ಮಂಡ್ಯ: ಮದ್ದೂರಿನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ವೇಳೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ವ್ಯಕ್ತಿಯೊಬ್ಬರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬೈಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮದ್ದೂರು ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವ ವೇಳೆ ಘಟನೆ ನಡೆದಿದೆ. ಧ್ವಜಾರೋಹಣ ನೆರವೇರಿಸಲು ತೆರಳುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಸೆಲ್ಫಿ ತೆಗೆದುಕೊಳ್ಳು ಮೊಬೈಲ್ ಪೋನ್ ಮುಂದೆ ಹಿಡಿಯುತ್ತಾರೆ. ತಕ್ಷಣ ಮೊಬೈಲ್ ಹಿಡಿದು ತಳ್ಳುವ ಡಿ.ಕೆ.ಶಿವಕುಮಾರ್ ಆ ವ್ಯಕ್ತಿಯನ್ನು ಬಯ್ಯುತ್ತಾರೆ.
ಈ ದೃಶ್ಯ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಚರ್ಚೆಗೆ ಕಾರಣವಾಗಿದೆ. ಜುಲೈ ತಿಂಗಳಲ್ಲಿ ಮಾಜಿ ಸಂಸದ ಜಿ.ಮಾದೇಗೌಡ ಅವರು ಭಾರತೀನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರ ಆರೋಗ್ಯ ವಿಚಾರಿಸಲು ಬಂದಿದ್ದ ಡಿ.ಕೆ.ಶಿವಕುಮಾರ್, ತಮ್ಮ ಹೆಗಲ ಮೇಲೆ ಕೈ ಹಾಕಿದ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿದ್ದರು. ಆ ವಿಡಿಯೊ ಕೂಡ ವೈರಲ್ ಆಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವಡಿ.ಕೆ.ಶಿವಕುಮಾರ್‘ರಾಜೀವ್ ಗಾಂಧಿ ಅವರಿಗೆ ಏನಾಯಿತು ಎಂಬುದು ಗೊತ್ತಿದೆ, ಯಾವ ವ್ಯಕ್ತಿಯ ಕೈಯಲ್ಲಿ ಏನಿರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಕೆಲವು ಸಂದರ್ಭದಲ್ಲಿ ಮನುಷ್ಯನ ಕೋಪ, ಭಾವನೆಗಳು ತಕ್ಷಣ ಹೊರಬರುತ್ತವೆ, ಅದರಲ್ಲಿ ತಪ್ಪೇನೂ ಇಲ್ಲ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.