ADVERTISEMENT

ಪ್ರವೀಣ್‌ ಮನೆಗೆ ಕಾಂಗ್ರೆಸ್‌ ಮುಖಂಡರಾದ ಹರಿಪ್ರಸಾದ್‌, ರಮಾನಾಥ ರೈ ಭೇಟಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 10:17 IST
Last Updated 31 ಜುಲೈ 2022, 10:17 IST
ಬಿ.ಕೆ ಹರಿಪ್ರಸಾದ್ ಹಾಗೂ ರಮಾನಾಥ ರೈ
ಬಿ.ಕೆ ಹರಿಪ್ರಸಾದ್ ಹಾಗೂ ರಮಾನಾಥ ರೈ   

ಸುಳ್ಯ: ಕೊಲೆಯಾದ ಪ್ರವೀಣ್ ನೆಟ್ಟಾರು ಮನೆಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಹಾಗೂ ಕಾಂಗ್ರೆಸ್‌ ಮುಖಂಡ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌ ಅವರು ಭಾನುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಪ್ರವೀಣ್‌ ಅವರ ಚಿಕ್ಕಪ್ಪ ಜಯರಾಮ ಪೂಜಾರಿ ಅವರು, ‘ನಿಮಗೆ ಬರಲು ಇಂದು ಸಮಯವಾಯಿತಾ. ಇಷ್ಟು ದಿನ ಬಾರದ ನೀವು ಇಂದು ಚೆಂದ ನೋಡಲು ಬಂದಿದ್ದೀರಾ. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ನೀವು. ನೀವು ಹಿಂದುತ್ವದ ವಿರುದ್ಧ ಹೇಳಿಕೆ ನೀಡುತ್ತೀರಿ. ಹಿಂದುತ್ವವನ್ನು ನಿರ್ವಂಶ ಮಾಡುವ ಪಕ್ಷ ಕಾಂಗ್ರೆಸ್‌. ಹಿಂದುತ್ವಕ್ಕೆ ಕಾಂಗ್ರೆಸ್‌ ಪಕ್ಷ ಎಲ್ಲಿ ಬೆಂಬಲ ನೀಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನನ್ನ ಬದುಕೇ ನಾಶವಾಯಿತು’ ಎಂದು ಪ್ರವೀಣ್‌ ಅವರ ತಾಯಿ ರತ್ನಾವತಿ ಕಣ್ಣೀರಿಟ್ಟರು.

ADVERTISEMENT

ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ ಹರಿಪ್ರಸಾದ್‌, ‘ಇನ್ನು ಮುಂದೆ ಈ ರೀತಿಯ ಹತ್ಯೆ ನಡೆಯಬಾರದು ಎಂಬ ಉದ್ದೇಶದಿಂದಲೇ ನಾವು ಇಲ್ಲಿಗೆ ಭೇಟಿ ನೀಡಿದ್ದೇವೆ. ಸಾಯುತ್ತಿರುವವರು ನಮ್ಮ ಮಕ್ಕಳೇ ತಾನೆ’ ಎಂದರು.

‘ಈ ಹತ್ಯೆಗಳು ಇಲ್ಲಿಗೇ ನಿಲ್ಲಬೇಕು. ಇನ್ನು ಯಾರೂ ಹತ್ಯೆಯೂ ಆಗಬಾರದು’ ಎಂದು ಪ್ರವೀಣ್ ಕುಟುಂಬದವರು ನೋವಿನಿಂದ ಹೇಳಿಕೊಂಡರು.

ಕಾಂಗ್ರೆಸ್‌ ಮುಖಂಡರಾದ ಶಕುಂತಳಾ ಶೆಟ್ಟಿ ಹಾಗೂ ಐವನ್‌ ಡಿಸೋಜ ಅವರು ಶುಕ್ರವಾರವೇ ಪ್ರವೀಣ್‌ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.