ಕಾರವಾರ:‘ಪ್ರಾಕೃತಿಕ ವಿಕೋಪದಿಂದಾಗಿ ಈ ವರ್ಷ ಆಗಸ್ಟ್ನಿಂದ ಏಪ್ರಿಲ್ವರೆಗೆ ಮೀನುಗಾರಿಕೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಸಂಕಷ್ಟದಲ್ಲಿರುವ ಮೀನುಗಾರರಿಗೆರಾಜ್ಯ ಸರ್ಕಾರವು ಕನಿಷ್ಠ ಆರು ತಿಂಗಳಿಗೆ ಸಹಾಯದ ಪ್ಯಾಕೇಜ್ ಪ್ರಕಟಿಸಬೇಕು’ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ಗಣಪತಿ ಮಾಂಗ್ರೆ ಆಗ್ರಹಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಲವು ಚಂಡಮಾರುತಗಳ ಹಾವಳಿ ಮುಗಿಯುವಷ್ಟರಲ್ಲಿ ಕೊರೊನಾ ವೈರಸ್ ಆತಂಕ ಆವರಿಸಿದೆ. ಇನ್ನೆರಡು ತಿಂಗಳಿನಲ್ಲಿ ಮಳೆಗಾಲ ಆರಂಭವಾಗುತ್ತದೆ. ಅಲ್ಲಿಗೆ ಇಡೀ ವರ್ಷಪೂರ್ತಿ ಮೀನುಗಾರಿಕೆ ಚಟುವಟಿಕೆಗಳು ಸ್ಥಗಿತಆದಂತಾಗುತ್ತದೆ’ ಎಂದು ಬೇಸರಿಸಿದರು.
‘ಪ್ರಸ್ತುತ ಲಾಕ್ಡೌನ್ ಅವಧಿಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಅದೇ ಮಾದರಿಯಲ್ಲಿ ಮೀನುಗಾರಿಕೆಗೂ ಅವಕಾಶ ಕೊಡಬೇಕು. ಮೀನು ಮಾರಾಟ ಮಾಡುವವರು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹಾರ ನಡೆಸಲು ವ್ಯವಸ್ಥೆ ಮಾಡಬೇಕು. ಇದರಿಂದ ಬಡ ಮೀನುಗಾರರ ಕುಟುಂಬಗಳಿಗೆ ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ಮೀನುಗಾರಿಕೆ ಸಲುವಾಗಿ ಬ್ಯಾಂಕ್ಗಳಲ್ಲಿ ಮಾಡಿದ್ದ ಸಾಲದ ಕಂತುಗಳನ್ನು ಸದ್ಯಕ್ಕೆ ವಸೂಲಿ ಮಾಡದಂತೆ ಸೂಚನೆಯಿದೆ. ಆದರೆ, ಲಾಕ್ಡೌನ್ ಅವಧಿ ಮುಗಿದ ಬಳಿಕ ಮೀನುಗಾರರ ಮನೆ, ಜಮೀನು, ಆಸ್ತಿ ಮುಟ್ಟುಗೋಲು ಹಾಕುವ ಪ್ರಕರಣಗಳು ಹೆಚ್ಚು ವರದಿಯಾಗಬಹುದು.ಈ ಋತುವಿನಲ್ಲಿ ಆದಾಯವೇ ಬಾರದ ಕಾರಣ ಮೀನುಗಾರರು ಕಂತನ್ನು ಹೇಗೆ ಕಟ್ಟಲು ಸಾಧ್ಯ? ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.
‘ಈ ಹಿಂದೆ ಎಂದೂ ಕಾಣದಂತಹ ದುಃಸ್ಥಿತಿಯನ್ನು ಮೀನುಗಾರರು ಈ ವರ್ಷ ಎದುರಿಸುತ್ತಿದ್ದಾರೆ. ಆ.1ರಿಂದ ಮೀನುಗಾರಿಕಾ ಋತು ಆರಂಭವಾಗಬೇಕಿತ್ತು. ಆಗ ಚಂಡಮಾರುತದಿಂದಾಗಿ ಆ.18ರವರೆಗೆ ದೋಣಿಗಳು ಸಮುದ್ರಕ್ಕೆ ಇಳಿಯಲಿಲ್ಲ. ಸೆಪ್ಟೆಂಬರ್ನಲ್ಲಿ ಮತ್ತೆ ಚಂಡಮಾರುತ ಬೀಸಿ ಮೀನುಗಾರರು ಮನೆಗಳಲ್ಲೇ ಉಳಿದರು.ಹೆಚ್ಚು ಕಡಿಮೆ ಡಿಸೆಂಬರ್ವರೆಗೂ ಇದೇ ಪರಿಸ್ಥಿತಿಯಿದ್ದ ಕಾರಣ ಭಾರಿ ನಷ್ಟವಾಯಿತು. ಇದಕ್ಕೆ ಪರಿಹಾರ ಕೊಡುವಂತೆ ಸರ್ಕಾರಗಳನ್ನು ಕೇಳಿದರೂಪ್ರಯೋಜನವಾಗಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.