ADVERTISEMENT

ಪಠ್ಯಪುಸ್ತಕ ಸಮಿತಿಗೆ ಆಯೋಗದ ಸ್ಥಾನ ಕೊಡಿ: ನ್ಯಾ. ನಾಗಮೋಹನ ದಾಸ್‌ ಒತ್ತಾಯ

ಸಂವಾದದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 19:30 IST
Last Updated 6 ಜುಲೈ 2022, 19:30 IST
ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಆಯೋಜಿಸಿದ್ದ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಕೆ.ಆರ್ ಸೌಮ್ಯ, ರಾಜಪ್ಪ ದಳವಾಯಿ, ಬರಗೂರು ರಾಮಚಂದ್ರಪ್ಪ, ಎಚ್.ಎನ್. ನಾಗಮೋಹನ್ ದಾಸ್, ಜಿ.ಬಿ. ಪಾಟೀಲ್, ನಿರಂಜನಾರಾಧ್ಯ ವಿ.ಪಿ., ಬಿ.ಎಂ ಹನೀಫ್ ಭಾಗವಹಿಸಿದ್ದರು.
ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಆಯೋಜಿಸಿದ್ದ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಕೆ.ಆರ್ ಸೌಮ್ಯ, ರಾಜಪ್ಪ ದಳವಾಯಿ, ಬರಗೂರು ರಾಮಚಂದ್ರಪ್ಪ, ಎಚ್.ಎನ್. ನಾಗಮೋಹನ್ ದಾಸ್, ಜಿ.ಬಿ. ಪಾಟೀಲ್, ನಿರಂಜನಾರಾಧ್ಯ ವಿ.ಪಿ., ಬಿ.ಎಂ ಹನೀಫ್ ಭಾಗವಹಿಸಿದ್ದರು.   

ಬೆಂಗಳೂರು: ಸಂವಿಧಾನ, ಪ್ರಜಾಸತ್ತಾತ್ಮಕ ಆಶಯಗಳಿಗೆ ಪೂರಕವಾಗಿ ಪಠ್ಯಪುಸ್ತಕ ರಚಿಸಲು ಸ್ವತಂತ್ರ ಆಯೋಗದ ರೀತಿ ರಾಷ್ಟ್ರೀಯ, ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್‌.ನಾಗಮೋಹನ ದಾಸ್‌ ಒತ್ತಾಯಿಸಿದರು.

ವಿಶ್ವಮಾನವ ಕ್ರಾಂತಿಕಾರಿ ಕುವೆಂಪು ಹೋರಾಟ ಸಮಿತಿ ಪಠ್ಯ ಪರಿಷ್ಕರಣೆ ಕುರಿತು ಬುಧವಾರ ಇಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಠ್ಯಪುಸ್ತಕ ರಚನಾ ಸಮಿತಿ ಯಾವ ಅಂಶಗಳ ಆಧಾರದ ಮೇಲೆ ಪಠ್ಯಗಳನ್ನು ಆಯ್ಕೆ ಮಾಡಬೇಕು ಎನ್ನುವ ಕುರಿತು ಸ್ಪಷ್ಟ ನಿಯಮಗಳನ್ನು ರೂಪಿಸಬೇಕು. ಸಂವಿಧಾನದ ಮೂಲತತ್ವ, ಸಾಮಾಜಿಕ ನ್ಯಾಯ, ಒಕ್ಕೂಟ ವ್ಯವಸ್ಥೆ, ಜನ ಕಲ್ಯಾಣ, ಬಹುತ್ವ, ಸಮಾನತೆಗೆ ಒತ್ತು ನೀಡುವ ವಿಷಯ ವಸ್ತುಗಳನ್ನು ಕಡ್ಡಾಯಗೊಳಿಸಬೇಕು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ದೇಶದ ಸಮಸ್ಯೆ, ಸವಾಲುಗಳನ್ನು ಎದುರಿಸುವ, ಸೂಕ್ತ ಪರಿಹಾರ ಕಂಡುಕೊಳ್ಳುವ, ಸಾಮಾಜಿಕ ಸಾಮರಸ್ಯ ಕಾಪಾಡುವ, ನೈತಿಕ ಪ್ರಜ್ಞೆ ಒಳ್ಳಗೊಂಡ ಮನೋಸ್ಥಿತಿ ಬೆಳೆಸಿಕೊಳ್ಳಲು ಪಠ್ಯಗಳು ಸಹಕಾರಿಯಾಗಬೇಕು. ಅದಕ್ಕಾಗಿಸಮಿತಿಯಲ್ಲಿ ಯಾರು ಇರಬೇಕು ಎನ್ನುವ ಮಾನದಂಡಗಳನ್ನೂ ಅಳವಡಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿ ರಾಜ್ಯದಲ್ಲಿ ಸಮಾನ, ಗುಣಾತ್ಮಕ ಶಿಕ್ಷಣದ ಕೊರತೆ ಇರುವ ಪಠ್ಯಪುಸ್ತಕ ವಿತರಿಸಲಾಗಿದೆ. ಪರಿಷ್ಕರಣೆ ನೆಪದಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸಂಸ್ಕೃತಿ, ನಾಗರಿಕತೆ, ಇತಿಹಾಸವನ್ನೇ ಹಿಂದಕ್ಕೆ ತಳ್ಳುವ ಪ್ರಯತ್ನಗಳಿಗೆ ಅವಕಾಶ ಇರಬಾರದು. ಇದರಿಂದ ಮಕ್ಕಳ ಮನಸ್ಸಿನಲ್ಲಿ ವಿಷ ತುಂಬಿದಂತಾಗುತ್ತದೆ ಎಂದು ಎಚ್ಚರಿಸಿದರು.

ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಮಾತನಾಡಿ, ‘1975ರಲ್ಲಿ ರೂಪಿಸಿದ ಮೊದಲ ಪಠ್ಯಕ್ರಮದಲ್ಲೇ ಯಾವ ವಿಷಯಗಳು ನಿರ್ಣಾಯಕವಾಗಬೇಕು ಎನ್ನುವ ಸ್ಪಷ್ಟತೆ ನೀಡಲಾಗಿದೆ. ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವ ಪಠ್ಯಗಳ ರಚನೆ ಸಮಿತಿಗಳ ಜವಾಬ್ದಾರಿ. ರಾಜ್ಯದಲ್ಲಿ ಅಯೋಗ್ಯ ಶಿಕ್ಷಣ ಸಚಿವರಿಂದಾಗಿ ಅಂತಹ ಎಲ್ಲ ಆಶಯಗಳೂ ಮಣ್ಣುಪಾಲಾಗಿವೆ. ಭವಿಷ್ಯದಲ್ಲಿ ಎಲ್ಲ ವಿಷಯಗಳನ್ನೂ ಹೊಸ ವಿನ್ಯಾಸದಲ್ಲಿ ಬರೆಸುವ ಗುಪ್ತ ಕಾರ್ಯಸೂಚಿಯನ್ನು ಬಿಜೆಪಿ ಸರ್ಕಾರಗಳು ಹೊಂದಿವೆ’ ಎಂದು ಆರೋಪಿಸಿದರು.

ಸಾಹಿತಿ ರಾಜಪ್ಪ ದಳವಾಯಿ, ಪತ್ರಕರ್ತ ಬಿ.ಎಂ.ಹನೀಫ್‌, ಎಲ್.ಎನ್‌. ಮುಕುಂದ್‌ ರಾಜ್‌ ವಿಷಯ ಮಂಡಿಸಿದರು. ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌, ಸಮಿತಿಯ ಅಧ್ಯಕ್ಷ ಜಿ.ಬಿ.ಪಾಟೀಲ, ಮಂಜುನಾಥ ಅದ್ದೆ, ಗಂಗಾಧರ ಮೂರ್ತಿ ಉಪಸ್ಥಿತರಿದ್ದರು.

