ADVERTISEMENT

ಕೈಗಾರಿಕಾ ಎಫ್‌ಎಆರ್; ಶೇ 75ಕ್ಕೆ ಹೆಚ್ಚಳ: ಸಚಿವ ಎಂ.ಬಿ.ಪಾಟೀಲ

ವಸತಿ ಸೌಕರ್ಯ, ಕೈಗಾರಿಕಾ ಟೌನ್‌ಶಿಪ್ ಅಭಿವೃದ್ಧಿಗೆ ಸಮ್ಮತಿ: ಪಾಟೀಲ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 0:30 IST
Last Updated 13 ಫೆಬ್ರುವರಿ 2026, 0:30 IST
<div class="paragraphs"><p> ಎಂ.ಬಿ.ಪಾಟೀಲ</p></div>

ಎಂ.ಬಿ.ಪಾಟೀಲ

   

ಬೆಂಗಳೂರು: ಕೈಗಾರಿಕಾ ನಿವೇಶನಗಳಲ್ಲಿ ಮಹಡಿ ವಿಸ್ತೀರ್ಣ ಅನುಪಾತವನ್ನು (ಎಫ್ಎಆರ್‌) ಕೈಗಾರಿಕಾ ಸ್ನೇಹಿಯಾಗಿ ಮಾರ್ಪಡಿಸಿ ಆದೇಶ ಹೊರಡಿಸಲಾಗಿದೆ. ಈ ಕ್ರಮದಿಂದ ಕೈಗಾರಿಕಾ ಪ್ರದೇಶಗಳಲ್ಲಿ ರಿಯಲ್‌ ಎಸ್ಟೇಟ್‌ ಚಟುವಟಿಕೆಗಳು ಗರಿಗೆದರಲಿವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಇದುವರೆಗೂ ಕೈಗಾರಿಕಾ ನಿವೇಶನಗಳಲ್ಲಿ ಶೇಕಡ 65ರಷ್ಟು ಭೂಮಿಯನ್ನು ಮಾತ್ರ ಉದ್ಯಮದ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲು ಅವಕಾಶವಿತ್ತು. ಈಗ ಶೇ 75ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಕೈಗಾರಿಕೆಗಳಿಗೋಸ್ಕರ ಹೆಚ್ಚು ಜಮೀನು ಸ್ವಾಧೀನ ಪಡಿಸಿಕೊಳ್ಳುವುದು ತಪ್ಪಲಿದೆ. ಆರ್ಥಿಕ ಹೊರೆಯೂ ತಗ್ಗಲಿದೆ. ರೈತರಿಗೂ ಅನುಕೂಲವಾಗಲಿದೆ ಎಂದಿದ್ದಾರೆ. 

ADVERTISEMENT

ಹಳೆಯ ಎಫ್ಎಆರ್‌ ಪ್ರಮಾಣದಲ್ಲಿ ಹೂಡಿಕೆದಾರರಿಗೆ ಅಡಚಣೆಗಳಿದ್ದವು. ಒಂದು ಉದ್ಯಮಕ್ಕೆ 10 ಎಕರೆ ಜಾಗ ಕೊಟ್ಟರೆ ಅದರಲ್ಲಿ 6.5 ಎಕರೆಯನ್ನು ಮಾತ್ರ ಬಳಸಿಕೊಳ್ಳಬಹುದಿತ್ತು. ಉಳಿದ ಜಾಗವನ್ನು ಪಾರ್ಕಿಂಗ್, ಕಟ್ಟಡದ ನಾಲ್ಕೂ ಬದಿಗಳಲ್ಲಿ ಸೆಟ್‌ ಬ್ಯಾಕ್‌ಗೆ ಬಿಡಬೇಕಿತ್ತು. 7 ಮೀಟರ್‌ ಎತ್ತರದ ಕೈಗಾರಿಕಾ ಕಟ್ಟಡಗಳಲ್ಲಿ ಸೆಟ್-ಬ್ಯಾಕ್‌ಗಾಗಿ ಮುಂಭಾಗದಲ್ಲಿ 1.5 ಮೀಟರ್‌, ಹಿಂಭಾಗ, ಎಡ ಮತ್ತು ಬಲ ಬದಿಗಳಲ್ಲಿ ತಲಾ 1 ಮೀಟರ್‌ ಜಾಗ ಬಿಡಬೇಕಿತ್ತು. ಹೊಸ ನಿಯಮದಿಂದಾಗಿ 1.5 ಮೀಟರ್‌ ಮತ್ತು ಯಾವುದಾದರೂ ಒಂದು ಪಾರ್ಶ್ವದಲ್ಲಿ (ಎಡ/ಬಲ) 1 ಮೀಟರ್‌ ಬಿಟ್ಟರೆ ಸಾಕು. ಇದೇ ರೀತಿ 15 ಮೀಟರ್‌ ಎತ್ತರದ ಕಟ್ಟಡಗಳಿಗೆ ಮುಂಬದಿಯಲ್ಲಿ 3ರಿಂದ 10 ಮೀಟರ್‌ ಮತ್ತು ಉಳಿದ ಮೂರು ಕಡೆಗಳಲ್ಲಿ 1.5 ಮೀಟರ್‌ನಿಂದ 8 ಮೀಟರ್‌ ಜಾಗವನ್ನು ಖಾಲಿ ಬಿಡಬೇಕಿತ್ತು. ಈಗ ಕ್ರಮವಾಗಿ 2ರಿಂದ 6 ಮೀಟರ್‌ ಮತ್ತು 1.5 ಮೀಟರ್‌ನಿಂದ 6 ಮೀಟರ್‌ಗೆ ಇಳಿಸಲಾಗಿದೆ ಎಂದು  ಹೇಳಿದ್ದಾರೆ.

