ಬೆಂಗಳೂರು: ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಬಿಜೆಪಿಯವರು ಮಾತನಾಡುವುದು ಆನೆ ಎದುರು ಶ್ವಾನ ಬೊಗಳಿದಂತೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಬಿಜೆಪಿ ವಿರುದ್ಧ ಟ್ವೀಟ್ ಸಮರ ಮುಂದುವರಿಸಿರುವ ಕಾಂಗ್ರೆಸ್, ‘ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಖರ್ಗೆ ಅವರ ಕೊಡುಗೆ ಅಪಾರ. ಅವರೆದುರು ಬಿಜೆಪಿಯವರು ಮಾತಾಡುವುದು ಆನೆ ಎದುರು ಶ್ವಾನ ಬೊಗಳಿದಂತೆ. ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವೆಸಗಿದ್ದು ಯಾರು ಎಂದು ಜಗತ್ತಿಗೆ ತಿಳಿದಿದೆ’ ಎಂದು ವಾಗ್ದಾಳಿ ನಡೆಸಿದೆ.
‘ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನಕ್ಕೆ ವಿರೋಧಿಸಿದ್ದ ನೀವು ಮೊದಲಿಂದಲೂ ಅನ್ಯಾಯವೆಸಗುತ್ತಲೇ ಬಂದಿದ್ದೀರಿ’ ಎಂದು ಕಾಂಗ್ರೆಸ್ ತಿರುಗೇಟು ಕೊಟ್ಟಿದೆ.
‘ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಏನು ಮಾಡಿದೆ ಎನ್ನುವ ಪಟ್ಟಿಯನ್ನೂ ಕೊಡುತ್ತೇವೆ. ನೀವು ಮಾಡಿದ ಅನ್ಯಾಯಗಳ ಪಟ್ಟಿಯನ್ನೂ ಕೊಡುತ್ತೇವೆ. ಕೆಕೆಆರ್ಡಿಬಿಗೆ ಹಣ ಕಡಿತಗೊಳಿಸಿ, ಬಜೆಟ್ನಲ್ಲಿ ಅನ್ಯಾಯವೆಸಗಿದ್ದು ನೀವಲ್ಲವೇ?, ಅಂದಹಾಗೆ ಲಿಂಗಾಯತ ವಿರೋಧಿ ಯಡಿಯೂರಪ್ಪ ಅವರ ಕುಟುಂಬಕ್ಕೆ ಟಿಕೆಟ್ ಕೊಡುವುದನ್ನ ಯಾವಾಗ ನಿಲ್ಲಿಸುತ್ತೀರಿ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗನಲ್ಲವೇ? ಡಿಎನ್ಎ ಟೆಸ್ಟ್ ಮಾಡಿಸಬೇಕೇ?! ಅಂದಹಾಗೆ ನಿಮ್ಮ ಪಕ್ಷ ಬೆನ್ನೆಲುಬಿಲ್ಲದ ಕಾಡು ಮನುಷ್ಯ ನಳಿನ್ ಕುಮಾರ್ ಕಟೀಲ್ ಹಿಡಿತದಲ್ಲಿದೆ ಎನ್ನುವುದು ಪ್ರತಿ ದಿನವೂ ನಡೆಯುತ್ತಿರುವ ಬೀದಿ ಜಗಳದಿಂದ ರಾಜ್ಯದ ಜನತೆಗೆ ತಿಳಿದಿದೆ ಬಿಡಿ’ ಎಂದು ವ್ಯಂಗ್ಯವಾಡಿದೆ.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.