ಖರ್ಚುವೆಚ್ಚ ಹೋಲಿಕೆಗೆ ಆಕ್ಷೇಪ

2014–15ರಲ್ಲಿ ರಚಿತವಾದ ತಮ್ಮ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ 172 ಸದಸ್ಯರು ಒಳಗೊಂಡಿತ್ತು. 123 ಪಠ್ಯಗಳನ್ನು ಪರಿಷ್ಕರಿಸಿತ್ತು. ನೂರಾರು ಸಭೆಗಳ ಮೂಲಕ ಸಮಗ್ರ ಪರಿಷ್ಕರಣೆಗೆ ಎರಡೂವರೆ ವರ್ಷಗಳ ಅವಧಿ ತೆಗೆದುಕೊಂಡಿತ್ತು. ಹಾಗಾಗಿ, ಖರ್ಚು ವೆಚ್ಚಗಳನ್ನು ಮಾಡಲಾಗಿತ್ತು. ಈಗಿನ ಸಮಿತಿಯಂತೆ ನಿರ್ದಿಷ್ಟ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸದೇ, ಮೂರೂವರೆ ತಿಂಗಳಲ್ಲಿ ಬೇಕಾಬಿಟ್ಟಿ ಪಠ್ಯಗಳನ್ನು ಬದಲಿಸಿರಲಿಲ್ಲ. ಇದನ್ನೆಲ್ಲ ಗಮನಿಸದೇ ಕಟ್ಟುಕಥೆಯ ರೀತಿ ಸಮಿತಿಗಳ ಖರ್ಚು ವೆಚ್ಚದ ಹೋಲಿಕೆಯ ಮಿಥ್ಯದ ವರದಿಗಳನ್ನು ಹರಿಬಿಡಲಾಗುತ್ತಿದೆ ಎಂದುಸಾಹಿತಿ, ಹಿಂದಿನ ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ದೂರಿದರು.

‘ನಮ್ಮದು ಗಾಂಧಿ, ವಿವೇಕಾನಂದರ ಹಿಂದುತ್ವ, ಅವರದು ಗೋಡ್ಸೆ ಹಿಂದುತ್ವ.ಸೈದ್ಧಾಂತಿಕವಾಗಿ ತಮ್ಮನ್ನು ಎದುರಿಸಲು ಸಾಧ್ಯವಾಗದವರು ವೈಯಕ್ತಿಕ ತೇಜೋವಧೆಗೆ ಇಳಿದಿದ್ದಾರೆ. ಅಸಭ್ಯ ಭಾಷೆ ಬಳಸುತ್ತಿದ್ದಾರೆ. ಬಹಿರಂಗ ಚರ್ಚೆಗೆ ಆಹ್ವಾನಿಸುತ್ತಿದ್ದಾರೆ. ಪಠ್ಯಪುಸ್ತಕ ರಚನೆ ಎನ್ನುವುದು ಶಿಕ್ಷಣ ತಜ್ಞರ ಜತೆಗೆ ನಡೆಯುವ ಚರ್ಚೆ. ಬೀದಿ ಚರ್ಚೆಯಲ್ಲ ಎನ್ನುವ ಸಾಮಾನ್ಯ ಜ್ಞಾನವೂ ಅವರಿಗಿಲ್ಲ. ನಮ್ಮದು ಬೇಂದ್ರೆ, ಕುವೆಂಪು, ಕನಕ, ಬಸವಣ್ಣ, ಕುಮಾರವ್ಯಾಸರ ಭಾಷೆ. ಕುವೆಂಪು ಅವರು ಹೇಳಿದಂತೆ ಭಾಷೆಗೇಡಿ, ದ್ವೇಷಗೇಡಿಯೂ ಆಗುತ್ತಾನೆ’ ಎಂದು ಕುಟುಕಿದರು.

***

ಪಠ್ಯಪುಸ್ತಕಗಳಲ್ಲಿ ಸಾಮಾಜಿಕ ಆಶಯ, ಸಾಮರಸ್ಯಕ್ಕೆ ಧಕ್ಕೆಯಾಗಿದ್ದರೂ ಹಲವು ಮಠಾಧೀಶರು, ಶರಣರು, ದೊಡ್ಡ ಸಾಹಿತಿಗಳು, ಹೋರಾಟಗಾರರು ತಣ್ಣಗೆ ಕುಳಿತಿದ್ದಾರೆ. ಸರ್ಕಾರದ ಋಣದ ಭಾರ ಅವರನ್ನು ತಡೆದಿರಬಹುದು.

– ಕೆ.ಆರ್‌.ಸೌಮ್ಯ, ಕವಯತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.