
ಪೊಲೀಸ್
ಸಾಂದರ್ಭಿಕ ಚಿತ್ರ
ಅಪರಾಧದಲ್ಲಿ ಭಾಗಿ: 88 ಪೊಲೀಸರ ವಿರುದ್ಧ ಪ್ರಕರಣ
ಎರಡೂವರೆ ವರ್ಷದ ಅವಧಿಯಲ್ಲಿ, ಅಪರಾಧಗಳಲ್ಲಿ ಭಾಗಿಯಾದ 88 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರಲ್ಲಿ ಎಲ್ಲರನ್ನೂ ಅಮಾನತು ಮಾಡಲಾಗಿದೆ. ತಪ್ಪು ಎಸಗಿದ್ದವರಿಗೆ ಶಿಕ್ಷೆಯಾಗಲಿದೆ. ರಾಜ್ಯದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ 12 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಜೈಲಿನಲ್ಲಿ ಕೈದಿ, ವಿಚಾರಣಾಧೀನ ಕೈದಿಗಳು ಪಾರ್ಟಿ ನಡೆಸಿದ, ಮೊಬೈಲ್ ಬಳಿಸಿದ, ಮದ್ಯ ಕುಡಿದ ವಿಡಿಯೊಗಳು ಹಿಂದಿನ ಸರ್ಕಾರದ ಅವಧಿಯಲ್ಲಿ ಚಿತ್ರೀಕರಿಸಿದ್ದಂಥವು. ಇದೆಲ್ಲವನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೆಲವು ಅಧಿಕಾರಿಗಳನ್ನು ಬದಲಿಸಿದ್ದೇವೆ. ಕಾರಾಗೃಹದ ಮೊಬೈಲ್ ನೆಟ್ವರ್ಕ್ ಜಾಮರ್ಗಳನ್ನು ಮೇಲ್ದರ್ಜೆಗೆ ಏರಿಸಲು ಪರಿಶೀಲನೆ ನಡೆಸಲಾಗುತ್ತಿದೆ.
-ಜಿ.ಪರಮೇಶ್ವರ, ಗೃಹ ಸಚಿವ.
ಪ್ರಶ್ನೆ: ಟಿ.ಎ.ಶರವಣ, ಜೆಡಿಎಸ್. ಸಿ.ಟಿ.ರವಿ, ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ.
****
‘ಬಿಎಂಐಸಿ: ಮೂಲ ಯೋಜನೆ ಬದಲಾವಣೆ ಇಲ್ಲ’
ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಮೂಲ ಯೋಜನೆಯನ್ನು ಬದಲಾವಣೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವು ಆದೇಶಿಸಿದೆ. ಹೀಗಾಗಿ ಅದರಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಈ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರೈತರು ಮನೆಗಳನ್ನು ಕಟ್ಟಲು, ಭೂಪರಿವರ್ತನೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಕಚೇರಿ ಮೂಲಕ ಆನ್ಲೈನ್ನಲ್ಲಿ ಸ್ವೀಕೃತವಾಗುವ ಅರ್ಜಿಗಳನ್ನು ಯೋಜನಾ ಪ್ರಾಧಿಕಾರವು ವಿಲೇವಾರಿ ಮಾಡಲಿದೆ.
-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ.
ಪ್ರಶ್ನೆ: ಮಧು ಜಿ. ಮಾದೇಗೌಡ, ಕಾಂಗ್ರೆಸ್
****
‘ಗೆಜೆಟೆಡ್ ಪ್ರೊಬೆಷನರ್ಸ್ ನೇಮಕಾತಿ: ಶೀಘ್ರ ಫಲಿತಾಂಶ’
2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು 2025ರ ಮೇ 3ರಿಂದ 5ರ ನಡುವೆ ಮುಖ್ಯ ಪರೀಕ್ಷೆ ನಡೆಸಿದೆ. ಈಗ ಮುಖ್ಯ ಪರೀಕ್ಷೆಯ, ಪರೀಕ್ಷೋತ್ತರ ಪ್ರಕ್ರಿಯೆಗಳು ಈಗ ನಡೆಯುತ್ತಿದ್ದು, 20 ದಿನಗಳಲ್ಲಿ ಮುಗಿಯಲಿದೆ.
ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಆನಂತರದಲ್ಲಿ
ಪ್ರಕಟಿಸಲಾಗುತ್ತದೆ.
-ಎನ್.ಎಸ್.ಬೋಸರಾಜು, ಸಣ್ಣ ನೀರಾವರಿ ಸಚಿವ.
ಪ್ರಶ್ನೆ: ಹಣಮಂತ ನಿರಾಣಿ, ಬಿಜೆಪಿ
****
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.