ಬೆಂಗಳೂರು: ಕಾಂಗ್ರೆಸ್ಸಿಗರಿಗೆ ಭಯೋತ್ಪಾದನೆ ಜತೆಗೆ ಕೈ ಮಿಲಾಯಿಸಿದ ಇತಿಹಾಸ ಇದೆ ಎಂದು ಬಿಜೆಪಿ ಆರೋಪಿಸಿದೆ.
ಭಯೋತ್ಪಾದನೆ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯ ಅವರೇ, ಎಲ್ಲಾ ಭಯೋತ್ಪಾದಕರನ್ನು ವಿರೋಧಿಸುತ್ತೇವೆ ಎಂದು ತಾವು ಹೇಳುತ್ತಿದ್ದೀರಿ. ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿಯವರು ಭಯೋತ್ಪಾದನೆಗೆ ಪ್ರಾಣ ತೆತ್ತರು ಎಂದೂ ಹೇಳುತ್ತಿದ್ದೀರಿ. ಆದರೆ ಅವರನ್ನು ಬಲಿಪಡೆದ ಭಯೋತ್ಪಾದನೆಗೆ ಚಾಲನೆ ನೀಡಿದ್ದು ಯಾರು? ಯಾವ ಉದ್ದೇಶಕ್ಕೆ? ಎಂದು ಪ್ರಶ್ನಿಸಿದೆ.
ತನ್ನ ರಾಜಕಾರಣಕ್ಕೆ ಭಿಂದ್ರನ್ ವಾಲೆಯನ್ನು ಬಳಸಿಕೊಂಡದ್ದು ಇಂದಿರಾಗಾಂಧಿ. ತಾವೇ ಬೆಳೆಸಿದ ಖಲಿಸ್ತಾನ ಬಂಡುಕೋರನ ಸದೆಬಡಿಯಲು ಅಮೃತಸರದ ಸ್ವರ್ಣ ಮಂದಿರಕ್ಕೆ ಸೇನೆ ಕಳುಹಿಸಬೇಕಾಗಿ ಬಂದದ್ದು ವಿಪರ್ಯಾಸ. ಕೆಟ್ಟ ರಾಜಕಾರಣ ಕೆಟ್ಟ ಸಂದರ್ಭಗಳನ್ನು ತಂದೊಡ್ಡುತ್ತವೆ ಎಂಬುದು ಕಾಂಗ್ರೆಸ್ಸಿಗರು ಮರೆತಿರಬಹುದು ಎಂದು ಬಿಜೆಪಿ ಕಿಡಿಕಾರಿದೆ.
‘ತಾನೇ ಭಿಂದ್ರನ್ ವಾಲೆಯನ್ನು ಪೋಷಿಸಿ ನಂತರ ತಾನೇ ಸಂಹರಿಸಿದ ಇಂದಿರಾ ಗಾಂಧಿ ನಡೆಯ ಬಗ್ಗೆ ಸಿಖ್ ಜನಾಂಗದ ವಲಯದಲ್ಲಿ ವಿರೋಧವಿತ್ತು. ಆ ವಿರೋಧದ ಪರಾಕಾಷ್ಠೆಗೆ ಅವರು ಬಲಿಯಾದರು. ಆದರೆ, ನಂತರ ಸಾವಿರಾರು ಜನರ ಪ್ರಾಣ ತೆಗೆದ ಸಿಖ್ ಮಾರಣಹೋಮದ ಸೂತ್ರಧಾರಿಗಳು ಯಾರು ಸಿದ್ದರಾಮಯ್ಯನವರೇ’ ಎಂದು ಬಿಜೆಪಿ ಗುಡುಗಿದೆ.
‘ನಮ್ಮ ಇನ್ನೊಬ್ಬ ಪ್ರಧಾನಿಯವರನ್ನು ಬಲಿತೆಗೆದುಕೊಂಡದ್ದು ಎಲ್ಟಿಟಿಇ. ಆದರೆ ಎಲ್ಟಿಟಿಇ ಸ್ಥಾಪನೆಗೆ ಸಹಾಯ ಮಾಡಿದ್ದು ಯಾರು ಎಂದು ಹುಡುಕಿದರೆ ಬಾಣ ಪುನಃ ಕಾಂಗ್ರೆಸ್ ಕಡೆಗೇ ತಿರುಗುತ್ತದೆ ಎಂಬುದನ್ನು ಕಾಂಗ್ರೆಸ್ಸಿಗರು ಅರ್ಥಮಾಡಿಕೊಳ್ಳಬೇಕು. ಪ್ರಭಾಕರನ್ನನ್ನು ಪೋಷಿಸಿ ಬೆಳೆಸಿದ್ದು ಯಾರು?’ ಎಂದು ಬಿಜೆಪಿ ಟೀಕಿಸಿದೆ.
