ADVERTISEMENT

ಮೂಲಭೂತದ ಪ್ರಶ್ನೆ ಬಂದಾಗ ಚಿಪ್ಪೊಳಗೆ ಸೇರುವ ಮುಸ್ಲಿಮರು: ದಿನೇಶ್‌ ಅಮಿನ್ ಮಟ್ಟು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 8:37 IST
Last Updated 16 ಫೆಬ್ರುವರಿ 2026, 8:37 IST
ದಿನೇಶ್ ಅಮಿನ್ ಮಟ್ಟು
ದಿನೇಶ್ ಅಮಿನ್ ಮಟ್ಟು   

ಬೆಂಗಳೂರು: ಹಿಂದೂ ಕೋಮುವಾದ ಮತ್ತು ಮುಸ್ಲಿಂ ಮೂಲಭೂತವಾದ ಒಂದೇ ಅಲ್ಲ. ಆದರೆ, ಹಿಂದೂ ಕೋಮುವಾದ ವನ್ನು ಪ್ರಶ್ನಿಸಿದ ಕೂಡಲೇ ಮುಸ್ಲಿಂ ಮೂಲಭೂತವಾದವನ್ನು ತೋರಿಸಲಾಗುತ್ತಿದೆ. ಹಿಜಾಬ್‌, ಹಲಾಲ್‌, ತಲಾಕ್‌, ಬುರ್ಖಾ ಮುಂತಾದ ವಿಚಾರಗಳು ಬಂದ ಕೂಡಲೇ ಮುಸ್ಲಿಮರು ಚಿಪ್ಪೊಳಗೆ ಸೇರಿಕೊಂಡು ಬಿಡುತ್ತಾರೆ ಎಂದು ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ಹೇಳಿದರು.

ಬೆಂಗಳೂರಿನಲ್ಲಿ ಇರ್ಷಾದ್ ಉಪ್ಪಿನಂಗಡಿ ಅವರ ‘ಕರಾವಳಿಯ ರಕ್ತ ಕಣ್ಣೀರು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋಮುವಾದದ ವಿರುದ್ದದ ಹೋರಾಟ ಕರಾವಳಿಯಲ್ಲಿ ಮಾತ್ರವಲ್ಲ ರಾಜ್ಯ ಮತ್ತು ದೇಶದಲ್ಲಿ ವಿಫಲವಾಗಿದೆ. ಜಾತ್ಯತೀತ ಪಕ್ಷಗಳ ಸೋಲು-ಗೆಲುವಿನಲ್ಲಿಯೇ ಕೋಮುವಾದದ ಸೋಲು-ಗೆಲುವು ಇದೆ ಎನ್ನುವುದು ಸರಿಯಲ್ಲ. ಕೋಮುವಾದವನ್ನು ಸೋಲಿಸಲು ಚುನಾವಣಾ ರಾಜಕೀಯ ಸಾಕಾಗುವುದಿಲ್ಲ ಸಾಂಸ್ಕೃತಿಕ ರಾಜಕಾರಣವೂ ಬೇಕಾಗಿದೆ. ಯಕ್ಷಗಾನ, ಕಂಬಳ, ಕೋಲ ಎಲ್ಲವನ್ನು ಅವರು ಬಳಸಿಕೊಳ್ಳುತ್ತಾರೆ. ನಾವು ಸಾಂಸ್ಕೃತಿಕ ರಾಜಕಾರಣದಲ್ಲಿ ವಿಫಲರಾಗಿದ್ದೇವೆ ಎಂದು ವಿಶ್ಲೇಷಿಸಿದರು.

