ADVERTISEMENT

ಕದ್ದು ಮುಚ್ಚಿ ಲವ್ವಿಡವ್ವಿ ಮಾಡ್ತಿದ್ದ BJP-JDS ಈಗ ಹಾರ ಬದಲಿಸಿವೆ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಸೆಪ್ಟೆಂಬರ್ 2023, 14:09 IST
Last Updated 23 ಸೆಪ್ಟೆಂಬರ್ 2023, 14:09 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ – ಜೆಡಿಎಸ್‌ ಪಕ್ಷಗಳ ಮೈತ್ರಿಯನ್ನು ಟೀಕಿಸಿರುವ ಕಾಂಗ್ರೆಸ್‌, ಬಿಜೆಪಿ ಸಂವಿಧಾನದ ಪೀಠಿಕೆಯಿಂದ ಜಾತ್ಯತೀತತೆಯನ್ನು ಕಿತ್ತು ಹಾಕಿದರೆ, ಜೆಡಿಎಸ್‌ ತನ್ನ ಹೆಸರಿನಲ್ಲಿದ್ದ ಜಾತ್ಯತೀತತೆಯನ್ನು ಅನಧಿಕೃತವಾಗಿ ಕಿತ್ತು ಹಾಕಿದೆ ಎಂದು ಹೇಳಿದೆ.

ಜೆಡಿಎಸ್‌ನಲ್ಲಿನ ಅಲ್ಪಸಂಖ್ಯಾತ ಮುಖಂಡರು ಪಕ್ಷದ ಹೊಸಿಲಿನ ಹೊರಗೆ ಕಾಲಿಟ್ಟಿದ್ದಾರೆ, ಜೆಡಿಎಸ್‌ ಪಕ್ಷವನ್ನು ಮುಗಿಸಲೆಂದೇ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯ ಕನಸು ನನಸಾಗುವ ಕಾಲ ಬಂದಿದೆ. ಕರ್ನಾಟಕದ ಪಾಲಿಗೆ ಇನ್ನು ಜಾತ್ಯತೀತ ತತ್ವದ ಜೆಡಿಎಸ್‌ ಮುಗಿದ ಅಧ್ಯಾಯ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ADVERTISEMENT

ಬಿಜೆಪಿಯ ಈ ಮೈತ್ರಿ ಯಾರ ಸಂತೋಷಕ್ಕೆ, ಬಿಜೆಪಿಯ ಅಗೋಚರ ಸರ್ವಾಧಿಕಾರಿ ಬಿ.ಎಲ್‌ ಸಂತೋಷ್‌ ಅವರ ಮೇಲೆ ಹಿಗ್ಗಾಮುಗ್ಗಾ ಮಾತಿನ ದಾಳಿ ಮಾಡಿದ್ದ ಕುಮಾರಸ್ವಾಮಿಯವರನ್ನು ಬಿಜೆಪಿ ಕ್ಷಮಿಸಿಬಿಟ್ಟಿತೇ ಅಥವಾ ಆಗ ಆಡಿದ್ದು ಕೇವಲ ನಾಟಕವೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಕುಟುಂಬ ರಾಜಕಾರಣದ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುವ ಬಿಜೆಪಿ ಈಗ ಅದೇ ಕುಟುಂಬ ಪಕ್ಷದ ಮೋರೆ ಹೋಗಿರುವುದು ಯಾವ ನೈತಿಕತೆಯಲ್ಲಿ, ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೂ ಜೆಡಿಎಸ್‌, ಬಿಜೆಪಿಯ ‘ಬಿ ಟೀಮ್‌’ ಆಗಿಯೇ ವರ್ತಿಸುತ್ತಿತ್ತು, ವಿರೋಧ ಪಕ್ಷವಾಗಿದ್ದರೂ ಬಿಜೆಪಿಯ ದುರಾಡಳಿತವನ್ನು ಪ್ರಶ್ನಿಸುವ, ವಿರೋಧಿಸುವ ಕೆಲಸ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕದ್ದು ಮುಚ್ಚಿ ಲವ್ವಿಡವ್ವಿ ಮಾಡುತ್ತಿದ್ದ ಜೆಡಿಎಸ್‌ ಹಾಗೂ ಬಿಜೆಪಿ ಈಗ ಅಧಿಕೃತವಾಗಿ ಹಾರ ಬದಲಿಸಿಕೊಂಡಿವೆ ಅಷ್ಟೇ. ಜೆಡಿಎಸ್‌ನವರ ಕಣ್ಣೀರಿನಂತೆ ಅವರ ಜಾತ್ಯತೀತತೆಯ ಮುಖವಾಡವೂ ನಕಲಿ. ಕೇವಲ ಕುಟುಂಬದ ಹಿತಾಸಕ್ತಿಗಾಗಿ ಜಾತ್ಯತೀತತೆಯನ್ನು ವಿಸರ್ಜಿಸಿರುವ ಜೆಡಿಎಸ್‌ ತನ್ನ ಅಲ್ಪಸಂಖ್ಯಾತ ಮತದಾರರಿಗೆ ಏನೆಂದು ಉತ್ತರಿಸುತ್ತದೆ. ಬಿಜೆಪಿಯ ಅಲ್ಪಸಂಖ್ಯಾತ ಹಾಗೂ ದಲಿತ ವಿರೋಧಿ ನೀತಿಗಳಿಗೆ ಜೆಡಿಎಸ್‌ನ ಸಮ್ಮತಿಯೂ ಇದೆಯೇ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಹಿಂದೆ ಜೆಡಿಎಸ್‌ ಪಕ್ಷದಲ್ಲೇ ಇದ್ದ ಸಂಸದ ಡ್ಯಾನಿಷ್‌ ಅಲಿ ಅವರ ಬಗ್ಗೆ ಅತ್ಯಂತ ತುಚ್ಛವಾಗಿ ಮಾತಾನಾಡಿರುವ ಬಿಜೆಪಿ ಸಂಸದನ ಮಾತನ್ನು ಜೆಡಿಎಸ್‌ ಕೂಡ ಅನುಮೋದಿಸುತ್ತದೆಯೇ. ಜಾತ್ಯತೀತ ಮತದಾರರ ಹಿತಕ್ಕಿಂತ ಕುಟುಂಬದ ಹಿತವೇ ಮುಖ್ಯವಾಯಿತೇ ಎಂದು ಪ್ರಶ್ನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.