ADVERTISEMENT

ಕೂಡಲೇ ಸಂಪುಟ ಪುನರ್‌ರಚಿಸಿ: ‘ಕೈ’ ಹೈಕಮಾಂಡ್‌ಗೆ 31 ಶಾಸಕರ ಪತ್ರ

‘ಕೂಡಲೇ ಸಂಪುಟ ಪುನರ್‌ರಚಿಸಿ, ಐವರಿಗಾದರೂ ಅವಕಾಶ ಕೊಡಿ’

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 15:12 IST
Last Updated 23 ಫೆಬ್ರುವರಿ 2026, 15:12 IST
<div class="paragraphs"><p>ಕಾಂಗ್ರೆಸ್</p></div>

ಕಾಂಗ್ರೆಸ್

   

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ಬೆನ್ನಲ್ಲೇ, ಸಚಿವ ಸಂಪುಟ ಪುನರ್‌ರಚನೆ ಮಾಡಬೇಕೆಂದು ಆಗ್ರಹಿಸಿ ಮೊದಲ ಬಾರಿಗೆ ಆಯ್ಕೆಯಾಗಿರುವ 31 ಶಾಸಕರು ಹೈಕಮಾಂಡ್ ನಾಯಕರಿಗೆ ಬರೆದಿದ್ದಾರೆ.

ಈ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ADVERTISEMENT

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಪತ್ರವನ್ನು ಬರೆಯಲಾಗಿದೆ.

31 ಶಾಸಕರ ಸಹಿ ಪತ್ರದಲ್ಲಿದೆ. ಆದರೆ, ಪತ್ರದಲ್ಲಿ ದಿನಾಂಕ ಉಲ್ಲೇಖ ಮಾಡಿಲ್ಲ. ಹೈಕಮಾಂಡ್‌ ನಾಯಕರಿಗೆ ಈ ಪತ್ರ ತಲುಪಿದೆಯೇ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ.

ಪತ್ರದಲ್ಲಿ ಏನಿದೆ?: ‘ಕಾಂಗ್ರೆಸ್‌ನಲ್ಲಿ 38 ಶಾಸಕರು‌ ಹೊಸದಾಗಿ ಗೆದ್ದಿದ್ದೇವೆ. ಬೇರೆ ರಾಜ್ಯಗಳಲ್ಲಿ ಮೊದಲ ಬಾರಿಗೆ ಗೆದ್ದವರು ಮುಖ್ಯಮಂತ್ರಿ ಆಗಿದ್ದಾರೆ. ಮೊದಲ ಬಾರಿ ಗೆದ್ದ ಶಾಸಕರ ಪೈಕಿ ಕನಿಷ್ಠ ಎಂಟು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

‘ಮೊದಲ ಬಾರಿಗೆ ಶಾಸಕರಾದವರಿಗೆ ಸಂಪುಟದಲ್ಲಿ ಅವಕಾಶ ನೀಡುವುದರಿಂದ ಯುವ ಮುಖಗಳಿಗೆ ಅವಕಾಶ ಸಿಕ್ಕಂತಾಗುತ್ತದೆ. ನಾವು ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತಕ್ಕೆ ಬದ್ಧರಾಗಿದ್ದೇವೆ. 2028ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಆಡಳಿತಕ್ಕೆ ಬರಬೇಕಾಗಿದೆ. ಹೀಗಾಗಿ, ಸಂಪುಟದಲ್ಲಿ ಯುವ ಮುಖಗಳಿಗೆ ಅವಕಾಶ ನೀಡಬೇಕು’ ಎಂದು ಪ್ರತಿಪಾದಿಸಲಾಗಿದೆ.

ಶಿವಗಂಗಾ ಬಸವರಾಜ್, ಪ್ರದೀಪ್ ಈಶ್ವರ್, ವಿಶ್ವಾಸ್ ವೈದ್ಯ, ಇಕ್ಬಾಲ್ ಹುಸೇನ್, ಅಶೋಕ್ ಕುಮಾರ್ ರೈ, ಎನ್. ಟಿ. ಶ್ರೀನಿವಾಸ್, ದರ್ಶನ್ ಧ್ರುವನಾರಾಯಣ್, ರವಿ ಕುಮಾರ್ ಗಣಿಗ, ಬಿ.ಬಿ. ಚಿಮ್ಮನಕಟ್ಟಿ, ಎ.ಎಸ್. ಪೊನ್ನಣ್ಣ, ಬಾಬಾ ಸಾಹೇಬ್ ಪಾಟೀಲ್, ನಾರಾ ಭರತ್ ರೆಡ್ಡಿ, ಎ.ಸಿ. ಶ್ರೀನಿವಾಸ್, ಮಹೇಂದ್ರ ತಮ್ಮಣ್ಣನವರ್, ಮಂಥರ್ ಗೌಡ, ದೇವೇಂದ್ರಪ್ಪ, ಎನ್. ಶ್ರೀನಿವಾಸ್, ಆಸಿಫ್ ಸೇಠ್,  ರಾಜಾ ವೇಣುಗೋಪಾಲ್ ನಾಯಕ್, ಉದಯ್ ಕುಮಾರ್ ಕಡಲೂರು, ಎಚ್.ವಿ. ವೆಂಕಟೇಶ್, ಪ್ರಕಾಶ್ ಕೋಳಿವಾಡ, ಕೆ.ಎಸ್‌. ಆನಂದ್, ಕೆ.ಎಸ್‌. ಬಸವಂತಪ್ಪ, ಡಿ. ರವಿ ಶಂಕರ್, ಎಚ್.ಎಂ. ಗಣೇಶ್ ಪ್ರಸಾದ್, ಅಶೋಕ್ ಮನಗೂಳಿ, ನಯನಾ ಮೋಟಮ್ಮ, ಚನ್ನಾರೆಡ್ಡಿ ಪಾಟೀಲ್ ಸಹಿ ಹಾಕಿದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.