ADVERTISEMENT

ಬಗರ್‌ಹುಕುಂ: ಸಕ್ರಮಕ್ಕೆ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 19:32 IST
Last Updated 13 ಸೆಪ್ಟೆಂಬರ್ 2022, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಗರ್‌ ಹುಕುಂ ಸಾಗುವಳಿ ಮಾಡುತ್ತಿರುವ ಜಮೀನಿನ ಸಕ್ರಮಕ್ಕೆ ಮತ್ತೊಂದು ವರ್ಷ ಅವಧಿ ವಿಸ್ತರಿಸಲು ಮುಂದಾಗಿರುವ ಸರ್ಕಾರ, ಅದಕ್ಕಾಗಿ ಕಾಯ್ದೆಗೆ ತಿದ್ದುಪಡಿ ತಂದಿದೆ.

ಸರ್ಕಾರಿ ಭೂಮಿಯಲ್ಲಿ ಬಗರ್‌ ಹುಕುಂ ಸಾಗುವಳಿ ಮಾಡುತ್ತಿರುವವರು ಸಕ್ರಮಕ್ಕಾಗಿ ನಮೂನೆ–57 ರಲ್ಲಿ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ವಿಸ್ತರಿಸುವುದಕ್ಕಾಗಿ ತಂದಿರುವ ‘ಕರ್ನಾಟಕ ಭೂಕಂದಾಯ (ತಿದ್ದುಪಡಿ) ಮಸೂದೆ–2022’ ಅನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು.

ಕಂದಾಯ ಸಚಿವ ಆರ್‌.ಅಶೋಕ ಪರವಾಗಿ ಸಚಿವ ಗೋವಿಂದ ಕಾರಜೋಳ ಮಸೂದೆ ಮಂಡಿಸಿದರು. ಮೇ 26ರಂದು ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಇದೀಗ ಮಸೂದೆ ಮಂಡಿಸಲಾಗಿದೆ.

ADVERTISEMENT

2005ರ ಜನವರಿ 1ಕ್ಕೂ ಹಿಂದಿನಿಂದ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವವರು ಸಕ್ರಮಕ್ಕೆ ಅರ್ಜಿ ಸಲ್ಲಿಸಲು 2018ರ ಮಾರ್ಚ್‌ 17ರಿಂದ 2019ರ ಮಾರ್ಚ್‌ 16ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಆಗ ಲೋಕಸಭೆಯ ಚುನಾವಣೆ ಘೋಷಣೆಯಾಗಿದ್ದರಿಂದಾಗಿ 2019ರ ಮಾರ್ಚ್‌ 10ರಿಂದ ಅರ್ಜಿ ಸ್ವೀಕರಿಸಿರಲಿಲ್ಲ. ಅವಧಿಯನ್ನು ವಿಸ್ತರಿಸುವಂತೆ ಶಾಸಕರು ಮತ್ತು ಸಾರ್ವಜನಿಕರಿಂದ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯೊಳಗೆ ಮತ್ತೆ ಅವಧಿ ವಿಸ್ತರಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

ಆದ್ದರಿಂದ, ಕರ್ನಾಟಕ ಭೂಕಂದಾಯ ಅಧಿನಿಯಮ, 1964, 94ಎ ಅನ್ನು ತಿದ್ದುಪಡಿ ಮಾಡುವುದರ ಮೂಲಕ ನಮೂನೆ 57 ಅರ್ಜಿ ಸಲ್ಲಿಕೆಗೆ ಸಮಯ ವಿಸ್ತರಿಸಲು ಮಸೂದೆಗೆ ತಿದ್ದುಪಡಿ ಅಗತ್ಯವಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.