
ನವದೆಹಲಿ: ‘ಭಾರತ ಮಂಟಪ’ದಲ್ಲಿ ನಡೆಯುತ್ತಿರುವ ‘ಎ.ಐ ಇಂಪ್ಯಾಕ್ಟ್ ಶೃಂಗಸಭೆ’ಯಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ನವೋದ್ಯಮಗಳ ಸ್ಥಾಪಕರ ಜತೆಗೆ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮಾತುಕತೆ ನಡೆಸಿದರು. ಕೃತಕ ಬುದ್ಧಿಮತ್ತೆ ಮತ್ತು ಡೀಪ್ ಟೆಕ್ನಾಲಜಿ ಕ್ಷೇತ್ರಗಳಲ್ಲಿ ಕರ್ನಾಟಕವು ಪ್ರಭಾವಶಾಲಿಯಾಗಿ ಬೆಳೆಯುತ್ತಿದೆ ಎಂದೂ ತಿಳಿಸಿದರು.
‘ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿರುವ ಕರ್ನಾಟಕವು ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ. ಹಾರ್ವೆ ಎಐ ಮತ್ತು ಆಂತ್ರೊಪಿಕ್ನಂತಹ ಬೃಹತ್ ಕಂಪನಿಗಳು ರಾಜ್ಯದಲ್ಲಿ ಈಗಾಗಲೇ ನೆಲೆಯೂರಿವೆ. ವಾಲ್ಟ್ ಡಿಸ್ನಿ ಕಂಪನಿಯು ಬೆಂಗಳೂರಿನಲ್ಲಿ ತನ್ನ ‘ಎಐ’ ಜಾಲ ವಿಸ್ತರಿಸುತ್ತಿದೆ. ‘ಎಐ’ ಪ್ರತಿಭೆಗಳಿಗೆ ಬೆಂಗಳೂರು ಜಾಗತಿಕವಾಗಿ ಅಗ್ರಸ್ಥಾನದಲ್ಲಿದೆ. ರಾಜ್ಯ ಸರ್ಕಾರವು ₹1 ಕೋಟಿವರೆಗಿನ ಅನುದಾನದ ಮೂಲಕ ನವೋದ್ಯಮಗಳನ್ನು ಪ್ರೋತ್ಸಾಹಿಸುತ್ತಿದೆ. ‘ಎಐ’ ನ ಹೊಣೆಗಾರಿಕೆಯುತ ಬಳಕೆ ಖಚಿತಪಡಿಸಿಕೊಳ್ಳಲು, ಕರ್ನಾಟಕವು ಈ ಕ್ಷೇತ್ರದ ಜಾಗತಿಕ ಮುಖಂಡರು ಮತ್ತು ಸಂಶೋಧಕರ ಜೊತೆಗೆ ನಿಕಟ ಸಂಪರ್ಕದಲ್ಲಿ ಇದೆ’ ಎಂದು ಹೇಳಿದರು.
ಆಸ್ಪತ್ರೆ ಕಾರ್ಯನಿರ್ವಹಣೆಗೆ ಸುಧಾರಿತ ‘ಎಐ’ ಅನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲು ಎಚ್ ಕಂಪನಿ ಮತ್ತು ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜ್ ಮತ್ತು ಸೇಂಟ್ ಜಾನ್ಸ್ ಸಂಶೋಧನಾ ಸಂಸ್ಥೆ ನಡುವಣ ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ಸಚಿವರು ಸಾಕ್ಷಿಯಾದರು. ಜತೆಗೆ, ಹಲವು ಕಂಪನಿಗಳ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದರು.
ಕರ್ನಾಟಕ ಮತ್ತು ಜಾಗತಿಕ ಉದ್ಯಮಗಳ ನಡುವೆ ತಂತ್ರಜ್ಞಾನ ಸಹಯೋಗ, ಹೂಡಿಕೆ ಪಾಲುದಾರಿಕೆ ಮತ್ತು ಆವಿಷ್ಕಾರ ಆಧಾರಿತ ಬೆಳವಣಿಗೆ ಬಲಪಡಿಸುವ ಕುರಿತ ಚರ್ಚೆಗಳಿಗೆ ವೇದಿಕೆ ಕಲ್ಪಿಸಲು ಅಮೆರಿಕ – ಭಾರತ ವಾಣಿಜ್ಯ ಮಂಡಳಿ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಪ್ರಿಯಾಂಕ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.