ADVERTISEMENT

‘ಎ’ ಗ್ರೇಡ್‌ನಿಂದ ‘ಬಿ’ ಗ್ರೇಡ್‌ಗೆ ಹಿಂಬಡ್ತಿ ನೀಡಿದಂತಾಗಿದೆ: ಎಂಟಿಬಿ ನಾಗರಾಜ್‌

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 9:33 IST
Last Updated 8 ಆಗಸ್ಟ್ 2021, 9:33 IST
ಎಂಟಿಬಿ ನಾಗರಾಜ್‌
ಎಂಟಿಬಿ ನಾಗರಾಜ್‌   

ಬೆಂಗಳೂರು: ‘ನನಗೆ ಈಗ ಕೊಟ್ಟಿರುವ ಖಾತೆ ಹಿಂಬಡ್ತಿ ನೀಡಿದಂತಾಗಿದೆ. ‘ಎ’ ಗ್ರೇಡ್‌ನಿಂದ ‘ಬಿ’ ಗ್ರೇಡ್‌ಗೆ ತಂದಿದ್ದಾರೆ’ ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಎಂಟಿಬಿ ನಾಗರಾಜ್‌ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭಾನುವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಬಗ್ಗೆ ಮುಖ್ಯಮಂತ್ರಿಯ ಗಮನಕ್ಕೆ ತಂದಿದ್ದೇನೆ. ಮುಂದಿನ ದಿನಗಳಲ್ಲಿ ಸರಿಪಡಿಸುವ ಭರವಸೆ ನೀಡಿದ್ದಾರೆ’ ಎಂದರು.

‘ನನಗೆ ಕೊಟ್ಟಿರುವ ಖಾತೆ ಬಗ್ಗೆ ವರಿಷ್ಠರ ಜೊತೆ ಚರ್ಚಿಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅವರು ನೀಡಿದ ಭರವಸೆಯನ್ನು ಒಪ್ಪಿಕೊಂಡು ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಖಾತೆ ಬದಲಾಯಿಸುವ ವಿಶ್ವಾಸ ಇದೆ. ನನಗೆ ಜನರ ಜೊತೆ ಸೇರಿ ಕೆಲಸ ಮಾಡುವ ಖಾತೆಯ ಅಗತ್ಯವಿದೆ. ಅದೇ ಕಾರಣಕ್ಕೆ ಖಾತೆ ಬದಲಾವಣೆಗೆ ಮನವಿ ಮಾಡಿದ್ದೇನೆ’ ಎಂದೂ ಹೇಳಿದರು.

ADVERTISEMENT

‘ಈ ಹಿಂದೆ ನಾನು ವಸತಿ ಖಾತೆ ಕೇಳಿದ್ದೆ. ಈ ಬಾರಿ ಅದಕ್ಕಿಂತಲೂ ಒಳ್ಳೆಯ ಖಾತೆ ನೀಡಲಿದ್ದಾರೆ ಎಂದುಕೊಂಡಿದ್ದೆ. ಇಂಧನ, ಸಮಾಜ ಕಲ್ಯಾಣ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಸಾರಿಗೆ ಇಲಾಖೆ ಈ ಪೈಕಿ ಯಾವುದಾದರೂ ಒಂದನ್ನು ಕೊಡಲಿ’ ಎಂದರು.

ಬಿಎಸ್‌ವೈ ಭೇಟಿ: ಖಾತೆ ಹಂಚಿಕೆಯಿಂದ ಉಂಟಾಗಿರುವ ಅಸಮಾಧಾನದ ಬಗ್ಗೆ ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಜೊತೆ ಬೊಮ್ಮಾಯಿ ಚರ್ಚೆ ಮಾಡಿದರು.

ಮುಖ್ಯಮಂತ್ರಿಯ ಗೃಹ ಕಚೇರಿ ಕೃಷ್ಣಾದಿಂದ ನೇರವಾಗಿ ಯಡಿಯೂರಪ್ಪ ಅವರಿರುವ ‘ಕಾವೇರಿ’ ನಿವಾಸಕ್ಕೆ ತೆರಳಿದ ಬೊಮ್ಮಾಯಿ, ಖಾತೆ ಗೊಂದಲ ಕುರಿತು ಸಮಾಲೋಈಚನೆ ನಡೆಸಿದರು.

ಅದೇ ವೇಳೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಕಾವೇರಿಗೆ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.