ADVERTISEMENT

ಹಾಸನ: ಸಚಿವ ರೇವಣ್ಣ ಸಂಬಂಧಿ ಮನೆ ಮೇಲೆ ಐಟಿ ದಾಳಿ 

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 10:05 IST
Last Updated 16 ಏಪ್ರಿಲ್ 2019, 10:05 IST
   

ಹಾಸನ: ಸಚಿವ ರೇವಣ್ಣ ಅವರಸೋದರ ಸಂಬಂಧಿ ಮನೆ ಮೇಲೆ ಮಂಗಳವಾರ ಬೆಳಗ್ಗೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದೇವೇಗೌಡರ ಹುಟ್ಟೂರು ಹರದನಹಳ್ಳಿಯಲ್ಲಿ ಅವರ ತಮ್ಮನ ಮಗ ಪಾಪಣ್ಣಿ ಎಂಬುವರ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಪಾಪಣ್ಣಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾಗಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ಹೆಚ್.ಡಿ.ಸಿ.ಸಿ. ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಜಿ.ಪಂ. ಮಾಜಿ ಸದಸ್ಯ ಪಾಪಣ್ಣಿ, ಗುತ್ತಿಗೆದಾರರಾದ ಕಾರ್ಲೆ ಇಂದ್ರೇಶ್ ಮತ್ತು ಅನಂತ್ ಎಂಬುವರ ಮನೆಗಳಮೇಲೆ ಏಕಕಾಲಕ್ಕೆದಾಳಿ ನಡೆಸಲಾಗಿದೆ.

ADVERTISEMENT

ಸಚಿವ ರೇವಣ್ಣ ಅವರ ಮತ್ತೊಬ್ಬ ಆಪ್ತರಾದ ವಿದ್ಯಾನಗರದಲ್ಲಿರುವ ಕಾರ್ಲೆ ಇಂದ್ರೇಶ್ ಎಂಬುವರ ಮನೆಯಲ್ಲಿಯೂ ಕೂಡ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇಂದ್ರೇಶ್ ಗುತ್ತಿಗೆದಾರ ಹಾಗೂ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದಾರೆ.

ತಮ್ಮಣ್ಣ, ಪುಟ್ಟರಾಜು ಆಪ್ತರ ಮೇಲೆ ಐಟಿ ದಾಳಿ
ಮಂಡ್ಯ:
ಜಿಲ್ಲೆಯಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ದಾಳಿ ಮುಂದುವರಿದಿದ್ದು ಮಂಗಳವಾರ ಬೆಳಿಗ್ಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಅವರ ಪತಿ ಸಾದೊಳಲು ಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ತಿಮ್ಮೇಗೌಡ ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.

ಮದ್ದೂರು ತಾಲ್ಲೂಕು ಸೋಮನಹಳ್ಳಿ ಗ್ರಾಮದಲ್ಲಿರುವ ಸೋಮೇಶ್ವರ ಪರ್ಟಿಲೈಸರ್‌ ಕಂಪನಿಯ ಕಚೇರಿ, ಬೆಂಗಳೂರು, ಮೈಸೂರು ನಿವಾಸಗಳ ಮೇಲೆ ಏಕಕಾಲದಲ್ಲಿ ಆರು ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ಆಪ್ತರಾದ ಸ್ವಾಮಿ ಮೈಸೂರು ಜೆಡಿಎಸ್‌ ವಲಯದ ವೀಕ್ಷಕರಾಗಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಆಪ್ತ, ಚಿಕ್ಕಾಡೆ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ತಿಮ್ಮೇಗೌಡ ಅವರ ಪಾಂಡವಪುರ ನಿವಾಸ, ಸಾಮಿಲ್‌ ಹಾಗು ಪೆಟ್ರೋಲ್‌ ಬಂಕ್‌ ಮೇಲೆ ದಾಳಿ ಮಾಡಿದ್ದಾರೆ.

ಐಟಿ ದಾಳಿ ಖಂಡಿಸಿ ಸಾದೊಳಲು ಸ್ವಾಮಿ ಅವರ ಬೆಂಬಲಿಗರು ಮದ್ದೂರು ಬಸ್‌ ನಿಲ್ದಾಣದ ಎದುರು ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಹೆದ್ದಾರಿಯಲ್ಲಿ 20 ನಿಮಿಷಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.