ADVERTISEMENT

ಅಭಿಪ್ರಾಯ ಭೇದ ಚರ್ಚೆಯಾಗಲಿ: ಡಾ. ದೊಡ್ಡರಂಗೇಗೌಡ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 21:14 IST
Last Updated 8 ಜನವರಿ 2023, 21:14 IST
ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಸ್ಪರ ಚರ್ಚಿಸಿದರು  –ಪ್ರಜಾವಾಣಿ ಚಿತ್ರ 
ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಸ್ಪರ ಚರ್ಚಿಸಿದರು  –ಪ್ರಜಾವಾಣಿ ಚಿತ್ರ    

ಕನಕ–ಶರೀಫ–ಸರ್ವಜ್ಞ ಪ್ರಧಾನ ವೇದಿಕೆ(ಹಾವೇರಿ): ‘ಸಾಹಿತ್ಯ ಸಮ್ಮೇಳನವನ್ನು ವಿರೋಧಿಸಿದ ಸಾಹಿತಿಗಳು ಕಸಾಪಗೆ ಬಂದು ಅಭಿಪ್ರಾಯ ಭೇದಗಳನ್ನು ಮುಕ್ತವಾಗಿ ಚರ್ಚಿಸಲಿ. ಟೀಕೆಯಿಂದ ಯಾವ ಪ್ರಯೋಜನವೂ ಇಲ್ಲ’ ಎಂದು ಸಮ್ಮೇಳನದ ಅಧ್ಯಕ್ಷ ಡಾ. ದೊಡ್ಡರಂಗೇಗೌಡ ಸಲಹೆ ನೀಡಿದರು.

ಸಮ್ಮೇಳನದ ಸಮಾರೋಪದಲ್ಲಿ ಅಧ್ಯಕ್ಷರ ನುಡಿಯಾಡಿದ ಅವರು, ‘ವಿಶ್ವ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯಕ್ಕೆ ದೊಡ್ಡ ಸ್ಥಾನವಿದೆ. ಕನ್ನಡಿಗರೆಲ್ಲ ಒಂದಾಗಿ ಮತ್ತಷ್ಟು ಉನ್ನತಿಗೆ ಕೊಂಡೊಯ್ಯಬೇಕಿದೆ. ಟೀಕೆಗಳು ಪುನರ್ ಜೀವನಕ್ಕೆ ಕಾರಣವಾಗಬೇಕು. ವಿರೋಧಿಗಳು‌ ನಮ್ಮ ಜೊತೆ‌ ಕೈಜೋಡಿಸಿದರೆ, ಕನ್ನಡ ಕುಟುಂಬ ಮತ್ತಷ್ಟು ದೊಡ್ಡದಾಗಿ, ಹೃದಯವಂತಿಕೆ‌ ಪಲ್ಲವಿಸುವಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹದಾಯಿ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು
ಹಿಂಪಡೆದಿದ್ದೇವೆ, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ‌ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಉನ್ನತ ಮಟ್ಟದ‌ ಸಮಿತಿ ರಚಿಸುವುದಾಗಿ ಹೇಳಿರು
ವುದು ಹೊಸ ಭರವಸೆ ಮೂಡಿಸಿದೆ. ಮುಂದಿನ ವರ್ಷ ಮಂಡ್ಯದಲ್ಲಿ ನಡೆಯಲಿರುವ ಸಮ್ಮೇಳನದ ಹೊತ್ತಿಗೆ, ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಿರಲಿ. ಎಲ್ಲರೂ ಒಂದಾಗಿ ಕನ್ನಡ ಬಾವುಟ ಹಾರಿಸೋಣ’ ಎಂದು ಆಶಿಸಿದರು.

ADVERTISEMENT

‘ಸಾಹಿತ್ಯ ರೋಗಗ್ರಸ್ತ ಮನಸ್ಸಿಗೆ ಕಾಯಕಲ್ಪದ ತೇಜಸ್ಸು ತುಂಬುತ್ತದೆ. ಮೃಗೀಯ ಮನಸ್ಸು ಪಳಗಿಸುವಂಥ ಮಂತ್ರ ಶಕ್ತಿ ಅದಕ್ಕಿದೆ. ಹೃದಯಗಳ ಸಮ್ಮಿಲನದಲ್ಲಿ ಎಲ್ಲ ಮಾಲಿನ್ಯ ಕಳೆದು ಹೋಗಲಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.