ಧಾರವಾಡ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಗೆ ರೈತರು ಹೆಸರು ನೋಂದಾಯಿಸಲು ಭಾನುವಾರ ಒಂದು ದಿನ ಬಾಕಿ ಇದ್ದು, ಈವರೆಗೂ ಶೇ 43.02ರಷ್ಟು ರೈತರು ರಾಜ್ಯದಲ್ಲಿ ನೋಂದಣಿ ಮಾಡಿಸಿದ್ದಾರೆ.
ಎರಡು ಹೆಕ್ಟೇರ್ಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ವಾರ್ಷಿಕ ₹ 6 ಸಾವಿರ ಪ್ರೋತ್ಸಾಹ ಧನ ನೀಡುವ ಯೋಜನೆ ಇದಾಗಿದೆ. ಇದರ ಲಾಭ ಪಡೆಯಲು ರೈತರು ಇದೇ 30ರೊಳಗೆ ದಾಖಲೆಗಳ ಸಮೇತ ಹೆಸರು ನೋಂದಾಯಿಸಬೇಕು.
ರಾಜ್ಯದಲ್ಲಿನ 86,80,739 ರೈತರ ಪೈಕಿ 37,32,117 ಮಂದಿ ತಮ್ಮ ದಾಖಲೆಗಳ ಸಮೇತ ಹೆಸರು ನೋಂದಾಯಿಸಿದ್ದಾರೆ. ಜೂನ್ 29ರ ಸಂಜೆಯವರೆಗೆ ಧಾರವಾಡ ಜಿಲ್ಲೆಯ ಶೇ 72ರಷ್ಟು ಮಂದಿ ನೋಂದಾಯಿಸಿದ್ದು, ಅಗ್ರ ಸ್ಥಾನದಲ್ಲಿದೆ. ರಾಮನಗರ ಜಿಲ್ಲೆ (ಶೇ 17.51) ಕೊನೆ ಸ್ಥಾನದಲ್ಲಿದೆ.
ಗದಗ, ಬಾಗಲಕೋಟೆ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಶೇ 50ಕ್ಕಿಂತ ಹೆಚ್ಚು ನೋಂದಣಿ ಆಗಿದೆ. 21 ಜಿಲ್ಲೆಗಳಲ್ಲಿ ಶೇ 25ರಿಂದ 50ರಷ್ಟು ಪ್ರಗತಿ ಆಗಿದೆ. ಬೆಂಗಳೂರು ನಗರ, ಬಳ್ಳಾರಿ, ಕೋಲಾರ, ಯಾದಗಿರಿ ಮತ್ತು ರಾಮನಗರ ಜಿಲ್ಲೆಗಳಲ್ಲಿ ಶೇ 25ಕ್ಕಿಂತ ಕಡಿಮೆ ನೋಂದಣಿಯಾಗಿವೆ.
ಹೆಸರು ನೋಂದಣಿ ಮಾಡಿಸಿಕೊಳ್ಳುವ ಸಿಬ್ಬಂದಿ ಹಾಗೂ ಸೇವಾ ಕೇಂದ್ರದವರಿಗೆ ಪ್ರೋತ್ಸಾಹ ಧನ ನೀಡುವ ವ್ಯವಸ್ಥೆ ಇದ್ದರೂ ಕನಿಷ್ಠ ಶೇ 50ರಷ್ಟು ಪ್ರಗತಿ ಆಗಿಲ್ಲ. ಧಾರವಾಡದಲ್ಲಿ ಒಟ್ಟು 1.74 ಲಕ್ಷ ರೈತರು ಇದ್ದಾರೆ. ಇವರಲ್ಲಿ 1.05 ಲಕ್ಷ ಮಂದಿ ಹೆಸರು ನೋಂದಾಯಿಸಿದ್ದಾರೆ. ಕಂದಾಯ, ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳೊಂದಿಗೆ ಪಿಡಿಒ, ಬಿಲ್ ಕಲೆಕ್ಟರ್ಗಳನ್ನು ಸಹ ನೋಂದಣಿ ಕಾರ್ಯಕ್ಕೆ ನಿಯೋಜಿಸಲಾಗಿದೆ.
ದಿನಕ್ಕೆ ಆರು ಸಾವಿರ ದಾಖಲೆಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಬಾಕಿ ಉಳಿದ ರೈತರ ದಾಖಲೆಗಳನ್ನು ಅಪ್ಲೋಡ್ ಮಾಡಲಾಗುವುದು
–ರುದ್ರೇಶಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ
ಯಾವ ದಾಖಲೆ ಬೇಕು?
ರೈತರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ನ ಜೆರಾಕ್ಸ್ ಪ್ರತಿ, 2 ಪಾಸ್ಪೋರ್ಟ್ ಚಿತ್ರ
ಅರ್ಜಿ ಸಲ್ಲಿಸುವುದೆಲ್ಲಿ?
ನಾಗರಿಕ ಸೇವಾ ಕೇಂದ್ರ, ಕೃಷಿ ಇಲಾಖೆ ಕಚೇರಿ, ಪಂಚಾಯಿತಿ ಕಚೇರಿ, ರೈತ ಸಂಪರ್ಕ ಕೇಂದ್ರಗಳು, ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಕಚೇರಿ, ನಾಡ ಕಚೇರಿಗಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.