ADVERTISEMENT

ಬಿಜೆಪಿ ಸದಾರಮೆ ನಾಟಕವಾಡುವ ಬದಲು ರೌಡಿ ಮೋರ್ಚಾವನ್ನು ಘೋಷಿಸಲಿ: ಕಾಂಗ್ರೆಸ್ ಸವಾಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2022, 10:25 IST
Last Updated 30 ನವೆಂಬರ್ 2022, 10:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಜೆಪಿ ನಾಯಕರು ರೌಡಿ ಶೀಟರ್‌ಗಳೊಂದಿಗೆ ಕಾಣಿಸಿಕೊಂಡಿರುವುದನ್ನು ಕಾಂಗ್ರೆಸ್‌ ತೀವ್ರವಾಗಿ ಖಂಡಿಸಿದೆ.

ಸೈಲೆಂಟ್ ಸುನಿಲ್ ಹಾಗೂ ಫೈಟರ್ ರವಿ ಬಿಜೆಪಿ ಸೇರ್ಪಡೆ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

‘ಡ್ಯಾಮೇಜ್ ಕಂಟ್ರೋಲ್‌ಗಾಗಿ ಸೈಲೆಂಟ್ ಸುನಿಲನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಫೈಟರ್ ರವಿ ಪಕ್ಷ ಸೇರಿದ್ದರ ಬಗ್ಗೆ ಸೈಲೆಂಟ್ ಆಗಿರುವುದೇಕೆ?, ಬಿಜೆಪಿಗರೇ, ಫೈಟರ್ ರವಿ ರೌಡಿ ಶೀಟರ್ ಅಲ್ಲವೇ?, ಇಂತಹ ಸದಾರಮೆ ನಾಟಕ ಮಾಡುವುದಕ್ಕಿಂತ ರೌಡಿ ಮೋರ್ಚಾವನ್ನು ಘೋಷಣೆ ಮಾಡಿಬಿಡಿ’ ಎಂದು ಕಾಂಗ್ರೆಸ್‌ ಟೀಕಿಸಿದೆ.

ADVERTISEMENT

‘ಒಂದೆಡೆ ಸಿ.ಎನ್‌.ಅಶ್ವತ್‌ನಾರಾಯಣ ಹಾಗೂ ಸಿಎಂ ರೌಡಿಗಳನ್ನು ಸಮರ್ಥಿಸಿ ಮಾತಾಡುತ್ತಾರೆ, ಮತ್ತೊಂದೆಡೆ ಎಲ್ಲೋ ಅಡಗಿದ್ದ ನಳಿನ್‍ಕುಮಾರ್ ಕಟೀಲ್ ಧಿಡೀರ್ ಎದ್ದುಬಂದು ಸೈಲೆಂಟ್ ಸುನಿಲನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎನ್ನುತ್ತಾರೆ. ರೌಡಿ ಮೋರ್ಚಾ ಮಾಡುವ ವಿಚಾರದಲ್ಲೂ ಬಿಜೆಪಿ Vs ಬಿಜೆಪಿ ಕಾದಾಟ ನಡೆಯುತ್ತಿದೆಯೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಬಿಜೆಪಿ ಹಾಗೂ ರೌಡಿಗಳ ನಡುವಿನ ಬಾಂಧವ್ಯಕ್ಕೆ ಬಿಬಿಎಂಪಿ ಕಸ ವಿಲೇವಾರಿಯ ಟೆಂಡರ್ ಸಾಕ್ಷಿಯಾಗುತ್ತಿದೆ. ಬೇನಾಮಿ ಹೆಸರಲ್ಲಿ ಸೈಲೆಂಟ್ ಸುನೀಲನಿಗೆ ಕಸದ ಟೆಂಡರ್ ಕೊಡಿಸಿದ ಸಚಿವ ಯಾರು?, ಆ ಸಚಿವರಿಗೂ ಸುನೀಲನಿಗೂ ಯಾವ ಜನ್ಮದ ಮೈತ್ರಿ? ಅರ್ಹತೆ ಇಲ್ಲದಿದ್ದರೂ ನಿಯಮ ಮೀರಿ ಟೆಂಡರ್ ಕೊಟ್ಟಿದ್ದು ಹೇಗೆ? ಏಕೆ?’ ಎಂದು ಕಾಂಗ್ರೆಸ್ ಗುಡುಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.