ADVERTISEMENT

ಕೋಮುವಾದದ ವಿರುದ್ದದ ಹೋರಾಟಗಾರರು ಹಿಂದೂ ಧರ್ಮದ ವಿರೋಧಿಗಳು ಎನ್ನುವ ಅಪಪ್ರಚಾರವನ್ನು ಮಾಡುತ್ತಾರೆ. ಆ ಕಥಾನಕದೊಳಗೆ ನಾವೂ ಸಿಲುಕಿಕೊಂಡಿದ್ದೇವೆ. ಹಿಂದೂ ಧರ್ಮದ ಸುಧಾರಣೆ ಹೇಗೆ ಎಂಬುದರ ಬಗ್ಗೆಯೂ ನಾವು ಚಿಂತನೆ ನಡೆಸಬೇಕು. ಬಸವಣ್ಣ, ಪೆರಿಯಾರ್‌, ನಾರಾಯಣಗುರು, ಅಂಬೇಡ್ಕರ್‌ ಸಹಿತ ಎಲ್ಲರೂ ಹಿಂದೂ ಧರ್ಮವನ್ನು ಸುಧಾರಣೆ ಮಾಡಿದ ಚರಿತ್ರೆಯೇ ಇದೆ. ಅದನ್ನು ಮುಂದುವರಿಸಬೇಕು ಎಂದು ಹೇಳಿದರು.

ಮುಸ್ಲಿಂ ಮೂಲಭೂತವಾದದ ಸುಧಾರಣೆಗೆ ಹೊರಗಿನವರು ಅಲ್ಲ, ಮುಸ್ಲಿಮರ ಒಳಗೆನೇ ಪ್ರಯತ್ನಗಳು ನಡೆಯಬೇಕು ಎಂದು ಸಲಹೆ ನೀಡಿದರು.

ಆರ್‌ಎಸ್‌ಎಸ್ ಅನ್ನು ಅವರು ನೂರು ವರ್ಷ ಕಟ್ಟಿದ್ದಾರೆ. ಅವರು ಸೈದ್ಧಾಂತಿಕವಾಗಿ ಎಲ್ಲಿಯೂ ರಾಜಿಯಾಗಿಲ್ಲ. ರಾಜಕೀಯವಾಗಿ ರಾಜಿಯಾಗಿದ್ದರೂ ಸಿದ್ಧಾಂತವನ್ನು ಬಿಟ್ಟಿಲ್ಲ. ನಾವೂ ಅದೇ ರೀತಿ ಸೈದ್ಧಾಂತಿಕ ಹೋರಾಟ ಮಾಡಬೇಕಾಗಿದೆ. ಯಾರೋ ಒಬ್ಬ 25 ವರ್ಷ ಆರ್‌ಎಸ್‌ಎಸ್‌ನಲ್ಲಿದ್ದು, ಆಮೇಲೆ ಹೊರ ಬಂದ ಕೂಡಲೇ ಅವರನ್ನು ತಲೆಮೇಲೆ ಕೂರಿಸಿ ಮೆರವಣಿಗೆ ಮಾಡುವುದನ್ನು ಬಿಡಬೇಕು. ಅವರನ್ನು ನಾವು ಸೇರಿಸಿಕೊಳ್ಳಬೇಕು. ಅಲ್ಲದೇ ಕೋಮುವಾದದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಾ ಬಂದವರನ್ನು ಮೀರಿ ಆಗಷ್ಟೇ ಬಂದವರನ್ನು ಮೆರೆಸುವುದರಲ್ಲಿ  ಅರ್ಥವಿಲ್ಲ ಎಂದರು.

ಮುಸ್ಲಿಮರಲ್ಲೂ ಕೋಮುವಾದಿಗಳಿದ್ದಾರೆ: ಮುನೀರ್‌
ಹಿಂದೂ ಕೋಮುವಾದಿಗಳು ಮಾತ್ರ ಇರುವುದಲ್ಲ. ಮುಸ್ಲಿಮರಲ್ಲಿಯೂ ಕೋಮುವಾದಿಗಳು ಸೃಷ್ಟಿಯಾಗಿದ್ದಾರೆ ಎಂದು ಮುನೀರ್‌ ಕಾಟಿಪಳ್ಳ ಹೇಳಿದರು. ಧಾರ್ಮಿಕ ಮೂಲಭೂತವಾದ ಆಚೆಗೆ ಧಾರ್ಮಿಕ ರಾಜಕೀಯ ಬೆಳೆದಿದೆ. ಇದು ಮುಸ್ಲಿಮರಲ್ಲಿ ಕೋಮುವಾದಿಗಳು ಹುಟ್ಟಿಕೊಳ್ಳಲು ಕಾರಣವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.