ಹಳೆಯ ನಿಯಮಾವಳಿಗಳಲ್ಲಿ ಉದ್ಯೋಗಿಗಳ ವಸತಿ ಸೌಕರ್ಯ ಮತ್ತು ಕೈಗಾರಿಕಾ ಟೌನ್‌ಶಿಪ್ ಅಭಿವೃದ್ಧಿಯನ್ನು ನಿರ್ಬಂಧಿಸಲಾಗಿತ್ತು. ಪರಿಷ್ಕೃತ ದಲ್ಲಿ ಸಾಮಾನ್ಯ ಕೈಗಾರಿಕಾ ಪ್ಲಾಟ್‌ಗಳಲ್ಲಿ ಶೇ 15ರಷ್ಟು ಪ್ರದೇಶ ವಸತಿ ಸೌಕರ್ಯ ಕಲ್ಪಿಸಲು ಮತ್ತು ಕನಿಷ್ಠ 50 ಎಕರೆ ವಿಸ್ತೀರ್ಣದ ಕೈಗಾರಿಕಾ ಪ್ಲಾಟ್‌ಗಳಲ್ಲಿ ಶೇ 10ರಷ್ಟು ಪ್ರದೇಶ ವಸತಿ ಮತ್ತು ವಾಣಿಜ್ಯ ಉದ್ದೇಶದ ಕಟ್ಟಡಗಳ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು ಎಂದು ವಿವರ ನೀಡಿದ್ದಾರೆ. 

ಪ್ರೀಮಿಯಂ ದರ್ಜೆಯ ಕೈಗಾರಿಕಾ ನಿವೇಶನಗಳಲ್ಲಿ ಎಫ್ಎಆರ್‌ ಅನ್ನು 5.2ಕ್ಕೆ ಏರಿಸಲಾಗಿದೆ. ಈ ನಿಯಮಗಳು ಕೈಗಾರಿಕಾ ಪ್ರದೇಶಗಳು, ವಿಶೇಷ ಹೂಡಿಕೆ ವಲಯಗಳು, ಏಕಘಟಕ ಸಂಕೀರ್ಣ ಗಳು, ಕೈಗಾರಿಕಾ ಪ್ರದೇಶಗಳ ವ್ಯಾಪ್ತಿಯಲ್ಲಿನ ವಸತಿ ಮತ್ತು ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣ ಯೋಜನೆಗಳಿಗೆ ಅನ್ವಯಿಸಲಿವೆ ಎಂದರು.

ರೈತರಿಗೂ ಅನುಕೂಲ

ಪರಿಷ್ಕೃತ ನಿಯಮಗಳಿಂದ ಭೂ ಸ್ವಾಧೀನ ಕಡಿಮೆ ಮಾಡಬಹುದು. ಭೂಮಿ ಕಳೆದುಕೊಳ್ಳುವ ಕೆಲವು ರೈತರು ನಗದು ಪರಿಹಾರಕ್ಕೆ ಪರ್ಯಾಯವಾಗಿ ಅಭಿವೃದ್ಧಿ ಪಡಿಸಿದ ಭೂಮಿಯನ್ನು ಪರಿಹಾರ ರೂಪದಲ್ಲಿ ಪಡೆಯಲಿದ್ದು, ಅಂತಹವರಿಗೂ ಇದರಿಂದ ಹೆಚ್ಚಿನ ಲಾಭವಾಗಲಿದೆ ಎಂದು ಎಂ.ಬಿ.ಪಾಟೀಲ ಹೇಳಿದ್ದಾರೆ.

ವಾಹನ ನಿಲುಗಡೆಗೆ ಕಡ್ಡಾಯವಾಗಿ ಬಿಡಬೇಕಿದ್ದ ಜಾಗದ ಪ್ರಮಾಣವನ್ನು ಇಳಿಕೆ ಮಾಡಲಾಗಿದೆ. ಕೈಗಾರಿಕಾ ನಿವೇಶನದ ಒಟ್ಟು ಜಾಗದಲ್ಲಿ ಶೇ 5ರಷ್ಟು ಜಾಗವನ್ನು ವಾಹನ ನಿಲುಗಡೆಗೆ ಮೀಸಲಿಡಬೇಕಿತ್ತು. ಈಗ  ಶೇ 3ಕ್ಕೆ ಇಳಿಸಲಾಗಿದೆ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.