ADVERTISEMENT

ಹುಳಿಮಾವು ಕೆರೆ ಕೋಡಿ ಒಡೆದು ಹರಿದ ನೀರು, ರಜೆ ಮೂಡ್‌‌ನಲ್ಲಿದ್ದವರಿಗೆ ನೀರಿನ ಶಾಕ್

ವಿಡಿಯೋ ಸುದ್ದಿ: ತಗ್ಗು ಪ್ರದೇಶ ಜಲಾವೃತ– ಎರಡು ಸಾವಿರ ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2019, 12:26 IST
Last Updated 24 ನವೆಂಬರ್ 2019, 12:26 IST
ಹುಳಿಮಾವು ಕೆರೆ ಕೋಡಿ ಒಡೆದ ಸ್ಥಳಕ್ಕೆ ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್ ಕುಮಾರ್ ಭೇಟಿ ನೀಡಿ ನೀರು ನಿಲ್ಲಿಸುವ ಪ್ರಯತ್ನ ನಡೆಸಿರುವುದು
ಹುಳಿಮಾವು ಕೆರೆ ಕೋಡಿ ಒಡೆದ ಸ್ಥಳಕ್ಕೆ ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್ ಕುಮಾರ್ ಭೇಟಿ ನೀಡಿ ನೀರು ನಿಲ್ಲಿಸುವ ಪ್ರಯತ್ನ ನಡೆಸಿರುವುದು   

ಬೆಂಗಳೂರು: ಬೊಮ್ಮನಹಳ್ಳಿ ವಲಯದ ಅರಕೆರೆ ವಾರ್ಡ್‌ನಲ್ಲಿರುವ (ವಾಡ್೯ -193 ) ಹುಳಿಮಾವು ಕೆರೆಯ ಕೋಡಿ ಒಡೆದು ಅಕ್ಷಯ ಗಾರ್ಡನ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ಆಸುಪಾಸಿನ ಪ್ರದೇಶಗಳು ಜಲಾವೃತವಾಗಿವೆ. ಇಲ್ಲಿ ತಗ್ಗು ಪ್ರದೇಶದಲ್ಲಿರುವ ಅನೇಕ ಮನೆಗಳಿಗೂ ನೀರು ನುಗ್ಗಿದೆ.

ನೀರು ನುಗ್ಗಿದ್ದರಿಂದ ಆಸುಪಾಸಿನಲ್ಲಿರುವ ಆರೇಳು ಬಡಾವಣೆಗಳಲ್ಲಿರುವಎರಡು ಸಾವಿರ ಮನೆಗಳು ಜಲಾವೃತವಾಗಿವೆ. ಇದರಿಂದಾಗಿ ಜನರು ತೀವ್ರ ಪರದಾಟ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಧಾವಿಸಿರುವ ಬಿಬಿಎಂಪಿ ಅಧಿಕಾರಿಗಳು ಕೋಡಿ ಒಡೆದಿರುವ ಜಾಗಕ್ಕೆ ಜೆಸಿಬಿಯಿಂದ ಮಣ್ಣು ತುಂಬಿ, ಕೆರೆಯ ನೀರು ಖಾಲಿ ಆಗದಂತೆ ತಡೆಯುವ ‍ಪ್ರಯತ್ನ ನಡೆಸಿದ್ದಾರೆ.ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಒಡೆದ ಕೆರೆ ಕೋಡಿಯನ್ನು ದುರಸ್ತಿ ಪಡಿಸುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ಭಾನುವಾರ ರಜೆಯಾದ್ದರಿಂದ ನಿವಾಸಿಗಳೆಲ್ಲಾ ರಜೆಯ ಮೂಡ್‌‌ನಲ್ಲಿದ್ದರು ಆದರೆ, ಇದ್ದಕ್ಕಿದ್ದಂತೆ ನೀರು ಮನೆಯೊಳಗೆ ನುಗ್ಗಿದ್ದರಿಂದ ಪರದಾಡುವಂತಾಗಿದೆ. ಕಾರು, ದ್ವಿಚಕ್ರ ವಾಹನಗಳು ಓಡಾಡದಂತಹ ಪರಿಸ್ಥಿತಿ ರಸ್ತೆಗಳಲ್ಲಿ ನಿರ್ಮಾಣವಾಗಿದ್ದರೆ, ಮನೆಯೊಳಗೆ ನೀರು ನುಗ್ಗಿದ್ದರಿಂದ ಅಡುಗೆ, ದಿನಸಿ ಸಾಮಾನು ನೀರಿನಲ್ಲಿ ಕೊಚ್ಚಿಹೋಗಿವೆ.

ಈ ಬಾರಿ ನಗರದಲ್ಲಿ ಭಾರಿ ಮಳೆಯಾದ್ದರಿಂದ ಹುಳಿಮಾವು ಕೆರೆ ಭರ್ತಿಯಾಗಿತ್ತು. ಕಳೆದ ವರ್ಷಕ್ಕಿಂತ ಅಧಿಕ ನೀರು ಶೇಖರಣೆಯಾಗಿತ್ತು.

ಬಿಡಿಎ ಸುಪರ್ದಿಯಲ್ಲಿರುವ ಕೆರೆಯನ್ನು ದುರಸ್ತಿ ಮಾಡಿ ಅಭಿವೃದ್ದಿ ಪಡಿಸುವ ಸಲುವಾಗಿ ನೀರು ಖಾಲಿ ಮಾಡುವ ಕೆಲಸ ಆರಂಭವಾಗಿತ್ತು. ನಿರೀಕ್ಷಿತ ಪ್ರಮಾಣಕ್ಕಿಂತಹೆಚ್ಚಿನ ರಭಸದಲ್ಲಿ ನೀರು ಹರಿದಿದ್ದರಿಂದ ಹತೋಟಿಗೆ ತರಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಕೆಲಸಗಾರರು ಅರ್ಧದಲ್ಲಿ ಕೆಲಸ ನಿಲ್ಲಿಸಿ ಜಾಗ ಖಾಲಿ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.