ADVERTISEMENT

ಕರ್ನಾಟಕ ಭವನ: ಅಧಿಕಾರಿಗಳದ್ದೇ ದರ್ಬಾರ್‌!

‘ಆತಿಥ್ಯ’ ನಿರ್ವಹಣೆಗೆ ಐಎಎಸ್‌, ಐಎಫ್‌ಎಸ್‌, ಐಪಿಎಸ್‌ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 19:58 IST
Last Updated 7 ಏಪ್ರಿಲ್ 2022, 19:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನವದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಈಗ ಐಎಎಸ್‌, ಐಎಫ್‌ಎಸ್‌, ಐಪಿಎಸ್‌ ಅಧಿಕಾರಿಗಳದ್ದೇ ದರ್ಬಾರ್. ಈ ಭವನದ ಆಡಳಿತ ನಿರ್ವಹಣೆಗೆ ಒಬ್ಬ ಐಎಎಸ್‌ (ಸ್ಥಾನಿಕ ಆಯುಕ್ತ), ಒಬ್ಬ ಕೆಎಎಸ್‌ (ಉಪ ಸ್ಥಾನಿಕ ಆಯುಕ್ತ) ಅಧಿಕಾರಿ ಇದ್ದರೆ ಸಾಕು. ಆದರೆ, ರಾಜ್ಯ ಸರ್ಕಾರ ಐವರು ಐಎಎಸ್‌, ತಲಾ ಒಬ್ಬರು ಐಎಫ್‌ಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳನ್ನು ನೇಮಿಸಿದೆ!

ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಸದಸ್ಯ ಸುಹಾಸ್‌ ಎಂ.ಎ, ‘ಅನಗತ್ಯ ಅಧಿಕಾರಿಗಳನ್ನು ವಾಪಸು ಕರೆಯಿಸಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

‘ಈ ಅಧಿಕಾರಿಗಳಿಗೆ ಕರ್ನಾಟಕ ಭವನದ ಮೊದಲ ಮಹಡಿಯಲ್ಲಿ ಪ್ರತ್ಯೇಕ ಕೊಠಡಿ ನೀಡಲಾಗಿದೆ. ಚಾಲಕ ಸಹಿತ ಕಾರು, ಒಬ್ಬ ಆಪ್ತ ಸಹಾಯಕ,ಒಬ್ಬ‘ಡಿ’ ವೃಂದದ ಸಿಬ್ಬಂದಿ ಇದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರದ ವಸತಿ ಸೌಲಭ್ಯವೂ ಇದೆ. ರಾಜ್ಯದ ಇತಿಹಾಸದಲ್ಲಿಯೇ ಈ ಹಿಂದಿನ ಯಾವುದೇ ಸರ್ಕಾರ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಐಎಎಸ್‌ ಅಧಿಕಾರಿಗಳನ್ನು ಕರ್ನಾಟಕ ಭವನಕ್ಕೆ ನೇಮಿಸಿದ ನಿದರ್ಶನವಿಲ್ಲ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಈ ಪೈಕಿ, ಕೆಲವು ಅಧಿಕಾರಿಗಳನ್ನು ಕೋವಿಡ್‌ ಆರಂಭದ ದಿನಗಳಲ್ಲಿ ನೇಮಿಸಲಾಗಿದೆ. ಅವರು ಕೂಡಾ ಅಲ್ಲಿಯೇ ಮುಂದುವರಿದಿದ್ದಾರೆ. ಐಎಎಸ್‌ ಅಧಿಕಾರಿಗಳಿಗೆ ವಿಲಾಸಿಯಾಗಿ ಇರಲು ತೆರಿಗೆ ಹಣವನ್ನು ಅನವಶ್ಯಕವಾಗಿ ವೆಚ್ಚ ಮಾಡಲಾಗುತ್ತಿದೆ’ ಎಂದು ದೂರಿದ್ದಾರೆ.

‘ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರದಲ್ಲಿರುವ ಅಧಿಕಾರಿ ವರ್ಗ ಅತ್ಯುತ್ತಮ ಕೆಲಸ ಮಾಡುತ್ತಿದೆ. ಕೇಂದ್ರದಲ್ಲಿ 2–3 ಅಧಿಕಾರಿಗಳು ಒಂದು ಕ್ಯಾಬಿನ್‌ ಹೊಂದಿದ್ದಾರೆ. ಆದರೆ, ಕರ್ನಾಟಕ ಭವನದಲ್ಲಿರುವ ಈ ಏಳು ಅಧಿಕಾರಿಗಳಿಗೂ ಪ್ರತ್ಯೇಕ ವ್ಯವಸ್ಥೆ ಇದೆ. ಕರ್ನಾಟಕ ಭವನ–1ರ (ಕಾವೇರಿ) ಮೊದಲ ಮಹಡಿಯನ್ನು ಸಂಪೂರ್ಣವಾಗಿ ಅಧಿಕಾರಿಗಳೇ ಬಳಸುತ್ತಿದ್ದಾರೆ’ ಎಂದಿದ್ದಾರೆ.

‘ಉಕ್ರೇನ್‌ನಿಂದ ಕರ್ನಾಟಕದ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಮರಳಿ ತರಲು ನಡೆದ ‘ಆಪರೇಷನ್‌ ಗಂಗಾ’ ಕಾರ್ಯಾಚರಣೆಯಲ್ಲಿ ಈ ಐಎಎಸ್‌ ಅಧಿಕಾರಿಗಳ ಪೈಕಿ, ಇಮ್‌ಕೊಂಗ್ಲಾ ಜಮೀರ್‌ ಮತ್ತು ಎಚ್‌. ಪ್ರಸನ್ನ ಮಾತ್ರ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದಾರೆ. ಇತರ ಯಾವುದೇ ಅಧಿಕಾರಿ ಈ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿಲ್ಲ. ಅಲ್ಲದೆ, ಗಣ್ಯರು, ಅತಿಗಣ್ಯರು, ರಾಜ್ಯದ ಅತಿಥಿಗಳಿಗೆ ಆತಿಥ್ಯ ನೀಡುವ ಕರ್ನಾಟಕ ಭವನದ ನಿರ್ವಹಣೆಗೆ ಒಬ್ಬರು ಐಎಎಸ್‌ (ಸ್ಥಾನಿಕ ಆಯುಕ್ತರು) ಮತ್ತು ಒಬ್ಬ ಕೆಎಎಸ್‌ ಅಧಿಕಾರಿ (ಉಪ ಸ್ಥಾನಿಕ ಆಯುಕ್ತರು) ಮಾತ್ರ ಸಾಕು ಎನ್ನುವುದು ಭವನದ ಸಿಬ್ಬಂದಿಯ ಅಭಿಪ್ರಾಯ’ ಎಂದೂ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.