ADVERTISEMENT

ಪಿಎಸ್ಐ ನೇಮಕ ಅಕ್ರಮ: ದಾಖಲೆಗಳನ್ನು ಪ್ರಿಯಾಂಕ್ ಸಿಐಡಿಗೆ ನೀಡಲಿ- ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2022, 8:38 IST
Last Updated 23 ಏಪ್ರಿಲ್ 2022, 8:38 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಬೆಂಗಳೂರು: 'ಪಿಎಸ್ಐ ನೇಮಕಾತಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೆ ತಮ್ಮ ಬಳಿಯಿರುವ ದಾಖಲೆ ಹಾಗೂ ಮಾಹಿತಿಯನ್ನು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ‌ ಹಂಚಿಕೊಳ್ಳಬೇಕು' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ.

'ಪಿಎಸ್ಐ ನೇಮಕಾತಿಯಲ್ಲಿ‌ ನಡೆದ ಅಕ್ರಮದ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದ್ದು, ಅಕ್ರಮದಲ್ಲಿ ಭಾಗಿಯಾದವರು ಎಷ್ಟೇ ದೊಡ್ಡವರಾದರೂ ರಕ್ಷಿಸುವ ಪ್ರಶ್ನೆಯಿಲ್ಲ' ಎಂದು ಪುನರುಚ್ಚರಿಸಿದ್ದಾರೆ.

'ಈ ಅಕ್ರಮಕ್ಕೆ ಸಂಬಂಧಿಸಿದಂತೆ ಒಂದು ತಿಂಗಳ ಹಿಂದೆಯೇ ಒಂದು ಆಡಿಯೊ ಸಿಕ್ಕಿದ್ದು, ಅದನ್ನು ಅವರು ಶನಿವಾರ ಬಿಡುಗಡೆ ಮಾಡಿದ್ದಾರೆ. ಪಿಎಸ್ಐ ಅಕ್ರಮದ ಬಗ್ಗೆ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ಖರ್ಗೆಯವರು, ತಮ್ಮ ಬಳಿ ಆಡಿಯೊ ಇರುವ ಬಗ್ಗೆ ಆಗ ಮಾಹಿತಿ ನೀಡಿರಲಿಲ್ಲ. ಈಗ ಅವರ ಆಪ್ತರು ಬಂಧನವಾಗುತ್ತಿದ್ದಂತೆ ಮಾಹಿತಿ ಹೊರಹಾಕಿದ್ದಾರೆ' ಎಂದು ದೂರಿದ ಸಚಿವರು, 'ಇಷ್ಟು ದಿನ ಯಾಕೆ ಸಾಕ್ಷ್ಯವನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು ಎಂದು ಸಾರ್ವಜನಿಕರಿಗೆ ಅವರು ತಿಳಿಸಬೇಕು.ತಮ್ಮ ಬೆಂಬಲಿಗರು, ಸಿಐಡಿ ತನಿಖೆಯಲ್ಲಿ ಸಿಕ್ಕಿ ಬೀಳುವುದಿಲ್ಲ ಎಂಬ ಹುಸಿ ನಂಬಿಕೆಯೂ ಇರಬಹುದು' ಎಂದಿದ್ದಾರೆ.

ADVERTISEMENT

'ಪಿಎಸ್ಐ ಹುದ್ದೆಗಳ ಅಕ್ರಮ ನೇಮಕಾತಿ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಪ್ರಿಯಾಂಕ್ ಖರ್ಗೆ ಅವರಿಗೆ ಅಪ್ತರೆನ್ನಲಾದಅವರದೇ ಪಕ್ಷದ ನಾಯಕರನ್ನು ಬಂಧಿಸಿದ್ದಾರೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದರೂ, ಹುದ್ದೆಯಿಂದ ವಂಚಿತರಾದ ಅಭ್ಯರ್ಥಿಗಳಿಗೆ‌ ನ್ಯಾಯ ಒದಗಿಸಲು, ಸಿಐಡಿ ತನಿಖೆಗೆ ನಾನೇ ಸ್ವತಃ ಆಸಕ್ತಿ ತೋರಿಸಿ, ಮುಖ್ಯಮಂತ್ರಿ ಜತೆ ಸಮಾಲೋಚಿಸಿ, ತನಿಖೆಗೆ ಆದೇಶ ನೀಡಿದ್ದೆ. ಕಾಂಗ್ರೆಸ್ ನಾಯಕರು, ತನಿಖೆಗೆ ಸಹಕರಿಸಬೇಕು ಹಾಗೂ, ಯಾವುದೇ ರೀತಿಯರಾಜಕೀಯಲಾಭ ಅಪೇಕ್ಷೆ ಮಾಡದೆ ಅಕ್ರಮ ಎಸಗಿದವರನ್ನು ಕಾನೂನಿನ ಬಲೆಗೆ ತರಲು ಮುಂದಾಗಬೇಕು' ಎಂದೂ ಆಗ್ರಹಿಸಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.