ADVERTISEMENT

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಆಮರಣಾಂತ ಉಪವಾಸದ ಎಚ್ಚರಿಕೆ

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ‘2ಎ’ ಮೀಸಲಾತಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 16:16 IST
Last Updated 11 ಫೆಬ್ರುವರಿ 2021, 16:16 IST
ತುಮಕೂರು ತಾಲ್ಲೂಕಿನ ಬೆಳ್ಳಾವಿ ಕ್ರಾಸ್‌ನಲ್ಲಿ ಸಾಗಿದ ಲಿಂಗಾಯತ ಪಂಚಮಸಾಲಿ ಸಮುದಾಯದ ಪಾದಯಾತ್ರೆಯಲ್ಲಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ವಿಜಯಾನಂದ ಕಾಶಪ್ಪನವರ್ ಹಾಗೂ ಸಮಾಜದ ಮುಖಂಡರು
ತುಮಕೂರು ತಾಲ್ಲೂಕಿನ ಬೆಳ್ಳಾವಿ ಕ್ರಾಸ್‌ನಲ್ಲಿ ಸಾಗಿದ ಲಿಂಗಾಯತ ಪಂಚಮಸಾಲಿ ಸಮುದಾಯದ ಪಾದಯಾತ್ರೆಯಲ್ಲಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ವಿಜಯಾನಂದ ಕಾಶಪ್ಪನವರ್ ಹಾಗೂ ಸಮಾಜದ ಮುಖಂಡರು   

ತುಮಕೂರು: ಪ್ರವರ್ಗ ‘2ಎ’ ಮೀಸಲಾತಿ ಕಲ್ಪಿಸುವವರೆಗೂ ನಿರಂತರವಾಗಿ ಹೋರಾಟ ನಡೆಸಲು ಲಿಂಗಾಯತ ಪಂಚಮಸಾಲಿ ಸಮಾಜವು ನಿರ್ಧರಿಸಿದೆ.

ಬುಧವಾರ ರಾತ್ರಿ ತುಮಕೂರಿನಲ್ಲಿ ಸಮಾಜದ ಸಚಿವರು, ಶಾಸಕರ ಸಭೆ ನಡೆಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ನಗರದಲ್ಲಿಯೇ ವಾಸ್ತವ್ಯ ಹೂಡಿದರು. ಗುರುವಾರ ಬೆಳಿಗ್ಗೆ ಸೀಬಿ ತಲುಪಿ ಅಲ್ಲಿಂದ ಪಾದಯಾತ್ರೆ ಆರಂಭಿಸಿದರು.

‘ಫೆ.21ರಂದು ಬೆಂಗಳೂರಿನ ನೈಸ್ ರಸ್ತೆಯ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಅಂದು ಸಂಜೆಯಿಂದಲೇ ಬಜೆಟ್ ಅಧಿವೇಶನದ ವರೆಗೆ ನಿರಂತರವಾಗಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ. ಅಷ್ಟರಲ್ಲಿ ಈ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ಬಜೆಟ್ ಅಧಿವೇಶನದ ದಿನದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ’ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾಹಿತಿ ನೀಡಿದರು.

ADVERTISEMENT

ಸಮಾವೇಶಕ್ಕೆ ಬರುವವರು ಒಂದು ವಾರಕ್ಕೆ ಆಗುವಷ್ಟು ಬಟ್ಟೆಗಳನ್ನು ತೆಗೆದುಕೊಂಡು ಬನ್ನಿ. ರಾಜ್ಯದ ಐದು ಸಾವಿರ ಹಳ್ಳಿಗಳಲ್ಲಿ ಪಂಚಮಸಾಲಿಗಳು ಬಹುಸಂಖ್ಯಾತರಾಗಿದ್ದಾರೆ. ಈ ಹಳ್ಳಿಗಳಿಂದ ತಲಾ ಒಂದು ಬಸ್ ವ್ಯವಸ್ಥೆ ಮಾಡಿಕೊಂಡು ಬರಬೇಕು.
ಸಮಾವೇಶ ಪೂರ್ಣಗೊಳಿಸಿ ಹೊರಡುವುದಷ್ಟೇ ಅಲ್ಲ, ಮುಂದಿನ ಹೋರಾಟಕ್ಕೂ ಸಿದ್ಧವಾಗಿ ಬನ್ನಿ ಎಂದು ಹೇಳಿದರು.

‘ನಮ್ಮ ಸಮಾಜದ ಜನಪ್ರತಿನಿಧಿಗಳು ಸಮಾವೇಶಕ್ಕೆ ಬರುವ ಜನರಿಗೆ ವಾಹನಗಳ ವ್ಯವಸ್ಥೆ ಮಾಡಬೇಕು. ನಮ್ಮ ಸಮಾಜದ ಋಣದಲ್ಲಿರುವ ಇತರೆ ಸಮಾಜಗಳ ಜನಪ್ರತಿನಿಧಿಗಳ ಸಹಕಾರದಿಂದಲೂ ವಾಹನಗಳ
ವ್ಯವಸ್ಥೆ ಮಾಡಿಕೊಂಡು ಬನ್ನಿ’ ಎಂದು ಸಮುದಾಯದವರಿಗೆ ಕಿವಿಮಾತು ಹೇಳಿದರು.

ಸಿ.ಸಿ.ಪಾಟೀಲ್ ವಿರುದ್ಧ ಆಕ್ರೋಶ

‘ಅವರಿಗೆ ನಮ್ಮ ಪಾದಯಾತ್ರೆ ನಿಲ್ಲಿಸಬೇಕು. ಬಿ.ಎಸ್.ಯಡಿಯೂರಪ್ಪ ಅವರಿಂದ ಪ್ರಶಂಸೆ ಪಡೆಯಬೇಕು ಎನ್ನುವುದಷ್ಟೇ ಗುರಿ’ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಸಚಿವ ಸಿ.ಸಿ.ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.