ADVERTISEMENT

ಪರಿಷ್ಕೃತ ಪಠ್ಯಪುಸ್ತಕ ಸಾರ್ವಜನಿಕರ ಮುಂದಿಡುತ್ತೇವೆ: ಸಚಿವ ಬಿ.ಸಿ. ನಾಗೇಶ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 6:11 IST
Last Updated 7 ಜೂನ್ 2022, 6:11 IST
ಬಿ.ಸಿ. ನಾಗೇಶ್
ಬಿ.ಸಿ. ನಾಗೇಶ್   

ಬೆಂಗಳೂರು: ‘ಈ ಹಿಂದೆ ಸಿದ್ದರಾಮಯ್ಯ ಅವಧಿಯಲ್ಲಿಪರಿಷ್ಕೃತ ಪಠ್ಯಪುಸ್ತಕದಲ್ಲಿ ಏನು ಬಿಟ್ಟಿದ್ದರು,‌ ಈಗ ನಾವೇನು ಸೇರಿಸಿದ್ದೇವೆ ಎಲ್ಲವನ್ನೂ ಸಾರ್ವಜನಿಕರ ಮುಂದೆ ಇಡುತ್ತೇವೆ’ ಎಂದು ಪ್ರಾಥಮಿಕ‌ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ವಿಚಾರ‌ಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯನ್ನು ಆರ್.ಟಿ. ನಗರದ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿದ ಬಳಿಕ‌ ಮಾತನಾಡಿದ ಅವರು, ‘ನಾವು ಈಗಾಗಲೇ ಎರಡು ತೀರ್ಮಾನ ತೆಗೆದುಕೊಂಡಿದ್ದೇವೆ’ ಎಂದರು.

‘ಜನರು ತಪ್ಪಿದೆ ಎಂದು ಹೇಳಿದ್ದನ್ನು ಬದಲಾಯಿಸುವ ಮನಸ್ಸಿದೆ ಎಂದು ಈಗಾಗಲೇ ಮುಖ್ಯಮಂತ್ರಿ ಹೇಳಿದ್ದಾರೆ. ತಪ್ಪಿದೆ ಅಂದಿದ್ದನ್ನು ನಾವು ಸರಿಪಡಿಸಿದ್ದೇವೆ’ ಎಂದರು.

ADVERTISEMENT

ಆರ್‌ಎಸ್‌ಎಸ್ ಪ್ರಮುಖರ ಸಭೆಯಲ್ಲಿ ನಾಗೇಶ್ ಅವರು ಸೋಮವಾರ ಭಾಗವಹಿಸಿದ್ದರು. ಆ ಸಭೆ ಹಾಗೂ ಆರ್‌ಎಸ್‌ಎಸ್‌ನವರ ಸಂದೇಶದ ಬಗ್ಗೆ ಮುಖ್ಯಮಂತ್ರಿಗೆ ನಾಗೇಶ್ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ಸರಿಪಡಿಸುವ ಸಂಬಂಧವೂ ಸಮಾಲೋಚನೆ ನಡೆಸಿದರು.

ಮುಖ್ಯಮಂತ್ರಿ ಮಾತನಾಡಿ, ‘ಹೊಸಪೇಟೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ಹೋಗುತ್ತಿದ್ದೇನೆ’ ಎಂದರು.

‘ಪಠ್ಯ ಪುಸ್ತಕದ ಬಗ್ಗೆ ಈಗಾಗಲೇ ಕೆಲವು ನಿರ್ಣಯಗಳನ್ನು ಮಾಡಿದ್ದೇವೆ’ ಎಂದರು.

2ಎ ಮೀಸಲಾತಿಗಾಗಿ ಮುಖ್ಯಮಂತ್ರಿ ಮನೆ ಮುಂದೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ನಮ್ಮ ಮನೆಯೇ ಸ್ವಾಮೀಜಿಗಳದ್ದು. ಅವರು ನಮ್ಮ ಸ್ವಾಮೀಜಿಗಳು. ಅವರದ್ದೇ ಮನೆ, ಏನೂ ತೊಂದರೆ ಇಲ್ಲ. ಆದರೆ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ.‌ ಆ ಸಮಾಜದ ಪ್ರಮುಖರು ಕೃಷ್ಣಾದಲ್ಲಿ ನನ್ನನ್ನು ಭೇಟಿಯಾಗಿದ್ದಾರೆ. ಹಲವು ವಿಷಯಗಳು ಅವರ ಜೊತೆ ಚರ್ಚೆ ಆಗಿದೆ. ಸ್ವಾಮೀಜಿಗಳ ಜೊತೆಗೂ ನಾನು ಚರ್ಚೆ ಮಾಡುತ್ತೇನೆ. ನಾಳೆ, ನಾಡಿದ್ದರಲ್ಲಿ ಅವರ ಜೊತೆಯೂ ನಾನು ಚರ್ಚೆ ಮಾಡುತ್ತೇನೆ’ ‌ಎಂದರು.

ಮುಖ್ಯಮಂತ್ರಿ ನಿವಾಸದ ಬಳಿ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ‘ಮುಖ್ಯಮಂತ್ರಿ ಇಂದು ಹೊಸಕೋಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಡಲಿದ್ದಾರೆ. ₹150 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ವಿರೋಧ ಪಕ್ಷದವರಿಗೂ ಇದರ ಬಗ್ಗೆ ಮಾಹಿತಿ ಇದೆ ಕಾರ್ಯಕ್ರಮದಲ್ಲಿ ಯಾವುದೇ ಗೊಂದಲ ಆಗಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.