ಬೆಂಗಳೂರು: ರಾಜ್ಯದ ಜನರಿಗೆ ಬರಗಾಲ ಸಮಸ್ಯೆ ಕಾಡುತ್ತಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಡುತ್ತಿರುವ ಸಮಸ್ಯೆ ಬಿ.ಕೆ. ಹರಿಪ್ರಸಾದ್ ಎಂದು ಬಿಜೆಪಿ ಟೀಕಿಸಿದೆ.
ರಾಜ್ಯದ ಜನರನ್ನು ಬರಗಾಲ, ಬರಿದಾದ ಜಲಾಶಯಗಳು, ಬೆಲೆ ಏರಿಕೆ, ಕಲುಷಿತ ನೀರು ಪೂರೈಕೆ ಮತ್ತು ರೈತರ ಆತ್ಮಹತ್ಯೆಯಂತಹ ಸಮಸ್ಯೆಗಳು ಕಾಡುತ್ತಿವೆ. ಆದರೆ, ಸಿಎಂ ಸಿದ್ದರಾಮಯ್ಯನವರಿಗೆ ಬಿ.ಕೆ ಹರಿಪ್ರಸಾದ್ ಮತ್ತು ಡಿ.ಕೆ. ಶಿವಕುಮಾರ್ ಅವರು ಸಮಸ್ಯೆಗಳಾಗಿ ಕಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬಿಜೆಪಿ ವ್ಯಂಗ್ಯವಾಡಿದೆ.
ಬರಗಾಲ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ. ಸಚ್ಚಾರಿತ್ರ್ಯ, ಸಂಸ್ಕಾರವಂತ ಕೃಷಿ ಸಚಿವರೇ (ಎನ್. ಚೆಲುವರಾಯಸ್ವಾಮಿ) ಬರಗಾಲ ಬಂದಿದ್ದು ನಿನ್ನೆ, ಮೊನ್ನೆಯಲ್ಲ, ಮುಂಗಾರು ಪೂರ್ವ ಮಳೆ ವಿಫಲವಾದಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಹೇಳಿದೆ.
ಮೂರು ತಿಂಗಳ ಹಿಂದೆಯೇ ಬರದ ಛಾಯೆ ಎದ್ದು ಕಾಣುತ್ತಿತ್ತು. ನಿರಂತರವಾಗಿ ಬಿಜೆಪಿ ಈ ಬಗ್ಗೆ ಎಚ್ಚರಿಸಿದರೂ ಜೂನ್, ಜುಲೈ, ಆಗಸ್ಟ್ ಎಂದು ಕಾಲಹರಣ ಮಾಡಿದಿರಿ. ಸಾಲದ್ದಕ್ಕೆ ನಿಮ್ಮ ಸ್ವಾರ್ಥಕ್ಕಾಗಿ ಕೆಆರ್ಎಸ್ನಿಂದ ನೀರು ಬಿಟ್ಟು, ರಾಜ್ಯದ ರೈತರ ಬದುಕನ್ನು ಮೂರಾಬಟ್ಟೆಯಾಗಿಸಿದ್ದೀರಿ. ಈಗ ಬರಗಾಲವೆಂಬುದು ಯಾರ ಹಿಡಿತದಲ್ಲಿಯೂ ಇಲ್ಲ ಎಂದು ತೇಪೆ ಹಚ್ಚುತ್ತೀದ್ದೀರಿ. ಇದೇನಾ ತಾವು ಈ ನಾಡಿನ ಜನತೆಯ ಮೇಲಿಟ್ಟಿರುವ ಕಾಳಜಿ ಎಂದು ಪ್ರಶ್ನಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.