಮುದ್ರಾಂಕ ಸಂಗ್ರಹವು ಶೇ 1ರಷ್ಟು ಇಳಿಕೆಯಾಗಿದೆ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.