‘ಬಂಡುಕೋರರನ್ನು ಬೆಳೆಸುವ ಮೂಲಕ ನೆರೆದೇಶಗಳ ಮೇಲೆ ನಿಯಂತ್ರಣ ಸಾಧಿಸುವುದು ಇಂದಿರಾ ಗಾಂಧಿಯವರ ಸೂತ್ರ. ಎಲ್ಟಿಟಿಇ ಸಕ್ರಿಯವಾಗಿದ್ದರೆ ಶ್ರೀಲಂಕಾವನ್ನು ನಿಯಂತ್ರಿಸಲು ಸುಲಭ ಎಂಬುದು ಅವರ ಲೆಕ್ಕಾಚಾರ. ಹಾಗಾಗಿ ಎಲ್ಟಿಟಿಇ ಸಂಘಟನೆಯನ್ನು ಭಾರತದ ಒಳಕ್ಕೇ ಕರೆಸಿ ಶಸ್ತ್ರಾಸ್ತ್ರ ಪೂರೈಸಿ ತರಬೇತಿ ಕೊಡಿಸಿದ್ದರು’ ಎಂದು ಬಿಜೆಪಿ ಆರೋಪಿಸಿದೆ.
‘ಶ್ರೀಲಂಕಾ ಸೇನೆ ಜತೆ ಎಲ್ಟಿಟಿಇ ಯುದ್ಧ ಮಾಡಿದಾಗಲೆಲ್ಲ ಅವರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾತ್ರವಲ್ಲ, ಅಗತ್ಯ ವೈದ್ಯಕೀಯ ನೆರವೂ ಸಿಗುತ್ತಿದ್ದದ್ದು ಭಾರತದಲ್ಲಿಯೇ. ಅವರ ನಿತ್ಯದ ಆಗುಹೋಗು ವರದಿಯಾಗುತ್ತಿದ್ದದ್ದು ಕಾಂಗ್ರೆಸ್ ಪಕ್ಷಕ್ಕೇ. ಆದರೆ, ಆ ರೀತಿ ಇದ್ದ ಸಂಬಂಧವನ್ನು ರಾಜೀವ್ ಗಾಂಧಿ ಅಸ್ಥಿರಗೊಳಿಸಿದರು ಎಂಬುದು ಎಲ್ಟಿಟಿಇಗೆ ಅವರ ಮೇಲೆ ಇದ್ದ ಕೋಪ. ಶ್ರೀಲಂಕಾಗೆ ಶಾಂತಿ ಪಾಲನಾ ಪಡೆ ಕಳುಹಿಸಿ ಭಾರತದ ಗುಪ್ತಚರ ಸಂಸ್ಥೆ ಜತೆ ಭಾರತೀಯ ಸೇನೆಯನ್ನೇ ಯುದ್ಧಕ್ಕಿಳಿಸಿದ್ದು ರಾಜೀವ್ ಗಾಂಧಿಯವರು. ಸಿದ್ದರಾಮಯ್ಯ ಅವರೇ, ತಾವು ಈಗ ಇರುವಂಥದ್ದು ಭಯೋತ್ಪಾದನೆಯ ನಿತ್ಯದ ಲೆಕ್ಕ ಇಟ್ಟ ಪಕ್ಷದಲ್ಲೇ’ ಎಂದು ಬಿಜೆಪಿ ಕಾಲೆಳೆದಿದೆ.
ವಿಷ ಸರ್ಪದ ಜತೆ ಪಗಡೆಯಾಟ ಆಡಿದಂತೆ ಭಯೋತ್ಪಾದನೆ ಜತೆಗೆ ಕೈ ಮಿಲಾಯಿಸಿದ ಇತಿಹಾಸ ಇರುವುದೇ ಕಾಂಗ್ರೆಸ್ ಪಕ್ಷದಲ್ಲಿ. ಇದೇ ವಿಚಾರಕ್ಕೆ ದುರಾದೃಷ್ಟವಶಾತ್ ರಾಜೀವ್ ಗಾಂಧಿಯವರ ಹತ್ಯೆಯಾಯಿತು ಎಂದು ಬಿಜೆಪಿ ಸ್ಮರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.