ಆಯುಷ್ಮಾನ್ ಭಾರತ
ಬೆಂಗಳೂರು: ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್ ಭಾರತ ಯೋಜನೆಗಳ ಅಡಿಯಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಬೇಕಾದರೆ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಯಿಂದ (ಕೆಪಿಎಂಇ) ಮಾನ್ಯತೆ ಪಡೆದ ನೋಂದಣಿ ಪ್ರಮಾಣಪತ್ರ ಹೊಂದಿರುವುದನ್ನು ಕಡ್ಡಾಯ ಮಾಡಲಾಗಿದೆ.
ಈ ಕುರಿತು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಕೇಂದ್ರ ಮತ್ತು ರಾಜ್ಯದ ಆರೋಗ್ಯ ಯೋಜನೆಗಳಡಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜತೆಗೆ ಎಂಪ್ಯಾನಲ್ ಮಾಡಿಕೊಳ್ಳಬೇಕಾದರೆ, ಇನ್ನು ಮುಂದೆ, ಕೆಪಿಎಂಇ ಮಾನ್ಯತೆ ಪಡೆಯಬೇಕಾಗುತ್ತದೆ.
ಹೀಗೆ ಎಂಪ್ಯಾನಲ್ ಮಾಡಿಕೊಳ್ಳಲು ಮತ್ತು ಎಂಪ್ಯಾನಲ್ ನವೀಕರಣಕ್ಕೆ ಮೂಲ ಸೌಕರ್ಯ ಅನುಸರಣಾ ಪತ್ರ, ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪತ್ರ, ಅಗ್ನಿ ಸುರಕ್ಷತಾ ಅನುಸರಣಾ ಪತ್ರ ಸೇರಿ ಹಲವು ಪ್ರಮಾಣಪತ್ರಗಳನ್ನು ನೀಡಬೇಕಿತ್ತು. ಈಗ ಈ ನಿಯಮಗಳನ್ನು ಬದಲಿಸಿ ಆರೋಗ್ಯ ಇಲಾಖೆ ಆದೇಶಿಸಿದೆ.
ಖಾಸಗಿ ಆಸ್ಪತ್ರೆಗಳು ಕೆಪಿಎಂಇ ಅಲ್ಲಿ ನೋಂದಣಿ ಮಾಡಿಕೊಳ್ಳಲು ಮೇಲಿನ ಎಲ್ಲ ಪ್ರಮಾಣಪತ್ರಗಳನ್ನು ಸಲ್ಲಿಸಿರುತ್ತವೆ. ನೋಂದಣಿ ನವೀಕರಣದ ವೇಳೆಯೂ ಈ ದಾಖಲೆಗಳನ್ನು ಕೆಪಿಎಂಇ ಪಡೆದುಕೊಳ್ಳುತ್ತದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳನ್ನು ಎಂಪ್ಯಾನಲ್ ಮಾಡುವಾಗ ಕೆಪಿಎಂಇ ನೋಂದಣಿ ಪತ್ರ ಪಡೆದುಕೊಂಡರೆ ಸಾಕು ಎಂದು ಇಲಾಖೆಯು ಆದೇಶ ಪತ್ರದಲ್ಲಿ ವಿವರಿಸಿದೆ.
ಸಂಬಂಧಿತ ಅಧಿಕಾರಿಗಳು ಇನ್ನುಮುಂದೆ ಖಾಸಗಿ ಆಸ್ಪತ್ರೆಗಳಿಂದ ಕೆಪಿಎಂಇ ನೋಂದಣಿ ಪತ್ರವನ್ನು ಮಾತ್ರ ಪಡೆದುಕೊಳ್ಳಬೇಕು. ಪ್ರಮಾಣಪತ್ರ ಇಲ್ಲದ ಆಸ್ಪತ್ರೆಗಳನ್ನು ಎಂಪ್ಯಾನಲ್ ಮಾಡುವಂತಿಲ್ಲ. ಈ ನಿಯಮ ಮೀರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.