ADVERTISEMENT

ಲಾಕ್‌ಡೌನ್‌ ಆದರೆ ಅದಕ್ಕೆ ಕಾಂಗ್ರೆಸ್‌ ಹೊಣೆ: ಗೃಹ ಸಚಿವ ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 14:08 IST
Last Updated 10 ಜನವರಿ 2022, 14:08 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಬೆಂಗಳೂರು: ಕೋವಿಡ್‌ ಉಲ್ಬಣಗೊಂಡು ರಾಜ್ಯದಲ್ಲಿ ತಿಂಗಳುಗಟ್ಟಲೆ ಲಾಕ್‌ಡೌನ್‌ ಜಾರಿಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್‌ ಪಕ್ಷವೇ ಅದಕ್ಕೆ ಹೊಣೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಕೋವಿಡ್‌ ಹೆಚ್ಚುತ್ತಿರುವ ಸಂದರ್ಭದಲ್ಲೇ ಪಾದಯಾತ್ರೆ ಕೈಗೊಳ್ಳುವ ಮೂಲಕ ಕಾಂಗ್ರೆಸ್‌ ನಾಯಕರು ಜನರ ಬದುಕಿನ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಪಾಲಿಸದೇ ಪಾದಯಾತ್ರೆ ಮಾಡುತ್ತಿದ್ದಾರೆ. ಸೋಂಕು ಉಲ್ಬಣಿಸಿ ಲಾಕ್‌ಡೌನ್‌ ಅನಿವಾರ್ಯವಾದರೆ ಕಾಂಗ್ರೆಸ್‌ ಅದರ ಹೊಣೆ ಹೊರಬೇಕಾಗುತ್ತದೆ’ ಎಂದರು.

ವಾರಾಂತ್ಯದ ಕರ್ಫ್ಯೂವನ್ನು ಬೆಂಗಳೂರಿನಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ನಿತ್ಯದ ದುಡಿಮೆಯಲ್ಲಿ ಬದುಕುವವರಿಗೆ ಇಂತಹ ಕ್ರಮಗಳಿಂದ ತೊಂದರೆ ಆಗಿದೆ. ಆದರೆ, ಕೊರೊನಾ ವೈರಾಣು ಸೋಂಕಿನಿಂದ ಬೆಂಗಳೂರಿನ ಜನರನ್ನು ರಕ್ಷಿಸಲು ಇದು ಅನಿವಾರ್ಯವಾಗಿದೆ. ಇಂತಹ ಸಮಯದಲ್ಲಿ ಪಾದಯಾತ್ರೆಯಿಂದ ಆತಂಕ ಸೃಷ್ಟಿಸುತ್ತಿದ್ದಾರೆ. ಬೆಂಗಳೂರಿನ ಜನರ ಪ್ರಾಣ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧ ಎಂದು ಹೇಳಿದರು.

ADVERTISEMENT

‘ಕೋವಿಡ್‌ ಮಾರ್ಗಸೂಚಿ ಪಾಲಿಸುವುದಿಲ್ಲ, ಬೇಕಾದರೆ ಜೈಲಿಗೆ ಹಾಕಿ ಎಂದು ಕಾಂಗ್ರೆಸ್‌ ನಾಯಕರು ಸವಾಲು ಹಾಕಿದ್ದಾರೆ. ಇದು ಅವರ ಉದ್ಧಟತನ ತೋರಿಸುತ್ತದೆ. ಕಾಂಗ್ರೆಸ್‌ ನಾಯಕರ ಬಗ್ಗೆ ಜನ ಸಾಮಾನ್ಯರಿಗೆ ಜುಗುಪ್ಸೆ ಬರುತ್ತಿದೆ’ ಎಂದು ಜ್ಞಾನೇಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.